ಸಮುದಾಯದೊಂದಿಗಿನ ಸಂಬಂಧ ವೃದ್ಧಿಸಲು ಗರಿಷ್ಠ ಪ್ರಯತ್ನ
ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ಕಾಯಿಲೆ ತಪಾಸಣೆ ಹಾಗೂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಕುಲಪತಿಗಳು
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಸಮುದಾಯವನ್ನು ತಲುಪಲು, ಸಮುದಾಯ ವಿಶ್ವವಿದ್ಯಾನಿಲಯದತ್ತ ಬರುವಂತಾಗಲು ಗರಿಷ್ಠ ಪ್ರಯತ್ನ ನಡೆಸಲಾಗುತ್ತಿದೆ. ಎಲ್ಲರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುವ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಮುಡಿಪುವಿನ ಜನ ಶಿಕ್ಷಣ ಟ್ರಸ್ಟ್ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕ, ಮಂಗಳೂರು ವಿಶ್ವವಿದ್ಯಾನಿಲಯದ ʼಮಂಗಳಗ್ರಾಮʼ ದತ್ತು ಯೋಜನೆ, ಯುವ ರೆಡ್ ಕ್ರಾಸ್ ಘಟಕ, ಎನ್ಎಸ್ಎಸ್, ಯೆನೆಪೋಯ ವಿಶ್ವವಿದ್ಯಾನಿಲಯ ಹಾಗೂ ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ಕಾಯಿಲೆ ತಪಾಸಣೆ ಹಾಗೂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಾರೀರಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಆರೋಗ್ಯದ ಜೊತೆಗೆ ಆಧ್ಯಾತ್ಮಿಕ ಆರೋಗ್ಯವೂ ಮುಖ್ಯ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಧರ್ಮವೂ ಹೌದು, ಎಂದರು.
ತಮ್ಮ ಸಂಸ್ಥೆಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಕ್ಕೆ ಮಂಗಳೂರು ವಿವಿ ನೀಡುತ್ತಿರುವ ಬೆಂಬಲವನ್ನು ನೆನೆದ ಯೆನೆಪೋಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಎಂ. ವಿಜಯ್ ಕುಮಾರ್, ಕಾರ್ಯಕ್ರಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು 4,000 ಎನ್ಎಸ್ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯ ಸೇವೆ ಗಮನಿಸಿ ಟಾಟಾ ಟ್ರಸ್ಟ್ ಮುಂಬೈ, ಮಂಗಳೂರು ನಗರದಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡಿದ್ದು ಮುಂದಿನ ತಿಂಗಳಿಂದ ಕಾರ್ಯನಿರ್ವಹಣೆ ಆರಂಭಿಸಲಿದೆ, ಎಂದರು.
ಮಹಾತ್ಮ ಗಾಂಧಿ ನರೇಗಾ ನಿರ್ದೇಶಕ ಎನ್. ಶೀನ ಶೆಟ್ಟಿ ಮಾತನಾಡಿ, ಜಲಸಾಕ್ಷರತೆ, ಸ್ವಚ್ಛತೆಗೆ ಆಧ್ಯತೆ ನೀಡದಿದ್ದರೆ ಸಂಪೂರ್ಣ ಆರೋಗ್ಯ ಸಾಧಿಸುವುದು ಕಷ್ಟ, ಎಂದರಲ್ಲದೆ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಸಿ.ಎ. ಶಾಂತರಾಮ ಶೆಟ್ಟಿ, ಕ್ಯಾನ್ಸರ್ ಪರೀಕ್ಷೆಗೆ ಹಿಂಜರಿಕೆ ಬೇಡ. ರೋಗ ಬೇಗ ಪತ್ತೆಯಾದರೆ ಬದುಕುವ ಸಾಧ್ಯತೆ ಹೆಚ್ಚು ಎಂದರಲ್ಲದೆ, ರೆಡ್ ಕ್ರಾಸ್ ಗೆ ಮಂಗಳೂರು ವಿವಿ ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿದರು. ಇದೇ ವೇಳೆ ಅವರು, ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಪೂರೈಸುವ ತಮ್ಮ ಮುಂದಿನ ಯೋಜನೆಯನ್ನು ಬಿಚ್ಚಿಟ್ಟರು.
ಜನ ಶಿಕ್ಷಣ ಟ್ರಸ್ಟ್ ಸಹ ನಿರ್ದೇಶಕ ಕೃಷ್ಣ ಮೂಲ್ಯ, ಮಂಗಳ- ಗ್ರಾಮ ದತ್ತು ಯೋಜನೆ ಸಂಯೋಜಕ ಪ್ರಶಾಂತ ನಾಯ್ಕ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಗೋವಿಂದರಾಜು ಬಿ ಎಂ, ಯೆನೆಪೋಯ ನರ್ಸಿಂಗ್ ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ನಿತ್ಯಾಶ್ರೀ ಬಿ ವಿ, ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಲೀನಾ ಕೆ. ಸಿ ಮೊದಲಾದವರು ಉಪಸ್ಥಿತರಿದ್ದರು. ರೆಡ್ ಕ್ರಾಸ್ ಜಿಲ್ಲಾ ಉಪಸಮಿತಿ ನಿರ್ದೇಶಕ ಸಚೇತ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಪರಮೇಶ್ವರ ಸ್ವಾಗತಿಸಿದರು. ವಿವಿಯ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಧನ್ಯವಾದ ಸಮರ್ಪಿಸಿದರು.
ಯೆನೆಪೋಯ ವೈದ್ಯಕೀಯ ಕಾಲೇಜಿನ ಸಮುದಾಯ ಕ್ಯಾನ್ಸರ್ ರೋಗ ತಜ್ಞ ಡಾ. ಇಬ್ರಾಹಿಂ ನಾಗನೂರ್, ಯೆನೆಪೋಯ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ಕ್ಯಾನ್ಸರ್ ತಜ್ಞ ಡಾ. ಮರಿಯಮ್ ಅಂಜುಮ್ ಇಪ್ತಿಕಾರ್ ಮತ್ತು ಇನ್ನಿತರ ತಜ್ಞ ವೈದ್ಯರ ತಂಡ ಕ್ಯಾನ್ಸರ್ ಹಾಗೂ ಇತರ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಸಿಕೊಟ್ಟಿತು. ನೂರಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು. ಕಾರ್ಯಕ್ರಮದ ನೆನಪಿಗಾಗಿ ಟ್ರಸ್ಟ್ನ ಆವರಣದಲ್ಲಿ ಗಿಡ ನೆಡಲಾಯಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ