ಸಮಯ ಒಬ್ಬ ಒಳ್ಳೆಯ ಜೊತೆಗಾರ, ಗೆಳೆಯನೇ ಆಗಿರಬಹುದು. ಆದರೆ ನಾವು ಹೇಳಿದ ಹಾಗೆ ನಡೆಯುವ ಸ್ನೇಹಿತನಲ್ಲ. ಎಂದಿಗೂ ನಮ್ಮನ್ನು ಕಾಯುವ ವ್ಯಕ್ತಿಯಲ್ಲ. ಅವನು ಒಬ್ಬ ಸ್ವಾರ್ಥಿ. ನಮಗೆ ಬೇಕಾದಾಗ ನಮ್ಮ ಜೊತೆ ಇರದೆ ದಾರಿ ಮಧ್ಯದಲ್ಲಿ ಕೈ ಕೊಡುವಾತ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಒಂದರ ಮೇಲೆ ಒಂದು ಕಷ್ಟ ಎದುರಾದಾಗ ಸಮಯವಾದರೂ ನಮ್ಮ ಜೊತೆ ಇದ್ದಾನೆ ಎಂದು ಭಾವಿಸಿ ಹಿಂದಿರುಗಿ ನೋಡಿದರೆ ಅವನು ಎಷ್ಟೋ ದೂರ ತಲುಪಿರುತ್ತಾನೆ. ಇನ್ನಷ್ಟು ಕಷ್ಟ ಎದುರಾಗಲು ಕಾರಣವಾಗುತ್ತಾನೆ. ಅವನಿಗೆ ಬೇರೆಯವರ ಭಾವನೆಗಳು ಅರ್ಥವಾಗುವುದಿಲ್ಲ.
ಯಾವುದೇ ಕಷ್ಟ ಎದುರಾದಾಗ, ನಮ್ಮಲ್ಲಿ ಇನ್ನು ಹೆಚ್ಚು ಹೊತ್ತು ಇಲ್ಲ ಎಂದಾಗ ಮೊದಲಿಗೆ ಬರುವ ಮಾತು "ಹೇ ಗಡಿಯಾರವೇ ಸ್ವಲ್ಪ ಹೊತ್ತು ನಿಲ್ಲಬಾರದೆ". ಗಡಿಯಾರ ನಿಂತರೆ ಏನು ಪ್ರಯೋಜನ ಸಮಯ ನಿಲ್ಲುವುದಿಲ್ಲ ಅಲ್ವಾ. ಒಂದು ಬಾರಿ ನಾವು ನಮ್ಮ ಅವಕಾಶ. ಸಂದರ್ಭವನ್ನು ಕಳೆದುಕೊಂಡರೆ ಆ ಸಂದರ್ಭ ಮತ್ತೆ ಎಂದಿಗೂ ಸಿಗಲಾರದು. ಅದರ ಬಗ್ಗೆ ಯೋಚಿಸುತ್ತ ಕುಳಿತರೆ ಸಮಯವು ಇನ್ನೂ ಮುಂದಕ್ಕೆ ಚಲಿಸಿ ನಮ್ಮನ್ನು ಸೋಲಿಸುತ್ತಾನೆ.
ಸಮಯವನ್ನು ಹಿಡಿದು ಬಯ್ಯೋಣ ಅಂದರೆ ಕೈಗೆ ಸಿಗುವುದಿಲ್ಲ. ಅವನ ಮೇಲಿನ ಕೋಪವನ್ನು ಇನ್ನಾವುದಾದರೂ ವಸ್ತುವಿನ ಮೇಲೆ ತೋರಿಸಿದರೆ ಅಲ್ಲಿ ಒಂದು ಸಮಸ್ಯೆ ಉದ್ಭವಿಸುತ್ತದೆ. ಒಂದರ ಮೇಲೊಂದು ಸಮಸ್ಯೆ ಎದುರಾಗುತ್ತಲೇ ಹೋಗುತ್ತದೆ. ಆದರೆ ಸಮಯವು ತನ್ನ ಮನಸ್ಸನ್ನು ಬದಲಾಯಿಸಿ ಸಮಾಧಾನಿಸಲು ಬರನು. ನಮ್ಮ ಸಮಸ್ಯೆ, ನೋವನ್ನು ಕಡಿಮೆ ಸಮಯದಲ್ಲಿ ಬಗೆಹರಿಸುವುದಾದರೆ ಮಾತ್ರ ನಾವು ಮುಂದೆ ಬರಬಹುದು ಅಷ್ಟೆ ಅದಲ್ಲದೆ ನನಗೆ ಸಮಯ ಸಿಗುತ್ತಿಲ್ಲ ಎಂದು ಕುಳಿತರೆ ಯಶಸ್ವಿಯಾಗಲು ಸಾಧ್ಯವಿಲ್ಲ.
ಸಮಯವು ಸ್ವಾರ್ಥಿಯಾದರೂ ಸಹ ಒಳ್ಳೆಯ ನೀತಿಯನ್ನು ತಿಳಿಸುತ್ತದೆ. ಎಲ್ಲರೂ ತನ್ನ ಜೊತೆಗೆ ನಡೆಯಬೇಕು ಎಂಬ ಆಶಯ ಅದರದ್ದಾದರೆ ಅರ್ಥಮಾಡಿಕೊಳ್ಳುವ ನಾವುಗಳು ಬುದ್ದಿ ಉಪಯೋಗಿಸಿ ಯೋಚಿಸುವುದಿಲ್ಲ ಎಂದರ್ಥ. ಅದರ ಸ್ಥಾನದಲ್ಲಿ ನಿಂತು ನೋಡಿದರೆ ನಮ್ಮ ಆಲೋಚನೆಯನ್ನು ಬದಲಾಯಿಸಬೇಕು ಎಂಬುದನ್ನು ಅರಿತುಕೊಳ್ಳಬೇಕು.
-ರಕ್ಷಿತಾ ಎ ಜಿ ಅನ್ನಡ್ಕ
ವಿವೇಕಾನಂದ ಕಾಲೇಜು
ಪುತ್ತೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ