ಮಂಗಳೂರು: ನವೋದಯ ಕಾಲಘಟ್ಟದಲ್ಲಿ ಸಾಹಿತ್ಯ ರಚಿಸಿದ ಸಾಹಿತಿಗಳಿಗೆ ಎಲ್ಲರೂ ಕನ್ನಡ ಓದುವಂತಹ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಇತ್ತು. ಅದರಂತೆ ಮುಂಚೂಣಿಯಲ್ಲಿ ನಿಂತು ಸಾಹಿತ್ಯ ಸೃಷ್ಟಿ ಮಾಡಿದ ಕುವೆಂಪು ಅವರು ಜನಸಾಮಾನ್ಯರು ಕೂಡ ಓದುವಂತಹ ರಸಭರಿತ ಸಾಹಿತ್ಯ ಸೃಷ್ಟಿ ಮಾಡಿದರು. ಜ್ಞಾನಪೀಠ ಪ್ರಶಸ್ತಿ ಪಡೆದ ಅವರ ’ಶ್ರೀರಾಮಾಯಣದರ್ಶನಂ’ ಮಹಾಕಾವ್ಯ ಹೊಸ ದೃಷ್ಟಿಕೋನದಿಂದ ಓದುಗರನ್ನು ಸೆಳೆಯಿತು. ಅವರ ರಚನೆಗಳೆಲ್ಲ ಸರಳ ಕನ್ನಡದ ಸುಂದರ ಸೃಷ್ಟಿ ಎಂದು ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿದರು.
ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ - ಕಾವ್ಯ- ಸಾಹಿತ್ಯ ಪರಂಪರೆ ಮಾಲಿಕೆಯಡಿ ಮೊದಲ ಕಾರ್ಯಕ್ರಮ ರಸಋಷಿ ಕುವೆಂಪು ಅವರ ಸಾಹಿತ್ಯಾವಲೋಕನ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ ಮಾತನಾಡಿ, ಯುವಜನರಿಗೆ ಅದರಲ್ಲೂ ವಿದ್ಯಾರ್ಥಿ ಸಮೂಹಕ್ಕೆ ಭಾಷೆ, ಸಾಹಿತ್ಯದ ಅರಿವು ಮೂಡಿಸುವ ಉದ್ದೇಶದಿಂದ ಈ ಮಾಲಿಕೆ ಕಾರ್ಯಕ್ರಮ ಆರಂಭಿಸಲಾಗಿದ್ದು ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಮೈಕಲ್ ಸಾಂತುಮಾಯೊರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಬೆಳ್ತಂಗಡಿ, ಮಂಗಳೂರು ತಾಲೂಕ ಘಟಕದ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್, ಅರುಣಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಸೌಮ್ಯ ಕೋಟ್ಯಾನ್ ಸ್ವಾಗತಿಸಿದರು. ಕ.ಸಾ.ಪ. ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ಎಚ್ ವಂದಿಸಿದರು. ವಿದ್ಯಾರ್ಥಿನಿ ಫೆವಿಟ ಲೋಬೊ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ