ವಿಶ್ವ ಮಾತೃಭಾಷಾ ದಿನ
ಕೇವಲ ನೂರು ವರುಷಗಳಲ್ಲಿ ಜಗತ್ತಿನ ಸುಮಾರು ಮೂರು ಸಾವಿರದಷ್ಟು ಪ್ರಾದೇಶಿಕ ಭಾಷೆಗಳು ಕಣ್ಮರೆಯಾಗಿವೆಯೆಂದೂ ಇನ್ನು ಕಣ್ಮರೆಯಾಗಲು ತಯಾರಾಗಿ ನಿಂತಿರುವ ಭಾಷೆಗಳು ಸರದಿ ಸಾಲಲ್ಲಿವೆಯೆಂದೂ ಅಧ್ಯಯನಗಳು ತಿಳಿಸುತ್ತವೆ; ಮಾತೃಭಾಷೆಗಳ ಪ್ರಸರಣವನ್ನು ಉತ್ತೇಜಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ವಿಶ್ವಸಂಸ್ಥೆ ಘೋಷಿಸಿದೆ.
ಹಾಗಾದರೆ ಭಾಷೆ, ಸಂಸ್ಕೃತಿಯ ಈ ವಿನಾಶಕ್ಕೆ ಯಾರು ಕಾರಣ..?
ಮಾತೆಗೂ ಮಾತೃಭಾಷೆಗೂ ವ್ಯತ್ಯಾಸವಿಲ್ಲವೆಂಬುದು ಭಾರತೀಯ ಪರಿಕಲ್ಪನೆ. ಎರಡೂ ನಮ್ಮ ಗುಣವನ್ನು, ಬದುಕನ್ನು, ಸಂಸ್ಕೃತಿಯನ್ನು ರೂಪಿಸುವ ಮಹಾಶಕ್ತಿಗಳು. ಇವೆರಡು ಅದ್ವಿತೀಯ, ಅನಂತ, ಅನನ್ಯ. ಆದರೆ ಇಂದು ಕಾಲಮಿಂಚಿದೆ.
ಪ್ರತಿಮನುಷ್ಯನೂ ವ್ಯಾವಹಾರಿಕತೆಯ ಗಾಜಿನಗೋಪುರದಲ್ಲಿ ಕನಸುಗಳನ್ನು ಹೆಣೆಯುವ ಭರಾಟೆಯಲ್ಲಿದ್ದಾನೆ. ಕೆಲವರು ಇಂತಹ ಗಗನಹಕ್ಕಿಯ ಬೆನ್ನೇರಿ ಸಾಗಲು ತಾಯಿಯನ್ನು, ತಾಯಿನುಡಿಯನ್ನು ಬಿಟ್ಟೇಬಿಡುತ್ತಾರೆ; ಅವರಿಗೆ ಪರತಾಯಿಯ ಸೀರೆಯ ಸೊಗಸು ಪರಭಾಷೆಯ ವ್ಯಾಪನದ ಆಡಂಬರ ಚೆಂದವಾಗಿ ಕಾಣುತ್ತದೆ. ತನ್ನ ಈಗಿನ ಬೆಳವಣಿಗೆಗೆ ಆಶ್ರಯವಾದ ಸ್ವಂತ ತಾಯಿಮಡಿಲು ಈಗ ಅದೇಕೊ ಕಾಣುವಾಗಲೆಲ್ಲ ಹೇಸಿಗೆಯಾಗುತ್ತದೆ; ಅದೇ ತಾಯಿನುಡಿಯ ಬಲದಿಂದ, ವಾತ್ಸಲ್ಯದಿಂದ ದೊರಕಿದ ಸ್ವಂತ ಕಿಸೆಯ ಹಣದ ಝಣಝಣದ ಸ್ವನಕ್ಕೆ ಅನ್ಯವು ಮಾನ್ಯವಾಗುತ್ತದೆ. ಜನ್ಯವು ಶೂನ್ಯವೆನಿಸುತ್ತದೆ.
ತನ್ನ ತಾಯಿಭಾಷೆಯನ್ನು ಅಥವಾ ತನಗೆ ಮಾತೃಭಾಷೆಯಂತೆ ಇರುವ ತನ್ನ ಪ್ರಾದೇಶಿಕ ಭಾಷೆಯನ್ನು ತನ್ನ ಬದುಕಿನ ನಿತ್ಯನಡೆಯಲ್ಲಿ ಎಲ್ಲದರಲ್ಲೂ ರೂಢಿಸಿಕೊಂಡವನಿಗೆ ಮಾತ್ರ ಅದರ ಬಗ್ಗೆ ಮಾತನಾಡುವ, ಬೋಧಿಸುವ ಹಾಗೂ ಅದರ ಬಗ್ಗೆ ಬರೆಯುವ ನೈತಿಕ ಹಕ್ಕು ಇರುತ್ತದೆ. ಆದರೆ ಇಂದು ಬಹುತೇಕರ ಸ್ಥಿತಿ ಹಾಗಿಲ್ಲ ಎಂಬುದು ನಿತ್ಯಸತ್ಯವಾಗುತ್ತಿದೆ.
ತಾಯಿ ವೃದ್ಧಾಶ್ರಮದಲ್ಲಿರುತ್ತಾರೆ ಆದರೆ ತಾಯಿಯ ಬಗ್ಗೆ ಆತ ಬರೆದ ಕವಿತೆಗೋ ಪ್ರಬಂಧಕ್ಕೋ ಆತನಿಗೆ ಪ್ರಶಸ್ತಿ ಬಂದಿರುತ್ತದೆ. ತಾಯಿನುಡಿಯಲ್ಲಿ ಕೆಲಸ ಮಾಡಿದವರ ಬಗ್ಗೆ, ಅದರ ರಚನಾತ್ಮಕ ವಿಷಯ ವಿಚಾರಗಳ ಬಗ್ಗೆ ವಿವರಿಸುತ್ತಾ, ಬೋಧಿಸುತ್ತಾ ಇರುತ್ತಾನೆ ಆದರೆ ತನ್ನ ಮನೆಯ ಮಕ್ಕಳನ್ನು ಹೊರಭಾಷೆಯ ಗರ್ದಿಗಮ್ಮತ್ತಿನ ತೊಟ್ಟಿಲಲ್ಲಿ ಮಲಗಿಸಿ ಅವುಗಳ ಬೆಳವಣಿಗೆಯ ಚೆಂದ ನೋಡುತ್ತಿರುತ್ತಾನೆ.
ತಾಯಿ ಮತ್ತು ತಾಯಿನುಡಿ ಭಾವನಾತ್ಮಕ ವಿಷಯದ ಸರಕುವಸ್ತುವಾಗಿ ಇಂದು ನಮ್ಮ ಮನೆಯ ಭಿತ್ತಿಯ ಗಾಜಿನ ಚೌಕಟ್ಟಿನ ಗೂಡೊಳಗೆ ಆಲಂಕಾರಿಕ ಸರಕುಗಳ ಮಧ್ಯೆ ನಗುತ್ತಾ ಇರಬೇಕೆಂಬ ಹಂಬಲ ನಮ್ಮದು. ಇವೆರಡೂ ನಮ್ಮನ್ನು ಸದಾ ಹರಸುತ್ತಾ ಇರಬೇಕು; ನಮ್ಮ ಹೆಸರು, ಕೀರ್ತಿ, ಪ್ರತಿಷ್ಠೆ, ಭಡ್ತಿ, ಗೌರವ, ಸಂಪತ್ತುಗಳಿಗೆಲ್ಲ ಈ ಎರಡು ಕಾರಣವಾದುದನ್ನು ಒಪ್ಪಿಕೊಳ್ಳಲು ಅದೇಕೋ ಈಗ ಕೊಂಚ ಆತಂಕ; ಇರಿಸುಮುರಿಸು...!
ಅಂದರೆ ಅವು ನಾವಿರಿಸಿದ ಗಾಜಿನ ಗೂಡೊಳಗಿನಿಂದ ಹೊರಬರಬಾರದು. ನಮ್ಮ ಮಕ್ಕಳ ಕೈಗಳಿಗಂತೂ ಇವು ಸಿಗಲೇಬಾರದು...! ಮಾತ್ರವಲ್ಲ, ನಾವು ಹೀಗೆಂದು ಯಾರೂ ನಮ್ಮತ್ತ ಬೆರಳು ಮಾಡಲೂಬಾರದು.. !
ತಿರುಗಿ ಒಮ್ಮೆ ನೋಡಿದರೆ ತಾಯಿಗಾಗಿ, ತಾಯ್ನಾಡಿಗಾಗಿ ಪ್ರಾಣಾರ್ಪಣೆ ಮಾಡಿದವರಲ್ಲಿ ಅವಿದ್ಯಾವಂತರ ಪಾಲು ಕಡಿಮೆಯಲ್ಲ; ತಾಯಿಯಂತೆ, ತಾಯ್ನಾಡಿನಂತೆ, ತಾಯಿನುಡಿಗಾಗಿ ಜೀವದಾನ ಮಾಡಿದ ಅವಿದ್ಯಾವಂತರ ಮತ್ತು ವಿದ್ಯಾರ್ಥಿಗಳ ಪಾಲು ಇದೆ.
ವಾಸ್ತವ ಸ್ಥಿತಿ ಹೀಗಿರಬೇಕಾದರೆ ಆಧುನಿಕ ಕಾಲದ ವಿದ್ಯಾವಂತರಾದ ನಮ್ಮ ನಿಲುವುಗಳು ಯಾಕೆ ಹೀಗೆ...!?
ಹೌದು...! ಇಂದು ಮಾತೃಭಾಷೆಗಾಗಿ ಬಲಿದಾನರಾದವರನ್ನು ಸ್ಮರಿಸುವ ದಿನ. ಆ ಚೇತನಗಳಿಗಾಗಿ ಮಿಡಿಯೋಣ;
ಅವರನ್ನು ಸ್ಮರಿಸೋಣ. ದಿನದ ಶುಭಾಶಯವನ್ನು ಹಂಚುವ ಮೊದಲು, ಸ್ಟೇಟಸ್ ಹಾಕುವ ಮೊದಲು ನಾವು ನಮ್ಮೊಳಗೆ ಒಂದು ನಿಮಿಷ ಆತ್ಮಾವಲೋಕನ ಮಾಡಿಕೊಳ್ಳೋಣ.
***
-ರತ್ನಾಕರ ಮಲ್ಲಮೂಲೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ