ಬ್ರೋಕೋಲಿ ಒಂದು ವಿಶೇಷವಾದ ಪೋಷಕಾಂಶದಿಂದ ತುಂಬಿದ ತರಕಾರಿಯಾಗಿದ್ದು, ಹೂಕೋಸು ಹಾಗೂ ಕ್ಯಾಬೇಜ್ ಕುಟುಂಬಕ್ಕೆ ಸೇರಿರುತ್ತದೆ. ಅಚ್ಚ ಕನ್ನಡದಲ್ಲಿ ಕೋಸುಗಡ್ಡೆ, ಹಸಿರುಕೋಸು ಎಂದು ಕರೆಯುತ್ತಾರೆ. ನೋಡಲು ಸಾಮಾನ್ಯವಾಗಿ ಕೌಲಿಫ್ಲವರ್ (ಹೂ ಕೋಸು) ನಂತೆ ಕಾಣುವ ಈ ತರಕಾರಿ ಹತ್ತು ಹಲವು ಆರೋಗ್ಯಪೂರ್ಣ ಗುಣಗಳನ್ನು ಹೊಂದಿದೆ. ಇದೊಂದು ಹಸಿರು ತರಕಾರಿಯಾಗಿದ್ದು, ದೊಡ್ಡದಾದ ಕಾಂಡವನ್ನು ಹೊಂದಿದ್ದು, ಅದರ ಮೇಲೆ ಹೂವಿನ ಗುಚ್ಛದಂತೆ ಬೆಳೆಯುತ್ತದೆ. ಹೂವಿನ ಭಾಗ ಮತ್ತು ಕಾಂಡದ ಭಾಗವನ್ನು ತಿನ್ನಲಾಗುತ್ತದೆ. ಹಿತಮಿತವಾಗಿ ಬೇಯಿಸಿ ಅಥವಾ ಬೆಂಕಿಯಿಂದ ಬಾಡಿಸಿ ತಿನ್ನಲು ಅತೀ ರುಚಿಯಾಗಿರುತ್ತದೆ ಮತ್ತು ಯಾವುದೇ ಪೋಷಕಾಂಶಗಳು ನಷ್ಟವಾಗುವುದಿಲ್ಲ. ಅತೀ ಹೆಚ್ಚು ವಿಟಮಿನ್, ಕ್ಯಾಲ್ಸಿಯಂ ಹಾಗೂ ಖನಿಜಾಂಶ ಹೊಂದಿರುವ ಈ ತರಕಾರಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಕೊಬ್ಬಿನ ಅಂಶ ಇರುವುದಿಲ್ಲದಿರುವುದೇ ಬಹಳ ವಿಶೇಷ. ಹೆಚ್ಚಾಗಿ ಹಸಿ ಅಥವಾ ಅರೆ ಬೇಯಿಸಿದ ಬ್ರೋಕೋಲಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅತಿಯಾಗಿ ಬೇಯಿಸಿದ್ದಲ್ಲಿ ನೀರಿನಲ್ಲಿ ಕರಗಬಹುದಾದ ವಿಟಮಿನ್ B6, B12, C ನಷ್ಟವಾಗಬಹುದು. ಒಂದು ಕಪ್ ಬ್ರೋಕೋಲಿ ಅಂದರೆ ಸುಮಾರು 100 ಗ್ರಾಂ ಬ್ರೋಕೋಲಿಯಲ್ಲಿ ಸುಮಾರು 20 ಕ್ಯಾಲೋರಿ, 2.5 ಗ್ರಾಂ ಪ್ರೋಟಿನ್, 2.5 ನಾರಿನಂಶ, 2.5 ಗ್ರಾಂ ಶರ್ಕರಪಿಷ್ಟ ಇರುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಕೋಸುಗಡ್ಡೆ ತರಕಾರಿ ವಿಟಮಿನ್ C, ವಿಟಮಿನ್ K, ವಿಟಮಿನ್ B6, ಪೋಲಿಕ್ ಆಸಿಡ್ ಎಂಬ ವಿಟಮಿನ್, ತಾಮ್ರ, ರಂಜಕ, ಮೆಗ್ನಿಷಿಯಂ, ಮ್ಯಾಂಗನೀಸ್, ಕಬ್ಬಿಣ, ಕಾಲ್ಸಿಯಂ, ಸತು ಮುಂತಾದ ಖನಿಜಾಂಶಗಳನ್ನು ಹೇರಳವಾಗಿ ಹೊಂದಿರುತ್ತದೆ. ಈ ಕಾರಣದಿಂದಾಗಿ ಇದೊಂದು ಪರಿಪೂರ್ಣ ತರಕಾರಿ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಿನ್ನುವುದರಿಂದ ಆಗುವ ಲಾಭಗಳು:
1. ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಬ್ರೋಕೋಲಿಯಲ್ಲಿ ಅತೀ ಹೆಚ್ಚು ಆಂಟೊಂಕ್ಸ್ಸಾಡೆಂಟ್ಗಳು ಇರುತ್ತದೆ. ಆಂಟೊಂಕ್ಸಿಡೆಂಟ್ಗಳು ಜೀವಕೋಶಗಳ ಆಓಂ ಗಳಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಅದೇ ರೀತಿ ಈ ಕೋಸುಗಡ್ಡೆಯಲ್ಲಿರುವ ಇಂಡೋಲ್-3-ಕಾರ್ಬಿನಾಲ್ ಎಂಬ ರಾಸಾಯನಿಕ ಕ್ಯಾನ್ಸರ್ ಬರದಂತೆ ತಡೆಯುವ ವಿಶೇಷ ಗುಣ ಹೊಂದಿರುತ್ತದೆ. ಒಟ್ಟಿನಲ್ಲಿ ನಿರಂತರ ಕೋಸುಗಡ್ಡೆ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕ್ಷೀಣಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
2. ಹೃದಯ ಸಂಬಂಧಿ ರೋಗಗಳಿಂದ ರಕ್ಷಿಸುತ್ತದೆ.
ಕೋಸುಗಡ್ಡೆಯಲ್ಲಿರುವ ಕಿಣ್ವಗಳಿಗೆ ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟದಂತೆ ತಡೆಯುವ ಶಕ್ತಿ ಹೊಂದಿರುತ್ತದೆ. ಅದೇ ರೀತಿ ಈ ತರಕಾರಿಯಲ್ಲಿರುವ ಅತಿಯಾದ ನಾರಿನಂಶ, ವಿಟಮಿನ್ಗಳು ಮತ್ತು ಅಮಿನೋ ಆಮ್ಲಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಕನಿಷ್ಠ ಕೊಬ್ಬಿನಂಶದ ಕಾರಣದಿಂದ ಹೃದಯದ ಆರೋಗ್ಯಕ್ಕೆ ಈ ತರಕಾರಿ ಅತ್ಯವಶ್ಯಕ ಎಂದು ತಿಳಿದುಬಂದಿದೆ. ರಕ್ತನಾಳಗಳಿಗೆ ಉಂಟಾಗುವ ಹಾನಿಯನ್ನು ತಡೆಯುವ ಶಕ್ತಿ ಕೂಡ ಇದೆ ಎಂದು ಅಂದಾಜಿಸಲಾಗಿದೆ.
3. ಉರಿಯೂತ ನಿಯಂತ್ರಣ:
ಕೋಸುಗಡ್ಡಯಲ್ಲಿ ಅತೀ ಹೆಚ್ಚು ಓಮೇಗಾ- 3- ಅಮೀನೋ ಆಮ್ಲ ಇದೆ. ಇದಕ್ಕೆ ಉರಿಯೂತ ನಿಯಂತ್ರಿಸುವ ವಿಶೇಷ ಶಕ್ತಿ ಇದೆ. ಅದೇ ರೀತಿ ಸಂಧಿವಾತ, ಗಂಟುನೋವು ಇರುವವರಿಗೂ ಈ ಕೋಸುಗಡ್ಡೆಯಲ್ಲಿಯ ಸಲ್ಫೊರಫೇನ್ ಎಂಬ ರಾಸಾಯನಿಕ ರಾಮಬಾಣವಾಗಿದ್ದು, ಗಂಟುಗಳ ಉರಿಯೂತವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.
4. ಮೆದುಳಿನ ಆರೋಗ್ಯಕ್ಕೆ ಪೂರಕ
ಕೋಸುಗಡ್ಡೆಯಲ್ಲಿರುವ ಹೇರಳವಾದ ನೈಸರ್ಗಿಕ ಪೋಷಕಾಂಶಗಳು ಮತ್ತು ಕ್ರಿಯಾತ್ಮಕವಾದ ಕಿಣ್ವಗಳು ಮೆದುಳಿನ ನರಗಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಸಲ್ಪೋರಫೇನ್ ಎಂಬ ರಾಸಾಯನಿಕ ಮೆದುಳಿಗೆ ಆಕ್ಸಿಜನ್ ಹೆಚ್ಚು ಸಿಗುವಂತೆ ಮಾಡುತ್ತದೆ. ಕೋಸುಗಡ್ಡೆ ತರಕಾರಿಯಲ್ಲಿ ಹೇರಳವಾಗಿರುವ ಪೋಲಿಕ್ ಆಮ್ಲ, ಆಲ್ಝೈಮರ್ ರೋಗ ಬರದಂತೆ ತಡೆಯುತ್ತದೆ. ವಿಟಮಿನ್ K ನರದ ಆರೋಗ್ಯವನ್ನು ವೃದ್ಧಿಸುತ್ತದೆ.
5. ಅಸ್ಥಿರಂಧ್ರತೆಯನ್ನು ನಿಯಂತ್ರಿಸುತ್ತದೆ.
ಕೋಸುಗಡ್ಡೆಯಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಎಲುಬಿನ ಆರೋಗ್ಯಕ್ಕೆ ಅತೀ ಉತ್ತಮ ಎನ್ನಲಾಗಿದೆ. ವಿಟಮಿನ್ C, ಕೊಲ್ಲಾಜೆನ್ ಎಂಬ ವಿಶಿಷ್ಟವಾದ ಎಲುಬಿನ ಆರೋಗ್ಯಕ್ಕೆ ಅತೀ ಅಗತ್ಯವಾದ ಪ್ರೋಟೀನ್ ತಯಾರಿಕೆಗೆ ಅತೀ ಅಗತ್ಯ. ಅದೇ ರೀತಿ ಕ್ಯಾಲ್ಸಿಯಂ ಎಲುಬನ್ನು ಸಧೃಡವಾಗಿಸುತ್ತದೆ. ಇದರ ಜೊತೆಗೆ ವಿಟಮಿನ್ K ಎಲುಬಿನ ಅಸ್ಥಿರಂಧ್ರತೆಯನ್ನು ನಿಯಂತ್ರಿಸುತ್ತದೆ. google ads- inside content code:
6. ದೇಹದ ರಕ್ಷಣಾ ಶಕ್ತಿಯನ್ನು ವೃದ್ದಿಸುತ್ತದೆ.
ಕೋಸುಗಡ್ಡೆಯಲ್ಲಿ ಅತೀ ಹೆಚ್ಚು ವಿಟಮಿನ್ C ಇರುತ್ತದೆ. ಕಿತ್ತಳೆ ಮುಸುಂಬಿಗಿಂತಲೂ ಅಧಿಕ ಪ್ರಮಾಣದಲ್ಲಿರುವ ಈ ವಿಟಮಿನ್ C ದೇಹದ ರಕ್ಷಣಾ ವ್ಯವಸ್ಥೆಯನ್ನು ಸಧೃಡಗೊಳಿಸುತ್ತದೆ. ಅದೇ ರೀತಿ ಈ ವಿಟಮಿನ್ C ಕೊಲ್ಲಾಜೆನ್ ಎಂಬ ಪ್ರೋಟೀನ್ ಉತ್ಪಾದನೆಗೆ ಸಹಕಾರಿಯಾಗುತ್ತದೆ ಮತ್ತು ಆ ಮೂಲಕ ಚರ್ಮದ ಆರೋಗ್ಯ, ಕೂದಲುಗಳ ಕಾಂತಿ ಮತ್ತು ಉಗುರುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.
7. ಜೀರ್ಣಕ್ರಿಯೆಗೆ ಪೂರಕ:
ಕೋಸುಗಡ್ಡೆಯಲ್ಲಿರುವ ಅತಿಯಾದ ನಾರಿನಂಶ ಕರುಳಿನ ಚಲನೆ ಮತ್ತು ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಮಲಬದ್ಧತೆಯನ್ನು ತಡೆಯುತ್ತದೆ. ಕರುಳಿನಲ್ಲಿ ಪೋಷಕಾಂಶ ಹೀರುವಿಕೆಗೆ ಪೂರಕವಾದ ವಾತವರಣ ಸೃಷ್ಟಿಸುತ್ತದೆ. ಕರುಳಿನ ಉರಿಯೂತವನ್ನು ನಿಯಂತ್ರಿಸುತ್ತದೆ. ದೊಡ್ಡ ಕರುಳಿಗೆ ಕ್ಯಾನ್ಸರ್ ಬರುವುದನ್ನು ಈ ಹೆಚ್ಚಾದ ನಾರಿನಂಶ ತಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಕರುಳಿನ ಕಿರಿಕಿರಿ ಖಾಯಿಲೆ (IBS) ಇರುವವರು ಹೆಚ್ಚು ಹಿತಮಿತವಾಗಿ ಕೋಸುಗಡ್ಡೆ ಸೇವಿಸತಕ್ಕದ್ದು. ಅತಿಯಾಗಿ ಬಳಸಿದ್ದಲ್ಲಿ ಹೊಟ್ಟೆ ಉಬ್ಬರಿಸಿದಂತಾಗುವ ಸಾಧ್ಯತೆ ಇದೆ. ಅದೇ ರೀತಿ ಕೋಸುಗಡ್ಡೆಯಲ್ಲಿ ಹೇರಳವಾಗಿ ವಿಟಮಿನ್ K ಇರುವುದರಿಂದ ಅದು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಈ ಕಾರಣದಿಂದ ರಕ್ತದ ಸಾಂದ್ರತೆಯಲ್ಲಿ ಕಡಿಮೆಯಾಗಿಸುವ ಔಷಧಿ ತೆಗೆದುಕೊಳ್ಳುವಾಗ ಈ ಕೋಸುಗಡ್ಡೆ ಬಳಸುವುದು ಸೂಕ್ತವಲ್ಲ ಎಂದು ತಿಳಿದುಬಂದಿದೆ.
8. ಕಣ್ಣಿನ ಆರೋಗ್ಯಕ್ಕೆ ಪೂರಕ:
ಕೋಸುಗಡ್ಡೆಯಲ್ಲಿ ಬೀಟಾ ಕೆರೋಟಿನ್ ಎಂಬ ರಾಸಾಯನಿಕ ಹೇರಳವಾಗಿದೆ. ಅದೇ ನಮ್ಮ ದೇಹದೊಳಗೆ ವಿಟಮಿನ್C C ಗಿ ಪರಿವರ್ತನೆ ಆಗುತ್ತದೆ. ನಮ್ಮ ಕಣ್ಣಿನ ಆರೋಗ್ಯಕ್ಕೆ ಮತ್ತು ಅಂಧತ್ವ ಬರದಂತೆ ತಡೆಯುವಲ್ಲಿ ವಿಟಮಿನ್ C ಬಹು ಮುಖ್ಯ ಭೂಮಿಕೆ ವಹಿಸುತ್ತದೆ.
9. ಗರ್ಭಿಣಿಯರ ಆರೋಗ್ಯಕ್ಕೆ ಪೂರಕ:
ಕೋಸುಗಡ್ಡೆಯಲ್ಲಿ ಅತೀ ಹೆಚ್ಚು ‘ಪೋಲೇಟ್’ ಇರುತ್ತದೆ. ಜೀವಕೋಶಗಳ ಬೆಳವಣಿಗೆ ಮತ್ತು ಜನ್ಮಜಾತ ನ್ಯೂನತೆಗಳನ್ನು ತಡೆಯಲು ಈ ಪೋಲೀಟ್ ಧಾತು ಅತೀ ಅವಶ್ಯಕ. ಈ ಕಾರಣದಿಂದ ಗರ್ಭಿಣಿ ಸ್ರೀಯರಿಗೆ ‘ಕೋಸುಗಡ್ಡೆ’ ಒಂದು ರೀತಿಯಲ್ಲಿ ಅಮೃತಸದೃಶ ತರಕಾರಿ ಎಂದರೆ ತಪ್ಪಾಗಲಾರದು.
10. ಮಹಿಳೆಯರ ಆರೋಗ್ಯಕ್ಕೆ ಪೂರಕ:
ಕೋಸುಗಡ್ಡೆಯಲ್ಲಿರುವ ಇಂಡೋಲ್ ಎಂಬ ರಾಸಾಯನಿಕ ಮಹಿಳೆಯರಲ್ಲಿ ಕಂಡು ಬರುವ ಇಸ್ಟ್ರೋಜಿನ್ ರಸದೂತಗಳ ಕಾರ್ಯಕ್ಷಮತೆಯನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದ ಮಹಿಳೆಯರ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಈ ಕೋಸುಗಡ್ಡೆ ಅತ್ಯವಶ್ಯಕ.
11. ತೂಕ ನಿಯಂತ್ರಣ
ಒಂದು ಕಪ್ ಅಂದರೆ 100 ಗ್ರಾಂ ಬ್ರೋಕೋಲಿಯಲ್ಲಿ ಅತೀ ಹೆಚ್ಚು ನಾರಿನಂಶ ಇದ್ದು, ಅತೀ ಕಡಿಮೆ ಅಂದರೆ 20 ಕ್ಯಾಲೋರಿ ಇರುತ್ತದೆ. ಹೆಚ್ಚಿನ ನಾರಿನಂಶದಿಂದ ಬೇಗನೆ ಹೊಟ್ಟೆ ತುಂಬುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಬರುತ್ತದೆ.
12. ರಕ್ತ ಹೆಪ್ಪುಗಟ್ಟಲು ಸಹಕಾರಿ:
ಕೋಸುಗಡ್ಡೆಯಲ್ಲಿರುವ ಹೆಚ್ಚಾದ ವಿಟಮಿನ್ K, ರಕ್ತ ಹೆಪ್ಪುಗಟ್ಟಿವಿಕೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ದೇಹಕ್ಕೆ ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಮತ್ತು ಗಾಯ ವಾಸಿಯಾಗಲು ವಿಟಮಿನ್ K ಅತೀ ಅವಶ್ಯಕ.
13. ಅತೀ ಕಡಿಮೆ ಶರ್ಕರಪಿಷ್ಠ:
ಕೋಸುಗಡ್ಡೆಯಲ್ಲಿ ಅತೀ ಕನಿಷ್ಠ ಪ್ರಮಾಣದ ಶರ್ಕರಪಿಷ್ಠ ಇರುತ್ತದೆ. ಒಂದು ಕಪ್ ಬ್ರೋಕೋಲಿಯಲ್ಲಿ 2.5 ಗ್ರಾಂ ಇರುವ ಕಾರಣದಿಂದ, ರಕ್ತದಲ್ಲಿನ ಗ್ಲೋಕೋಸ್ ಪ್ರಮಾಣ ಏರುವ ಸಾಧ್ಯತೆ ಅತೀ ಕಡಿಮೆ ಇರುತ್ತದೆ. ಮಧುಮೇಹಿಗಳಲ್ಲಿ ಈ ಕೋಸುಗಡ್ಡೆ ಬಹಳ ಉಪಯುಕ್ತ ಎಂದೂ ತಿಳಿದುಬಂದಿದೆ.
ಕೊನೆ ಮಾತು:
ವಿಟಮಿನ್, ಪ್ರೋಟೀನ್, ಖನಿಜಾಂಶಗಳನ್ನು ಹೇರಳವಾಗಿ ಹೊಂದಿರುವ ಕೋಸುಗಡ್ಡೆಯನ್ನು ಪರಿಪೂರ್ಣವಾದ ತರಕಾರಿಯಂತಲೂ, ಸೂಪರ್ ಫುಡ್ ಅಂತಲೂ ಆಹಾರ ತಜ್ಞರು ಸಂಭೋದಿಸುತ್ತಾರೆ. ಅತೀ ಕಡಿಮೆ ಕ್ಯಾಲೋರಿ, ಅತೀ ಹೆಚ್ಚಿನ ನಾರಿನಂಶ ಹಾಗೂ ಸಾಕಷ್ಟು ಪೋಷಕಾಂಶ ಹೊಂದಿರುವ ಈ ಕೋಸುಗಡ್ಡೆ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಪೂರಕವಾದ ಆಹಾರ ಎಂಬ ಬಿರುದನ್ನು ಅನಾಯಾಸವಾಗಿ ಪಡೆದಿರುವುದು ಹೆಚ್ಚಿನವರಿಗೆ ತಿಳಿದಿರುವುದೇ ಬಹಳ ವಿಪರ್ಯಾಸದ ವಿಚಾರ. ಏನು ತಿನ್ನಬೇಕು, ಹೇಗೆ ತಿನ್ನಬೇಕು, ಎಷ್ಟು ತಿನ್ನಬೇಕು ಎನ್ನುವುದರ ಅರಿವು ಜನರಿಗೆ ಬಂದಲ್ಲಿ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ಆರಂಭದಲ್ಲಿಯೇ ಪರಿಹಾರವಾಗುತ್ತದೆ. ಆದರೆ ದುರಂತವೆಂದರೆ ನಮಗೆ ಏನು ತಿನ್ನಬೇಕು, ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದರ ಪರಿಜ್ಞಾನ ಇಲ್ಲ. ಇದೆಲ್ಲಾ ಅರಿವಾಗುವ ಹೊತ್ತಿಗೆ ದೇಹ ರೋಗಗಳ ಹಂದರವಾಗಿ ಏನೂ ತಿನ್ನಲಾಗದ ಸ್ಥಿತಿಗೆ ತಲುಪಿರುತ್ತೇವೆ.
ಒಟ್ಟಿನಲ್ಲಿ ವಿಟಮಿನ್ A, B6, B12, D, K, E, ಪೋಲಿಕ್ ಆಮ್ಲ, ಕಬ್ಬಿಣ, ಸತು, ರಂಜಕ, ಕ್ಯಾಲ್ಸಿಯಂ, ಪೊಟಾಷಿಯಂ, ಮೆಗ್ನಿಶಿಯಂ, ಆಂಟಾಕ್ಸಿಡೆಂಟ್ ಹೀಗೆ ಎಲ್ಲವನ್ನೂ ಹೇರಳವಾಗಿ ಹೊಂದಿರುವ ಕೋಸುಗಡ್ಡೆ ನಿಜವಾಗಿಯೂ ಒಂದು ರೀತಿಯಲ್ಲಿ ಪರಿಪೂರ್ಣ ತರಕಾರಿ ಎಂದರೆ ಅತಿಶಯೋಕ್ತಿಯಾಗಲಾರದು ಈ ಎಲ್ಲಾ ಕಾರಣದಿಂದ ನಮ್ಮ ತಿನ್ನುವ ಆಹಾರದಲ್ಲಿ ಈ ತರಕಾರಿಗೆ ಅಗ್ರ ಸ್ಥಾನ ನೀಡಿದಲ್ಲಿ ಹೆಚ್ಚಿನ ಎಲ್ಲಾ ರೋಗಗಳನ್ನು ಬರದಂತೆ ತಡೆಯಲು ಸಾಧ್ಯವಾಗಲೂಬಹುದು ಮತ್ತು ಅದರಲ್ಲಿಯೇ ನಮ್ಮೆಲ್ಲರ ಹಿತ ಅಡಗಿದೆ.
-ಡಾ|| ಮುರಲೀ ಮೋಹನ್ಚೂಂತಾರು
BDS, MDS,DNB,MOSRCSEd(U.K), FPFA, M.B.A
ಮೊ: 9845135787
drmuraleechoontharu@gmail.com
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ