ಪುತ್ತೂರು: ಕ್ಯಾಂಪ್ಕೋ ವತಿಯಿಂದ ಜ.10 ರಿಂದ ವಿಟ್ಲದ ಸಿಪಿಸಿಆರ್ಐ ವಠಾರದಲ್ಲಿ ನಡೆಯುವ ದೋಟಿ ತರಬೇತಿ ಶಿಬಿರದ ಲಾಂಛನ ಶುಕ್ರವಾರ ಬಿಡುಗಡೆ ನಡೆಯಿತು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ ಅವರು ಕ್ಯಾಂಪ್ಕೋ ಚಾಕೋಲೇಟ್ ಪ್ಯಾಕ್ಟರಿಯಲ್ಲಿ ಬಿಡುಗಡೆಗೊಳಿಸಿದರು.
ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಸಿಪಿಸಿಆರ್ಐ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸಹಯೋಗದೊಂದಿಗೆ ವಿಟ್ಲದ ಸಿಪಿಸಿಆರ್ಐ ವಠಾರದಲ್ಲಿ ಜ.10 ರಿಂದ ಮೂರು ದಿನಗಳ ಕಾಲ ದೋಟಿ ತರಬೇತಿ ಶಿಬಿರ ನಡೆಯಲಿದೆ. ಈ ಶಿಬಿರದ ಲಾಂಛನವನ್ನು ಶುಕ್ರವಾರ ಕ್ಯಾಂಪ್ಕೋ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಬಿಡುಗಡೆಗೊಳಿಸಿ, ಅಡಿಕೆ ಬೆಳೆಗಾರರ ಭವಿಷ್ಯದಲ್ಲಿ ದೋಟಿಯ ಮೂಲಕ ಅಡಿಕೆ ಕೊಯ್ಲು ಹಾಗೂ ಸಿಂಪಡಣಾ ಕಾರ್ಯ ನಡೆಯಬೇಕಾದ ಅನಿವಾರ್ಯತೆ ಬರುತ್ತದೆ. ಇದಕ್ಕಾಗಿ ಈಗಲೇ ತರಬೇತಿ ಅಗತ್ಯವಿದೆ. ಹೀಗಾಗಿ ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಮುಂದಡಿ ಇರಿಸಿದೆ. ಸದ್ಯ ಆಯ್ದ ಶಿಬಿರಾರ್ಥಿಗಳಿಗೆ ಈ ತರಬೇತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಹಕಾರ ಸಂಘಗಳು ಈ ಶಿಬಿರವನ್ನು ತಮ್ಮ ಪರಿಸರದಲ್ಲಿ ಸಂಘಟಿಸಿ ಇದು ಒಂದು ಆಂದೋಲನ ರೂಪದಲ್ಲಿ ಮುಂದುವರಿಯಲು ಸಹಕಾರ ಕೊಡಬೇಕು ಎಂದರು.
ಈ ಸಂದರ್ಭ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಪಡಾರು ರಾಮಕೃಷ್ಣ ಭಟ್, ಸಿಪಿಸಿಆರ್ ಐ ವಿಜ್ಞಾನಿ ಡಾ. ಭವಿಷ್, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ, ಕ್ಯಾಂಪ್ಕೋ ಸಿಬಂದಿ ಈಶ್ವರ ನಾಯ್ಕ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ