ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ, 3 ವಿಶ್ವದಾಖಲೆಯನ್ನು ನಿರ್ಮಿಸಿದ ತಿಲಕ್ ಕುಲಾಲ್ ಹಾಗೂ ಕಲಾವಿದರಾದ ರೋಹಿತ್ ನಾಯಕ್, ಅಕ್ಷಿತ್ ಕುಲಾಲ್ ಅವರು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬೃಹತ್ ಕಲಾಕೃತಿಯನ್ನು ರಚಿಸಿದರು.
ಇತ್ತೀಚಿಗಷ್ಟೇ ಅಕ್ಕಿ ಹಾಗೂ ಇದ್ದಿಲು ಬಳಸಿ ಆದಿ ಯೋಗಿಯ ಕಲಾಕೃತಿ ರಚಿಸಿ ಪ್ರಸಿದ್ಧಿ ಪಡೆದಿದ್ದ ಇವರು, ಈ ಬಾರಿ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ 30x30 ಅಡಿ ಅಳತೆಯ ಕಲಾಕೃತಿ ನಿರ್ಮಿಸಿದ್ದಾರೆ.
ಸುಮಾರು 3 ಗಂಟೆ ಸಮಯದಲ್ಲಿ 80 ಕೆಜಿ ಇದ್ದಿಲು, 90 ಕೆಜಿ ಮರಳು ಹಾಗೂ ರಂಗೋಲಿ ಹುಡಿಯನ್ನು ಬಳಸಿ ಈ ಕಲಾಕೃತಿಯನ್ನು ನಿರ್ಮಿಸಲಾಯಿತು. ಕನ್ನಡದ ಮಹತ್ವ ಸಾರುವ ಹಳದಿ ಕೆಂಪು ಬಣ್ಣದ ಬಾವುಟವನ್ನು ಚಿತ್ರಿಸಿದ್ದು ಕಲಾಕೃತಿಯನ್ನು ಇನ್ನಷ್ಟು ಆಕರ್ಷಕಗೊಳಿಸಿತ್ತು. ಇಂದಿನಿಂದ ಮೂರು ದಿನಗಳ ಕಾಲ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ.
ಕಲಾವಿದರ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಸಹಕಾರ ನೀಡಿದ್ದಾರೆ. ಮೂಡುಬಿದಿರೆ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಸುಧೀರ್, ಕಲಾಕೃತಿಯನ್ನು ವೀಕ್ಷಿಸಿ ಶ್ಲಾಘಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ