ಸುಂದರನೆ ಆದಂಥ
ಚಂದಿರನ ಬೆಂಬಿಡದೆ
ಅಂದಿನಿಂದಲು ಸೂರ್ಯ ಕಾಡುತಿಹನು
ಮಂದಗತಿಯಲ್ಲಿಯೇ
ಎಂದೆಂದು ಚಲಿಸುತಿಹ
ಮಂದ ಬೆಳಕಿನ ಚಂದ್ರ ಬೆದರುತಿಹನು
ಹುಣ್ಣಿಮೆಯ ದಿನದಂದು
ಕಣ್ಮನವ ತಣಿಸುತ್ತ
ಜಾಣನಂತೆಯೆ ರವಿಗೆ ದೂರನವನು
ಹಣ್ಣಂತೆ ಕಾಣುವವ
ನುಣ್ಣಗೆಯ ಕಾಯದವ
ಬಣ್ಣಿಸಲು ಅಸದಳದ ಚೆಲುವನಿವನು.
ಎತ್ತಲೂ ಮಾನವರು
ಮತ್ತೆ ಈ ವಾರಿಧಿಯು
ಮತ್ತೇರಿ ಚಂದ್ರನನು ಕೊಂಡಾಡಲು
ಚಿತ್ತ ಕದಡಿದ ಸೂರ್ಯ
ಮತ್ತೊಮ್ಮೆ ಚಂದ್ರನನು
ಬತ್ತಲಾರದ ಛಲದಿ ಬೆನ್ನತ್ತಿದ.
ದಿನದಿನವು ಓಡೋಡಿ
ಎನಿತೆನಿತು ಚಂದ್ರನನು
ತನಗರಿವು ಇರದಂತೆ ಸಮೀಪಿಸಿದ
ದಿನಕರನ ಧಾವಂತ
ದಿನದಿನವು ಹೆಚ್ಚಾಗಿ
ಮನದರಸ ಚಂದ್ರನನು ಮರೆಮಾಚುವ
ಒಂದಿರುಳು ಬಾನಿನಲಿ
ಚಂದಿರನು ಕಾಣದಿರೆ
ಅಂದಮಾವಾಸ್ಯೆಯೇ ಆಗಿರುವುದು.
ಬಂದಿಯಾಗಿಹ ಚಂದ್ರ
ಒಂದೊಮ್ಮೆ ನುಸುಳುತ್ತ
ಬಂಧನವ ಕಳಚುವುದೆ ಹುಣ್ಣಿಮೆಯದು.
ಶಶಿ ಸೂರ್ಯ ಬಾನಿನಲಿ
ವಸುಧೆಯನು ಒಳಗೊಂಡು
ನಿಶಿ ಹಗಲು ನಡೆಸುತಿಹ ವಿಸ್ಮಯವಿದು
ಅಸಹಾಯಕನು ಚಂದ್ರ
ಅಸಮಬಲ ಸೂರ್ಯನಲಿ
ವ್ಯಸನದಲಿ ಕೆಲವೊಮ್ಮೆ ಕೋಪಿಸುವನು
ಇಳೆಯೊಡನೆ ಬಾಂದಳದಿ
ಗೆಳೆತನವ ಮಾಡುತ್ತ
ಖಳನಂತೆ ಸೂರ್ಯನನೆ ಎದುರಿಸುವನು
ಕೆಲಕ್ಷಣಕಾದರೂ
ಕಳೆಗುಂದಿಸುವಂತೆಯೆ
ಇಳೆಗೆ ತೋರಿದ ಶಶಿ ಗ್ರಹಣವನು.
ಕಾಲ ಅದು ಯಾವುದೋ
ತೋಲನವ ತಪ್ಪದೇ
ಗೋಲಗಳು ಚಲಿಸುತಿವೆ ನೆಲೆಯಾಗದೆ
ಕಾಲಹರಣವು ಇಲ್ಲ
ಜಾಲ ತಿಳಿದವರಿಲ್ಲ.
ನೀಲ ಬಾನಲಿ ನಡೆವ ಸೋಜಿಗವಿದು.
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ