ಚಿಕ್ಕಮಗಳೂರು, ಜನವರಿ 06: ಕೋವಿಡ್ ರೂಪಾಂತರ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ವಿತರಿಸಲಾಗುತ್ತಿದೆ ಎಂದು ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ತಿಳಿಸಿದರು.
ತಾಲ್ಲೂಕಿನ ಕಳಸಾಪುರ ಗ್ರಾಮದ ವಿನಾಯಕ ಪ್ರೌಢಶಾಲೆಯಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಸಮಾಜದ ವಿಭಿನ್ನ ವಯೋಮಿತಿಯ ಗುಂಪುಗಳೊಂದಿಗೆ ನಿತ್ಯ ಒಡನಾಡುತ್ತಾ ಸಂಪರ್ಕದಲ್ಲಿರುತ್ತಾರೆ. ಆದ ಕಾರಣ ಮಕ್ಕಳಿಗೆ ಹಂತ ಹಂತವಾಗಿ ಕೋವಿಡ್ ಲಸಿಕೆ ಹಾಕುವ ಮೂಲಕ ಕೋವಿಡ್ನಿಂದ ಮಕ್ಕಳನ್ನು ರಕ್ಷಿಸಲು ಈ ಶಿಬಿರ ಉಪಯೋಗವಾಗಲಿದೆ ಎಂದರು.
ಲಸಿಕೆ ಸುರಕ್ಷಿತವಾಗಿದ್ದು ಯಾವುದೇ ರೀತಿಯಲ್ಲಿ ಆತಂಕ ಪಡುವುದು ಬೇಡ. ನಾವೆಲ್ಲ ಎರಡು ಡೋಸ್ ಲಸಿಕೆ ಪಡೆದು ಆರೋಗ್ಯವಾಗಿದ್ದೇವೆ ಎಂದ ಅವರು ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎರಡು ಡೋಸ್ ಲಸಿಕೆಯನ್ನು ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅರ್ಹ ಎಲ್ಲಾ ಮಕ್ಕಳು ಕೋವಿಡ್ ಲಸಿಕೆ ಪಡೆಯುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು. ಜೊತೆಗೆ ಪೋಷಕರು ಸಹ ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಹೇಳಿದರು.
ವಿನಾಯಕ ಪ್ರೌಢಶಾಲೆಯ ಅಧ್ಯಕ್ಷ ಕೆ.ಎನ್.ಚಂದ್ರಮೌಳಿ ಮಾತನಾಡಿ ಶಾಲೆಯಲ್ಲಿ ಸುಮಾರು 48 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ರಾಧಮ್ಮ, ಡಾ|| ಕಾರ್ತೀಕ್, ಶಾಲೆಯ ಕಾರ್ಯದರ್ಶಿ ಡಿ.ಕೆ.ಚಂದ್ರೇಗೌಡ, ಸದಸ್ಯರಾದ ಗಣೇಶ್ ಕುಮಾರ್, ಶಿಕ್ಷಕರಾದ ಗಿರಿಜಮ್ಮ, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ