ನನ್ನಂತೆ ನಾನಿದ್ದೆ
ಇನ್ಯಾರ ಹಂಗಿರದೆ
ನೀ ನನ್ನ ಕಂಡಾಗ
ತುಸುವಾಗಿ ನಕ್ಕಾಗ
ನನ್ನಂತರಂಗದಲಿ
ನನಗರಿವೆ ಇಲ್ಲದೆಯೆ
ನನ್ನತನವನ್ನೆಲ್ಲ
ಕಳೆದುಕೊಂಡಂತಾದೆ.
ಈ ಪರಿಯ ಸೊಬಗೆಲ್ಲು
ಕಂಡಿಲ್ಲ ನಾನೆಂದು
ಆ ರೀತಿ ಮನದೊಳಗೆ
ಕಾಡಿರುವೆ ನೀನಿಂದು
ಕೂತಲ್ಲಿ ನಿಂತಲ್ಲಿ
ಮತ್ತೆ ಕನಸಲ್ಲಿಯೂ
ನನ್ನ ಸ್ವಾತಂತ್ರ್ಯವನೆ
ಕಳೆದುಕೊಂಡಂತಾದೆ.
ಇಹಪರದ ಅರಿವಿಲ್ಲ
ಗುಣದೋಷ ತಿಳಿದಿಲ್ಲ
ಮತ್ಯಾವ ಇಂದ್ರಿಯವು
ಬಯಸದೇ ಇರುವುದನು
ಕಣ್ಯಾಕೆ ಬಯಸುವುದೊ
ನಿನ್ನ ಸಾಮೀಪ್ಯವನು
ಇದುವೆ ಇರಬಹುದೇನೊ
ಹರೆಯ ಬಯಸುವ ಪ್ರೀತಿ.
ಜನ್ಮಾಂತರದ ಬಂಧ
ಆ ನೋಟಕಿರಬಹುದೆ
ಮತ್ಯಾಕೆ ನನ್ನನ್ನು
ಈ ರೀತಿ ಸೋಲಿಸಿದೆ
ನೀನಿರದೆ ಅರೆಗಳಿಗೆ
ಇರಲಾರೆ ಎನುತ ಮನ
ಈ ಕಣ್ಣಿನೊಡನೆಯೇ
ಇರುವೆ ನಾನೆಂದಿದೆ..!!
********
- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ