ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ರಾಜ್ಯ ಸಚಿವರಾದ ವಿ. ಸುನಿಲ್ ಕುಮಾರ್ ಜ. 5ರಂದು ಭೇಟಿ ನೀಡಿ ತುಳು ಭವನದ ಅಪೂರ್ಣ ಕಾಮಗಾರಿ ಹಾಗೂ ವಿವಿಧ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಿದರು.
ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಅವರು ಅಕಾಡೆಮಿಯ ಬಗ್ಗೆ ಮಾಹಿತಿ ನೀಡಿ, ತುಳು ಭವನ ಸಂಪೂರ್ಣಗೊಳ್ಳಲು ಮಂಜೂರಾಗಿರುವ ರೂ. 3.6 ಕೋಟಿ ಸಹಿತ ಹೆಚ್ಚುವರಿಯಾಗಿ 2 ಕೋ. ರೂ.ವಿನ ಅಗತ್ಯವಿದೆ. ಇದು ಸಂಪೂರ್ಣಗೊಂಡಲ್ಲಿ ಅಕಾಡೆಮಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಸಾಧ್ಯವಿದೆ. ನಿರಂತರವಾಗಿ ರಂಗ ಚಟುವಟಿಕೆಯನ್ನು ನಡೆಸಲು ವ್ಯವಸ್ಥಿತವಾದ ವೇದಿಕೆಯನ್ನು ಬಳಸಿಕೊಳ್ಳಬಹುದು, ವಾಹನ ಪಾರ್ಕಿಂಗ್ ಸಹಿತ ಎಲ್ಲಾ ವ್ಯವಸ್ಥೆಯು ಅಕಾಡೆಮಿಯಲ್ಲಿ ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಕತ್ತಲ್ಸಾರ್ ಅವರು ಸಚಿವರ ವಿಶೇಷ ಗಮನ ಸೆಳೆದು, ತುಳು ಶಿಕ್ಷಕರಿಗೆ ಗೌರವ ಧನ ಪಾವತಿಗೆ ಇರುವ ತೊಡಕು ಹಾಗೂ ಪ್ರಸ್ತುತ ಸಂದರ್ಭದಲ್ಲಿರುವ ಅನುದಾನ ಸಹಿತ ಅಕಾಡೆಮಿಯ ನಿರ್ವಹಣೆಯ ಬಗ್ಗೆ ಸವಿವವರವಾಗಿ ವಿವರಿಸಿದರು, ಸಂಚಿವರು ಈ ಬಗ್ಗೆ ಯಾವ ಕ್ರಮ ಸಾಧ್ಯವಿದೆ ಎಂದು ಪ್ರಶ್ನಿಸಿದಾಗ, ಇತರ ಐಚ್ಛಿಕ ಭಾಷೆಗಳಿಗೆ ನೀಡಿದಂತೆ (ಉದಾ: ಹಿಂದಿ) ತುಳುವಿಗೂ ಅತಿಥಿ ಶಿಕ್ಷಕರ ನೇಮಕಾತಿಯಾದಲ್ಲಿ, ತುಳು ಶಿಕ್ಷಕರಿಗೆ ಶಾಶ್ವತವಾಗಿ ಗೌರವ ಧನ ನೀಡುವ ಕೆಲಸ ಸರಕಾರದಿಂದಲೇ ಆದಲ್ಲಿ ಅಕಾಡೆಮಿಗೆ ಹೊರೆ ಕಡಿಮೆಯಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಸಚಿವರಿಗೆ ಮನವಿ ಮಾಡಲಾಗಿದ್ದು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಕಚೇರಿ, ತುಳು ಭವನದ ಸುತ್ತಮುತ್ತ ಇರುವ ಜಮೀನಿನ ಮಾಹಿತಿ, ತುಳು ಭವನದ ಸಿರಿ ಚಾವಡಿ ಸಭಾಂಗಣ, ಸಭಾ ಸಭಾಂಗಣ ಸಹಿತ ಅಕಾಡೆಮಿಯ ಚಟುವಟಿಕೆಯ ಬಗ್ಗೆ ಸಚಿವರು ಸಂಪೂರ್ಣ ವಿವರ ಕೇಳಿ ಪಡೆದುಕೊಂಡರು. ಹಾಗೂ ರೂ.3.6 ಕೋಟಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಿ ಈ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಹಾಗೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತೇನೆ ಎನ್ನುವ ಭರವಸೆಯನ್ನಿತ್ತರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment