|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ ಬಸದಿಯಲ್ಲಿ ಯುಗಲ ಮುನಿಗಳ ಮಂಗಳ ಪ್ರವಚನ

ಬೆಳ್ತಂಗಡಿ ಬಸದಿಯಲ್ಲಿ ಯುಗಲ ಮುನಿಗಳ ಮಂಗಳ ಪ್ರವಚನ

 

ಉಜಿರೆ: ಭವ್ಯವಾದ ನಮ್ಮ ಪ್ರಾಚೀನ ಪರಂಪರೆಯನ್ನು ಮರೆಯಬಾರದು. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಶ್ರವಣಬೆಳಗೊಳದಲ್ಲಿ ಉತ್ತಮ ಆರಾಧನಾ ವಿಧಾನ ಅನುಸರಿಸುತ್ತಿದ್ದಾರೆ. ಒಳ್ಳೆಯ ಪರಂಪರೆಯೂ ಇದೆ. ಇಂದು ಜನರಲ್ಲಿ ಶ್ರದ್ಧಾ-ಭಕ್ತಿ, ಧರ್ಮಜಾಗೃತಿ ಹಾಗೂ ಧರ್ಮ ಪ್ರಭಾವನೆ ಕಡಿಮೆಯಾಗುತ್ತಿದೆ. ಸಮೂಹ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯಿಂದ ಮಿಥ್ಯಾತ್ವಕ್ಕೆ ಬಲಿಯಾಗಬಾರದು ಎಂದು ಪೂಜ್ಯ ಅಮೋಘಕೀರ್ತಿ ಮುನಿಮಹಾರಾಜರು ಹೇಳಿದರು. ಶಾಸನದೇವತೆಗಳು ಹಾಗೂ ಯಕ್ಷ-ಯಕ್ಷಿಯರ ಆರಾಧನೆ ಮಾಡಬಾರದು ಎಂದು ಕೆಲವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ವಿಷಾದಿಸಿದರು.


ಅವರು ಭಾನುವಾರ ಬೆಳ್ತಂಗಡಿಯಲ್ಲಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಮಂಗಲ ಪ್ರವಚನ ನೀಡಿದರು.


ಇಂದು ನಿಜವಾದ ಜ್ಞಾನಿಗಳು ಹಾಗೂ ವಿದ್ವಾಂಸರು ಸಿಗುವುದಿಲ್ಲ. ಕೆಲವು ವಾಹಿನಿಗಳಲ್ಲಿ ಹಾಗೂ ಮಾಧ್ಯಗಳಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಇದರಿಂದಾಗಿ ಅನೇಕ ಮಂದಿ ಮಿಥ್ಯಾತ್ವಕ್ಕೆ ಬಲಿಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಕೆ ನೀಡಿದರು. ಜೈನ ಧರ್ಮವು ಅತ್ಯಂತ ಸರಳವೂ, ಅತ್ಯಂತ ಕಠಿಣವೂ ಆಗಿದೆ.


ಮಕ್ಕಳು ಕೇಳುವ ಕುತೂಹಲದ ಪ್ರಶ್ನೆಗಳಿಗೆ ಗುರು-ಹಿರಿಯರು ಸಮರ್ಪಕ ಉತ್ತರ ನೀಡಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು. ರತ್ನತ್ರಯ ಧರ್ಮವಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯ ಪ್ರಾಪ್ತಿಯೇ ಜೀವನದ ಮುಖ್ಯ ಗುರಿಯಾಗಬೇಕು.


ದಕ್ಷಿಣ ಭಾರತದ ಬಸದಿಗಳ ನಿರ್ವಹಣೆ ಮತ್ತು ವೈಭವವನ್ನು ನೋಡಿ ಉತ್ತರ ಭಾರತದ ಮುನಿಗಳಿಗೆ ಆಶ್ಚರ್ಯವೂ, ಅತೀವ ಸಂತೋಷವೂ ಆಗುತ್ತಿದೆ ಎದು ಅವರು ಹೇಳಿದರು.


ರತ್ನತ್ರಯ ಕ್ಷೇತ್ರದಲ್ಲಿರುವ ಮೂರು ಬಸದಿಗಳು ರತ್ನತ್ರಯದ ಪ್ರತೀಕವಾಗಿದೆ. ಇಲ್ಲಿನ ಸ್ವಚ್ಛತೆ, ನಿರ್ವಹಣೆ, ಪೂಜಾ ವಿಧಾನ ಶಿಸ್ತುಬದ್ಧ ಆಡಳಿತದ ಬಗ್ಗೆ ಅನುವಂಶೀಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ಅವರನ್ನು ಮುನಿಗಳು ಅಭಿನಂದಿಸಿ ವಿಶೇಷವಾಗಿ ಆಶೀರ್ವದಿಸಿದರು.


ಶ್ರದ್ಧಾ-ಭಕ್ತಿಯಿಂದ ಪಂಚಪರಮೇಷ್ಠಿಗಳ ಆರಾಧನೆಯೊಂದಿಗೆ ನಿತ್ಯವೂ ಬಸದಿಗೆ ಹೋಗಿ ದೇವರದರ್ಶನ ಪೂಜೆ ಮಾಡಬೇಕು. ಆಗ ಸಕಲ ಪಾಪಕರ್ಮಗಳ ಕೊಳೆ ಕಳೆದು ಆತ್ಮನೇ ಪರಮಾತ್ಮನಾಗುತ್ತಾನೆ ಎಂದು ಮುನಿಗಳು ತಿಳಿಸಿದರು.


ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರು ಮಾತನಾಡಿ, ನಿತ್ಯವೂ ಶ್ರದ್ಧಾ-ಭಕ್ತಿಯಿಂದ ದೇವರ ದರ್ಶನ ಮಾಡಿದಾಗ ಆತ್ಮದರ್ಶನವೂ ಆಗುತ್ತದೆ. ಎಲ್ಲವನ್ನೂ ಗೆದ್ದವನು ಜಿನ. ಜಿನ ದೇವರ ಅನುಯಾಯಿಗಳು ಜೈನರು. ದಾನ, ದಯೆ, ಇಂದ್ರಿಯ ನಿಗ್ರಹ ಆತ್ಮನ ಸಹಜ ಗುಣಗಳಾಗಿದ್ದು ಸಕಲ ರಾಗ-ದ್ವೇಷಗಳನ್ನು ತೊರೆದು ದೇವರಲ್ಲಿರುವ ಅನಂತ ಗುಣಗಳ ಆರಾಧನೆ ಮಾಡಿ ಅವುಗಳನ್ನು ಪಾಲಿಸಬೇಕು. ಆದುದರಿಂದ ಬಸದಿಯಲ್ಲಿ 'ವಂದೇತದ್ಗುಣ ಲಬ್ಧಯೇ' ಅಂದರೆ ನಿನ್ನಲ್ಲಿರುವ ಅನಂತ ಗುಣಗಳು ನಮಗೂ ಬರಲ ಎಂದು ಪ್ರಾರ್ಥಿಸುತ್ತೇವೆ ಎಂದು ಮುನಿಗಳು ಹೇಳಿದರು.


ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್, ಕೆ.ಪ್ರಸನ್ನಕುಮಾರ್, ಪ್ರಧಾನ ಅರ್ಚಕ ಕೆ.ಜಯರಾಜ ಇಂದ್ರ ಹಾಗೂ ಊರಿನ ಶ್ರಾವಕ - ಶ್ರಾವಕಿಯರು ಉಪಸ್ಥಿತರಿದ್ದರು. ಶಿಕ್ಷಕ ಧರಣೇಂದ್ರಜೈನ್‌ ಕಾರ್ಯಕ್ರಮ ನಿರ್ವಹಿಸಿದರು.


ಸೋಮವಾರ ಯುಗಲ ಮುನಿಗಳು ವೇಣೂರು ಪುರಪ್ರವೇಶ ಮಾಡಿದಾಗ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಇಂದು ಮಂಗಳವಾರ ಕಾರ್ಕಳದ ಕಡೆಗೆ ಯುಗಲ ಮುನಿಗಳ ವಿಹಾರ ಮಾಡುವರು. ಇದೇ 13ರಂದು ಅವರು ಮೂಡಬಿದ್ರೆ ಪುರಪ್ರವೇಶ ಮಾಡುವರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم