ಪಣಜಿ: ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಗೋವಾದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆಗ ಗೋವಾದಲ್ಲಿ ದಿಗಂಬರ್ ಕಾಮತ್ ಮತ್ತು ದೇಶದಲ್ಲಿ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದರು. ಗಣಿ ಉದ್ಯಮ ಮುಚ್ಚಲು ಕಾಂಗ್ರೆಸ್ ಕಾರಣ ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಗೋವಾ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಗೋವಾ ಉಸ್ತುವಾರಿ ಸಿ.ಟಿ ರವಿ ಆಗ್ರಹಿಸಿದ್ದಾರೆ.
ಪಣಜಿಯಲ್ಲಿ ಕರೆದಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ಕಾಂಗ್ರೆಸ್ ಪಕ್ಷವು ಕಳೆದ 60 ವರ್ಷಗಳಲ್ಲಿ ಮಾಡದ ಕೆಲಸವನ್ನು ಬಿಜೆಪಿ ಇಂದು ಮಾಡಿದೆ. ಬಿಜೆಪಿಯು ಹೇಳಿದ್ದನ್ನು ಮಾಡುತ್ತದೆ. ಈ ಹಿಂದೆ ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಇದರ ರಿಪೋರ್ಟ್ ಕಾರ್ಡ್ ಜನತೆಯ ಮುಂದಿಟ್ಟಿದ್ದೇವೆ ಎಂದು ಸಿ.ಟಿ ರವಿ ಹೇಳಿದರು.
ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ನಿಧನದ ನಂತರ ಪಕ್ಷವು ರಾಜ್ಯದ ಜವಾಬ್ದಾರಿಯನ್ನು ಡಾ. ಪ್ರಮೋದ ಸಾವಂತ್ ರವರ ಹೆಗಲ ಮೇಲೆ ಹೊರಿಸಲಾಗಿತ್ತು. ಸಿಎಂ ಸಾವಂತ್ ಕಡಿಮೆ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅತ್ಯಂತ ಕಷ್ಟಕರವಾದ ಸಾಂಕ್ರಾಮಿಕ ಸಮಯದಲ್ಲೂ ಅವರ ದಕ್ಷತೆಯನ್ನು ತೋರಿಸಿದರು. ಅವರ ನೇತೃತ್ವದಲ್ಲಿ ನಾವು ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಸಿಟಿ ರವಿ ಹೇಳಿದರು.
ಎಎಪಿ ಮತ್ತು ಟಿಎಂಸಿ ಈ ಎರಡೂ ಬಿಜೆಪಿ ದ್ವೇಷಿಗಳು. ಅಘೋಷಿತ ಭರವಸೆಗಳನ್ನು ನೀಡಿ ಜನರನ್ನು ವಂಚಿಸಿದ್ದಾರೆ. ವಿರೋಧಿಗಳು ಅಭಿವೃದ್ಧಿಯನ್ನು ತೆರೆದ ಕಣ್ಣಿಂದ ನೋಡಬೇಕು ನಂತರ ಮಾತನಾಡಬೇಕು. ನಾವು ಮಾಡಿರುವ ಅಭಿವೃದ್ಧಿ ವಿರೋಧಿಗಳಿಗೆ ಕಾಣುತ್ತಿಲ್ಲ ಎಂದರೆ ಅವರು ಕಣ್ಣು ಪರೀಕ್ಷಿಸಿಕೊಳ್ಳಬೇಕು ಎಂದು ಸಿಟಿ ರವಿ ಟೀಕಾಪ್ರಹಾರ ನಡೆಸಿದರು.
ರಾಹುಲ್ ಗಾಂಧಿ ಯಾವುದೇ ವಿಷಯವನ್ನು ಅಧ್ಯಯನ ಮಾಡುವುದಿಲ್ಲ. ಅವರ ಕಾಲದಲ್ಲಿ ರಾಜ್ಯದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು ಎಂಬುದನ್ನು ಅವರು ಅನುಕೂಲಕರವಾಗಿ ಮರೆತಿದ್ದಾರೆ. ಪರಿಸರದ ಬಗ್ಗೆ ನಮಗೂ ಅರಿವಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಿದ್ದೇವೆ ಎಂದು ಸಿ.ಟಿ ರವಿ ಹೇಳಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ