ನೇತಾಜಿಯವರ ಜಪಾನ್ ರೇಡಿಯೋ ಭಾಷಣ ಮಹತ್ತರವಾದದ್ದು: ಚಂದ್ರಕಾಂತ ಗೋರೆ
ಪುತ್ತೂರು: ನೇತಾಜಿಯವರು ಜಪಾನಿನ ರೇಡಿಯೋ ಮೂಲಕ ಮಾಡಿದ ಪ್ರಖರ ಭಾಷಣವು ಸ್ವಾಮಿ ವಿವೇಕಾನಂದರು ಚಿಕಾಗೋವಿನಲ್ಲಿ ಮಾಡಿದ ಭಾಷಣದಷ್ಟೇ ಮಹತ್ತರವಾದುದು. ಅನೇಕ ರಾಜಕೀಯ ಕಾರಣಗಳಿಂದ ನೇತಾಜಿಯವರ ಭಾಷಣ ಮಹತ್ತ್ವವನ್ನು ಪಡೆಯಲಿಲ್ಲ. ಈ ರೀತಿ ನೇಪಥ್ಯಕ್ಕೆ ಸರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರ ನೇತಾಜಿಯವರ ಜನ್ಮದಿನವನ್ನು ಆಚರಣೆ ಮಾಡಿ, ವ್ಯಕ್ತಿತ್ವವನ್ನು ತಿಳಿಯಲು ದೇಶವೇ ಹೆಜ್ಜೆಯಿಟ್ಟಿರುವುದು ಹೆಮ್ಮೆಯ ಸಂಗತಿ ಎಂದು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ್ ಗೋರೆ ಹೇಳಿದರು.
ಅವರು ಕಾಲೇಜಿನ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಮಂಗಳವಾರದಂದು ನಡೆದ ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ವರ್ಧಂತಿ ಉತ್ಸವ - ಪರಾಕ್ರಮ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯವನ್ನು ತರುವುದು ನೇತಾಜಿಯವರ ಗುರಿಯಾಗಿತ್ತು. ತಾನು ಹುಟ್ಟಿದ್ದೇ ಸ್ವಾತಂತ್ರ್ಯವನ್ನು ತರಲು ಎಂದು ಪ್ರತಿಜ್ಞೆಗೈದಿದ್ದರು. ವಿಶ್ವದ ಬೇರೆ ಬೇರೆ ದೇಶಗಳನ್ನು ಸುತ್ತಿ ರಾಜಕೀಯ ತಲ್ಲಣಗಳನ್ನು ಅರಿತು, ಭಾರತವನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಹಲವಾರು ವ್ಯೂಹವನ್ನು ರಚಿಸಿದ್ದರು. ಬೇರೆ ಯಾವ ನಾಯಕರಿಗೂ ಇಲ್ಲದ ಅದ್ಭುತ ಯೋಚನಾ ಲಹರಿಯನ್ನು ಸುಭಾಷ್ ಚಂದ್ರ ಬೋಸ್ ಹೊಂದಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ, ಸುಭಾಷ್ ಚಂದ್ರ ಬೋಸ್ರಂಥಹ ಮಹಾನ್ ನಾಯಕರ ಬಗೆಗೆ ಇಂದಿನ ತಲೆಮಾರು ತಿಳಿದುಕೊಳ್ಳಬೇಕು. ಅವರಂತಹ ಅನೇಕ ನಾಯಕರು ತೆರೆಮರೆಗೆ ಸರಿದಿದ್ದಾರೆ. ಪ್ರಸ್ತುತ ಹಾಗೆ ಬದಿಗೆ ಸರಿಯಲ್ಪಟ್ಟಿದ್ದವರೆಲ್ಲ ಒಬ್ಬೊಬ್ಬರಾಗಿ ಹೊರಜಗತ್ತಿಗೆ ಅನಾವರಣಗೊಳ್ಳುತ್ತಿರುವುದು ಶ್ಲಾಘನೀಯ. ಕೇಂದ್ರ ಸರ್ಕಾರ ಈ ನೆಲೆಯಲ್ಲಿ ಅತ್ಯುತ್ತಮ ಕಾರ್ಯ ಕೈಗೆತ್ತಿಕೊಂಡಿದೆ ಎಂದರಲ್ಲದೆ ನೇತಾಜಿಯವರಂತಹ ದಿಟ್ಟ ಹೋರಾಟಗಾರರ ದೂರಗಾಮಿ ಚಿಂತನೆಯನ್ನು ತಿಳಿದು ಅರಗಿಸಿ ವಿದ್ಯಾರ್ಥಿಗಳು ದೇಶ ಕಟ್ಟಬೇಕು. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಮರುಹುಟ್ಟು ಹಾಕಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅಂಕಿತಾ, ಮಹಿಮಾ ಪ್ರಾರ್ಥಿಸಿ, ವಿದ್ಯಾರ್ಥಿ ಶೇಖರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ