ಕೊಡವೂರು ಗೋಶಾಲೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಉಡುಪಿ: ದೇವಸ್ಥಾನಗಳಲ್ಲಿ ಶಿಲಾ ವಿಗ್ರಹ ಪ್ರತಿಮೆಗಳಲ್ಲಿ ಭಗವಂತನ ಚೈತನ್ಯವನ್ನು ತುಂಬಿ ಆರಾಧಿಸಲಾಗುತ್ತದೆ. ಗೋವುಗಳಲ್ಲಿ ದೇವಾನುದೇವತೆಗಳ ಸನ್ನಿಧಾನ ನಿತ್ಯ ಜಾಗೃತವಾಗಿರುತ್ತದೆ. ಚೈತನ್ಯ ತುಂಬಿದ ವಿಗ್ರಹದಷ್ಟೇ ಗೋವುಗಳೂ ಪ್ರಮುಖವಾಗಿವೆ. ಆದ್ದರಿಂದ ದೇವಳಗಳ ಜೀರ್ಣೋದ್ಧಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗೋಶಾಲೆಗಳ ನಿರ್ಮಾಣ, ನವೀಕರಣಗಳಿಗೂ ನೀಡಬೇಕು ಎಂದು ಗೋವರ್ಧನಗಿರಿ ಟ್ರಸ್ಟ್ ಮುಖ್ಯಸ್ಥರೂ ಹಾಗೂ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಉಡುಪಿ ಕೊಡವೂರು ಸಮೀಪವಿರುವ ನಂದಗೋಕುಲ ಗೋಶಾಲೆಯ ನೂತನ ಕಟ್ಟಡಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು.
ಕೆಎಂಎಫ್ ಅಧ್ಯಕ್ಷ ಕೆ ರವಿರಾಜ ಹೆಗ್ಡೆ, ಆಸ್ಟ್ರೇಲಿಯಾದಲ್ಲಿ ಯೋಗ ಶಿಕ್ಷಕರಾಗಿರುವ ರಾಜೇಂದ್ರ ಎಂಕಣ್ಣಮೂಲೆ ಶುಭ ಕೋರಿ ಮಾತಾಡಿದರು. ಬಡಾನಿಡಿಯೂರಿನ ಬಾಲಯ್ಯ ಕುಟುಂಬಿಕರ ಪಂಜುರ್ಲಿ ಟ್ರಸ್ಟ್ ಮುಖ್ಯಸ್ಥ, ದಾನಿ ಉಮೇಶ್ ರಾವ್, ಕೊಡವೂರು ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ ಸುಧೀರ್ ರಾವ್, ನಗರಸಭಾ ಸದಸ್ಯ ವಿಜಯ್ ಕೊಡವೂರು, ಡಾ ಸರ್ವೋತ್ತಮ ಉಡುಪ, ನಾಗರಾಜ ಪುರಾಣಿಕ್, ಇಂಜಿನಿಯರ್ ರಾಜೇಂದ್ರ ಮಯ್ಯ, ಚಂದ್ರಶೇಖರ್, ಗೋಶಾಲೆ ನಿರ್ವಾಹಕಿ ಪ್ರಮೀಳಾ ಜೋಶಿ ಮೊದಲಾದವರು ಉಪಸ್ಥಿತರಿದ್ದು ಶಿಲಾನ್ಯಾಸ ನೆರವೇರಿಸಿದರು.
ಈ ಗೋಶಾಲೆಯು ಒಂದೂವರೆ ಎಕ್ರೆ ಪ್ರದೇಶದಲ್ಲಿ 1984 ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಮೊದಲ ಗೋಶಾಲೆಯಾಗಿದ್ದು 150 ಗೋವುಗಳು ಪೋಷಿಸಲ್ಪಡುತ್ತಿವೆ.
ಪ್ರಸ್ತುತ ನೂತನ ಒಂದು ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟ್ ವ್ಯವಸ್ಥಾಪಕ ರಘುರಾಮಾಚಾರ್ಯ ವಿವರಿಸಿದರು.
ಸ್ಥಳದಲ್ಲೇ ಧನಸಹಾಯ ನೀಡಿದ ಮಹನೀಯರು:
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಸ್ಟ್ರೇಲಿಯಾದ ಯೋಗ ಶಿಕ್ಷಕ ರಾಜೇಂದ್ರ ಎಂಕಣ್ಣಮೂಲೆ ಎರಡು ಲಕ್ಷರೂ, ಕೆಎಂಎಫ್ ಪರವಾಗಿ ಅಧ್ಯಕ್ಷ ರವಿರಾಜ ಹೆಗ್ಡೆ ಒಂದು ಲಕ್ಷ ರೂ ದೇಣಿಗೆ ಹಸ್ತಾಂತರಿಸಿದರು.
ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇಣುಗೋಪಾಲ ಸಾಮಗರು ಧಾರ್ಮಿಕ ವಿಧಿ ನೆರವೇರಿಸಿದರು. ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಪ್ರಾಣೇಶ್ ಜೋಶಿ ಸಹಕರಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ