ಮೂಡುಬಿದಿರೆ: ಜೀವನದ ಪ್ರತೀ ಹಂತದಲ್ಲೂ ಹಣದ ಅವಶ್ಯಕತೆ ಇದೆ. ಲೆಕ್ಕಾಚಾರದಿಂದ ಹಣ ವ್ಯಯಿಸಿದರೆ ಜೀವನ ಸುಗಮವಾಗುತ್ತದೆ ಎಂದು ಮಂಗಳೂರಿನ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಲತೇಶ್.ಬಿ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮಂಗಳೂರಿನ ನೆಹರು ಯುವ ಕೇಂದ್ರ, ಅಚರಕಟ್ಟೆಯ ಜ್ಞಾನೋದಯ ಯುವಕ ಸಂಘ (ರಿ) ಹಾಗೂ ಆಳ್ವಾಸ್ನ ಸಮಾಜ ಕಾರ್ಯ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ವೈಯಕ್ತಿಕ ಸಂಪರ್ಕ ಮತ್ತು ಅನುಕೂಲ ಅಭಿಯಾನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಗಳ ಬಗ್ಗೆ ಪ್ರತೀ ನಾಗರಿಕನಿಗೂ ಸಮರ್ಪಕ ಮಾಹಿತಿ ಇರಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲಿ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅವರು ಮಾತನಾಡಿ ಆರ್ಥಿಕ ಸಾಕ್ಷರತೆಯು, ಸಂಪನ್ಮೂಲ ಸಾಕ್ಷರತೆಗಿಂತ ವಿಭಿನ್ನ. ಎಲ್ಲರೂ ಆರ್ಥಿಕ ಸಾಕ್ಷರತೆಯ ಜೊತೆಗೂ, ಸಂಪನ್ಮೂಲ ಸಾಕ್ಷರತೆಯ ಜ್ಞಾನವನ್ನು ಹೊಂದಬೇಕು. ಈ ಮೂಲಕ ರೂಪಿಸುವ ಕಾರ್ಯತಂತ್ರದ ಯೋಜನೆಗಳು ದೀರ್ಘಕಾಲ ಉಳಿಯುತ್ತದೆ ಎಂದು ಹೇಳಿದರು.
ನೆಹರು ಯುವಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ಪೇಟೆ, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಡಾ. ಶರ್ಲಿ ಟಿ ಬಾಬು, ಪದವಿ ವಿಭಾಗ ಮುಖ್ಯಸ್ಥೆ ಡಾ. ಮದುಮಾಲ ಉಪಸ್ಥಿತರಿದ್ದರು. ವಿದ್ಯಾರ್ಥಿ ಪುನೀತ್ ಪಿ.ಆರ್ ಸ್ವಾಗತಿಸಿ, ಜಗಧೀಶ್ ವಂದಿಸಿ, ಶುಭ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ