ಚಿಕ್ಕಮಗಳೂರು ಜನವರಿ 05: ದಲಿತ ನೌಕರನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ತರೀಕೆರೆ ವನ್ಯಜೀವಿ ವಿಭಾಗದ ಎಸಿಎಫ್ ರತ್ನಪ್ರಭ ಅವರನ್ನು ಒಂದು ವಾರದ ಗಡುವಿನೊಳಗೆ ಅಮಾನತುಗೊಳಿಸಿ ಬಂಧನಕ್ಕೊಳಪಡಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ದಲಿತಪರ ಸಂಘಟನೆಗಳ ಮುಖಂಡರು ಎಚ್ಚರಿಸಿದರು.
ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡ ದಲಿತ ಸಂಘಟನೆಗಳ ಮುಖಂಡರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಭಾರತ ಸಂವಿಧಾನ ಜಾತ್ಯಾತೀತೆ ಯನ್ನು ಸಾರುವಂತಹ ದೇಶ. ಅದೇ ಸಂವಿಧಾನದಯಡಿಯಲ್ಲಿ ವಿದ್ಯಾಭ್ಯಾಸ ಮಾಡಿ ಕೆಲಸ ನಿರ್ವಹಿಸುವ ಅಧಿಕಾರಿಯೊಬ್ಬರು ತಮ್ಮ ಇಲಾಖೆಯಲ್ಲೇ ಕಾರ್ಯ ನಿರ್ವಹಿಸುವ ನೌಕರನಿಗೆ ಜಾತಿ ನಿಂದನೆ ಮಾಡಿ ಅವಹೇಳನಕಾರಿ ಮಾತನಾಡಿರುವುದು ದುರಂತದ ವಿಚಾರವಾಗಿದೆ ಎಂದರು.
ಈ ಕಾಲದಲ್ಲಿ ಜಾತಿ ನಿಂದನೆ ಮಾಡುವುದು ಕಾನೂನಿನಲ್ಲಿ ನಿಷೇಧವಿದ್ದರೂ ಎಸಿಎಫ್ ಅಧಿಕಾರಿ ರತ್ನಪ್ರಭ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ನೀವು ತಾಯಿ ಗರ್ಭದಿಂದ ಬಂದಿದ್ದೀರಾ ಅಥವಾ ದೇವರೇ ನಿಮ್ಮನ್ನು ಸೃಷ್ಟಿ ಮಾಡಿದ್ದಾರೆಯೇ. ಮೇಲ್ಜಾತಿಯ ಸಂಸ್ಕಾರ ಪಡೆದುಕೊಂಡಿರುವ ನೀವು ಎಲ್ಲಿಂದ ಬಂದಿದ್ದೀರಾ ನಿಮ್ಮ ಮೂಲ ಯಾವ ಜಾತಿ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ ತಿಳಿದಿರುವಂತೆ ಯಾವ ಜಾತಿ ಅಥವಾ ಧರ್ಮವಾಗಲೀ ಎಲ್ಲದರಲ್ಲೂ ಒಂದೇ ರೀತಿಯಲ್ಲಿ ಮನುಷ್ಯ ಇರುತ್ತಾನೆ. ಆದರೆ ಎಸಿಎಫ್ ಅಧಿಕಾರಿ ಇಲಾಖೆಯ ನೌಕರನ ಮೇಲೆ ಅವಹೇಳನಕಾರಿ ಮಾತನಾಡಿ ದರ್ಪವನ್ನು ಮರೆಯುತ್ತಿರುವುದು ಎಲ್ಲರ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗಿದೆ ಎಂದರು.
ಈ ಹೋರಾಟ ಅಧಿಕಾರಿ ರತ್ನಪ್ರಭ ಅವರನ್ನು ಬಂಧಿಸುವವರೆ ನಡೆಯಲಿದೆ. ಜೊತೆಗೆ ಕಾನೂನು ವಿರುದ್ಧವಾಗಿ ಸಂಭಾಷಣೆ ಬಳಸಿರುವ ಅವರನ್ನು ಕೆಲಸದಿಂದ ವಜಾಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮಾನವ ಹಕ್ಕು ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೊನ್ನೇಶ್ ಮಾತನಾಡಿ ಅಲ್ಲಿನ ಸ್ಥಳೀಯ ದಲಿತ ನಿವಾಸಿಯಾದ ಚಿತ್ರಪ್ಪನವರು ತಮ್ಮ ತೋಟದಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಎಂದು ತಿಳಿಸಿದ್ದರಲ್ಲದೇ ಅವರ ಕಛೇರಿ ಎದುರು ಪ್ರತಿಭಟನೆ ಮಾಡಿದ್ದರೆಂಬ ಕಾರಣಕ್ಕೆ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ ಎಂದು ದೂರಿದರು.
ಸಂವಿಧಾನದಯಡಿಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ನಿಂದನೆ ಮಾಡಿರುವಂತಹ ವ್ಯಕ್ತಿಗೆ ಕಾನೂನಿನಲ್ಲಿ ಕ್ರಮ ಕೈಗೊಳ್ಳಲು ಕಾಯ್ದೆಗಳಿವೆ. ಚಿತ್ರಪ್ಪನವರು ಕೇಸು ದಾಖಲಿಸಿ ಹದಿನೈದು ದಿನಗಳೇ ಕಳೆದರೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಎಸಿಎಫ್ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ದಲಿತ ಸಮುದಾಯದವರ ಮೇಲೆ ಕಾಳಜಿ ಇಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಮರ್ಲೆ ಅಣ್ಣಯ್ಯ, ಎನ್.ಆರ್.ಪುರ ಮುಖಂಡ ಶಿವಣ್ಣ, ಗೌಸ್ ಮೊಹಿಯುದ್ದೀನ್, ಕಾಂಗ್ರೆಸ್ ಮುಖಂಡ ರಸೂಲ್ ಖಾನ್, ಜೆಡಿಎಸ್ ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್, ಭೀಮ್ ಆರ್ಮಿ ಸಂಘದ ಅಧ್ಯಕ್ಷ ಗಿರೀಶ್, ಪ್ರಗತಿಪರ ಹೋರಾಟಗಾರ ಉಮೇಶ್ ಕುಮಾರ್, ವಸಂತ, ಕಿರಣ್, ಶಿಲ್ಪಾ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment