ನುಡಿ ನಮನ: 'ಏರಿದವನು ಚಿಕ್ಕವನಿರಬೇಕು' ಎಂಬ ಮಾತಿಗೆ ಸಾಕ್ಷಿಯಾದವರು ಕೊಡುಗೈ ದಾನಿ ಶ್ರೀ ಸಾಯಿರಾಮ್ ಭಟ್ಟರು

Upayuktha
0

ಪುರದ ಪುಣ್ಯವಿಂದು 

ಹರಿಪಾದ ಸೇರಿದುದು 

ನೆರವಿತ್ತು ಸಜ್ಜನರ ಬಿಡದೆ ಪೊರೆದು |  

ಕಿರಿಯನಾಗಿಹ ನನ್ನ 

ವರಗುರು ದೇವರೊಲು 

ಕರೆದು ಹರಸುತ ಅಗಲಿ ಹೋಗಿಹರು ||  



ಬಂಧುಗಳೂ ದೈವಾಂಶ ಸಂಭೂತರೂ ಆಗಿರುವ ಕೊಡುಗೈ ದಾನಿ ಸನ್ಮಾನ್ಯ ಕಿಳಿಂಗಾರು ಶ್ರೀ ಗೋಪಾಲಕೃಷ್ಣ ಭಟ್ಟರು (ಶ್ರೀ ಸಾಯಿರಾಮ್ ಭಟ್ಟರು) ಇಂದು ಪೂರ್ವಾಹ್ಣ ಹನ್ನೊಂದೂವರೆ ಗಂಟೆಗೆ ನಗುನಗುತ್ತಲೇ ತಮ್ಮ ಇಹಲೋಕ ಯಾತ್ರೆಯನ್ನು ಪೂರಯಿಸಿದರು. ಸಮಾಜ ಸೇವೆಗೆ ಇನ್ನೊಂದು ಹೆಸರಾಗಿದ್ದ ಶ್ರೀಯುತರು ಕೊಡುಗೈದಾನಿ ಎಂದೇ ಸುಪರಿಚಿತರು. ಕಷ್ಟದಲ್ಲಿರುವವರಿಗೆ ಸಾಂತ್ವನದ ನುಡಿಗಳನ್ನು ಹೇಳುವುದರೊಂದಿಗೆ ಧನ ಸಹಾಯ, ಔಷಧೋಪಚಾರ, ದೋಷ ಪರಿಹಾರಕ್ಕೆ ಮಂತ್ರವಾದ, ತಾಯತ ಇತ್ಯಾದಿ ಇತ್ಯಾದಿ ಹಲವು ವಿಧದಲ್ಲಿ ಸಹಾಯ ಹಸ್ತವನ್ನು ನೀಡಿದ ಇವರು ಬಡವರ ಪಾಲಿನ ಭಾಗ್ಯವಿಧಾತರು.


ವಸತಿಹೀನರನ್ನು ಗುರುತಿಸಿ ಅಸಂಖ್ಯಾತ ಮನೆಗಳನ್ನು ನಿರ್ಮಿಸಿ ದಾನವಾಗಿ ನೀಡಿದವರು. ಸ್ವೋದ್ಯೋಗದಲ್ಲಿ ತೊಡಗಿಸಿಕೊಳ್ಳುವವರಿಗೆ ನೂರಾರು ಹೊಲಿಗೆ ಯಂತ್ರಗಳನ್ನೂ ನೀಡುತ್ತಿದ್ದವರು. ಅದೆಷ್ಟೋ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಧನಸಹಾಯವನ್ನು ನೀಡುವುದರೊಂದಿಗೆ ಅವರ ಬಾಳಿನ ಬೆಳಕಾದವರು. 


ವೇದ ಪಾರಂಗತರಾದ ಶ್ರೀಯುತರು ಸರಳ ಸಜ್ಜನಿಕೆಯಿಂದ ಕೂಡಿದ ನಿರಾಡಂಬರ ವ್ಯಕ್ತಿತ್ವವುಳ್ಳ ಧೀಮಂತರು. ಸದಾಕಾಲವೂ ಅಚ್ಚ ಬಿಳಿಯುಡುಗೆಯಿಂದ ಶೋಭಿಸುವ ಅವರ ನಿಷ್ಕಲ್ಮಷವಾದ ಮುಗ್ಧನಗು, ಮಿಂಚುಕಣ್ಣು ಅವರನ್ನೊಬ್ಬ ದಾರ್ಶನಿಕ ತಪಸ್ವಿಯನ್ನಾಗಿ ಮಾಡಿವೆ. 


ಮೊನ್ನೆ ತಾನೇ ನನಗೆ ಅವರ ಮನೆಯಲ್ಲಿಯೇ ಸುಮಾರು ಮೂರು ತಾಸುಗಳ ಕಾಲ ಅವರಲ್ಲಿ ಹಲವು ವಿಚಾರಗಳ ಕುರಿತು ಮಾತನಾಡುವ ಭಾಗ್ಯವೊದಗಿ ಬಂದಿತ್ತು. ದಾವಣಗೆರೆಯಿಂದ ಬಂದಿದ್ದ ಸಾಹಿತಿ ಹಾಗೂ ಕಲಾವಿದರೂ 25 ಜನರಷ್ಟಿದ್ದರು. ಎಲ್ಲರೂ ಈ ವಿಭೂತಿಪುರುಷರ ಪಾದಗಳಿಗೆ ಹಣೆಹಚ್ಚಿ ಆಶೀರ್ವಾದ ಪಡೆದು ಕೃತಾರ್ಥರಾಗಿದ್ದರು. ಆತ್ಮೀಯ ಹಾಗೂ ಭಾವನಾತ್ಮಕವಾದ ಆ ಸಂದರ್ಭವೇ ದಿವ್ಯವಾಗಿತ್ತು.  


ಶ್ರೀ ಸಾಯಿರಾಮ್ ಭಟ್ ಅವರು ಇನ್ನೊಮ್ಮೆ ಜನಿಸಿ ಬರಬೇಕು. "ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು" ಎಂಬ ಮಂಜೇಶ್ವರ ಗೋವಿಂದ ಪೈಗಳ ಕವನವು ಶ್ರೀಯುತರಿಗೂ ಅನ್ವಯಿಸುತ್ತದೆ. ಎಷ್ಟೇ ದೊಡ್ಡ ಉದಾತ್ತ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಕೀರ್ತಿಶಿಖರದ ತುತ್ತತುದಿಯನ್ನೇರಿದರೂ ತಾನಿನ್ನೂ ಒಬ್ಬ ಸಾಮಾನ್ಯ ಮನುಷ್ಯನಾಗಿಯೇ ಗುರುತಿಸಿಕೊಳ್ಳಲು ಬಯಸುತ್ತಿರುವ ಇವರೊಬ್ಬ ಅಸಾಧಾರಣವಾದ "ದಾನಚಿಂತಾಮಣಿ".  


"ಏರಿದವನು ಚಿಕ್ಕವನಿರಬೇಕು" ಎಂಬ ಕವಿವಾಣಿ ಇವರ ವಿಷಯದಲ್ಲಿ ಸಂಪೂರ್ಣವಾಗಿ ನಿಜವಾಗಿದೆ. ಅಜಾತಶತ್ರುವಾದ ಇಂತಹ ಸಮಾಜ ಸೇವಕರು ನಿಜವಾದ ಧ್ರುವತಾರೆಗಳು. ಇಂದೀಗ ಅವರ ಬಾಯಿಗೆ ಬಿಂದು ಗಂಗೋದಕವನ್ನರ್ಪಿಸಿ ಈ ನುಡಿನಮನವನ್ನು ಅವರ ಶ್ರೀ ಚರಣಗಳಿಗೆ ಸಮರ್ಪಿಸುವೆನು. ಅವರ ದಿವ್ಯಾತ್ಮಕ್ಕೆ ಶ್ರೀ ಮಹಾವಿಷ್ಣು ಸಾಯುಜ್ಯ ಪ್ರಾಪ್ತಿಯಾಗಲಿ. 

ಓಂ ಶಾಂತಿ ಶಾಂತಿ ಶಾಂತಿಃ 


-ವಿ.ಬಿ.ಕುಳಮರ್ವ 

ದಿನಾಂಕ-೨೨-೧-೨೦೨೨.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top