ಪುತ್ತೂರು: ಬರವಣಿಗೆ ಅನ್ನೋದು ಓದುಗರನ್ನು ಆಕರ್ಷಿಸುವಂತಿರಬೇಕು. ಹಾಗಾಗಿ ನಾವು ಆಯ್ಕೆ ಮಾಡಿಕೊಳ್ಳುವಂತಹ ವಿಷಯ ಅರ್ಥಪೂರ್ಣವಾಗಿ ಮತ್ತು ಕೊನೆಯ ತನಕ ಓದುವಂತಿರಬೇಕು ಎಂದು ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಹಾಗೂ ಕಾಲೇಜಿನ ಸ್ನಾತಕೋತ್ತರ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರೀಪ್ರಿಯ ಪಿ. ಹೇಳಿದರು.
ಕಾಲೇಜಿನ ಐಕ್ಯುಎಸಿ ಘಟಕ ಮತ್ತು ಆಂಗ್ಲ ವಿಭಾಗದ ಸಹಯೋಗದಲ್ಲಿ ಲಿಟರರಿ ಕ್ಲಬ್ ಆಯೋಜಿಸಿದ ಸ್ಕ್ರಿಪ್ಟ್ ರೈಟಿಂಗ್ ಹಾಗೂ ಅಂಕರಿಂಗ್ ಕುರಿತಾದ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ನಮ್ಮ ಬರವಣಿಗೆಯಿಂದ ಉತ್ತಮ ಮಾಹಿತಿ ಮತ್ತು ಜ್ಞಾನ ಸಿಗುವಂತಿರಬೇಕು. ಬದಲಿಗೆ ಯಾರಿಗೂ ತಪ್ಪು ಮಾಹಿತಿಗಳು ನೀಡುವಂತಿರಬಾರದು. ಬರವಣಿಗೆಯಲ್ಲಿ ಭಾಷಾ ಬಳಕೆ, ವ್ಯಾಕರಣ, ಪದಬಳಕೆ, ಬಹಳ ಮುಖ್ಯವಾಗುವುದು ಎಂದು ಸ್ಕ್ರಿಪ್ಟ್ ರೈಟಿಂಗ್ ಬಗ್ಗೆ ಮಾಹಿತಿಗಳನ್ನು ನೀಡಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಮತ್ತು ಸ್ನಾತಕೋತ್ತರ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವಿಷ್ಯ ಶೆಟ್ಟಿ ಮಾತನಾಡಿ ನಿರೂಪಣೆಗೆ ಭಾಷೆ ಶುದ್ಧತೆ ಮತ್ತು ಜ್ಞಾನ ಇರಬೇಕು. ಭಾಷಾ ಶುದ್ಧತೆಗೆ ಪುಸ್ತಕಗಳನ್ನು ಓದುವುದು ಬಹಳ ಮುಖ್ಯ, ಪುಸ್ತಕಗಳನ್ನು ಓದಿದಷ್ಟು ಪದಗಳ ಬೇರೆ ಬೇರೆ ಅರ್ಥಗಳು ಮತ್ತು ಜ್ಞಾನ ಸಿಗುವುದು. ನಿರೂಪಣೆಯಲ್ಲಿ ತಪ್ಪುಗಳಾಗುವುದು ಸಹಜ. ಆದರೆ ತಪ್ಪುಗಳು ಏನಾಗಿವೆ ಎಂದು ತಿಳಿದು ಅದನ್ನು ಸರಿಪಡಿಸಿದರೆ ಉತ್ತಮ ನಿರೂಪಕಿಯಾಗಲು ಸಹಾಯವಾಗುವುದು ಎಂದರು.
ಆಂಗ್ಲ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್. ಮಾತನಾಡಿ, ಮಾತೇ ಮಾಣಿಕ್ಯ ಹಾಗಾಗಿ ನಮ್ಮ ಮಾತುಗಳು ಭಾವನೆಗಳಿಂದ ತುಂಬಿರಬೇಕು ಅದು ಬರವಣಿಗೆಯಲ್ಲಿ ಮೂಡಿಬರಬೇಕು. ಮರದ ಬೇರು ಭೂಮಿಯ ಆಳಕ್ಕೆ ಹೋದ ಹಾಗೆ ಮರಗಳು ದೊಡ್ಡದಾಗಿ ಬೆಳೆಯುತ್ತವೆ. ಹಾಗೆಯೇ ನಮ್ಮ ಪ್ರಯತ್ನ ಎಷ್ಟು ಆಳವಾಗಿರುವುದೋ ಅಷ್ಟೇ ದೊಡ್ಡ ಸಾಧನೆಯನ್ನು ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಕೆಲಸ ಅನ್ನೋದು ನಮ್ಮನ್ನು ನಾವು ಮಾರಿಕೊಳ್ಳುವಂತಿರಬಾರದು. ಆತ್ಮತೃಪ್ತಿಗಾಗಿ ಕೆಲಸಗಳನ್ನು ಮಾಡಬೇಕು. ನಮ್ಮ ಅಭಿರುಚಿ ಮತ್ತು ಆಸಕ್ತಿಗಳನ್ನು ನಾವು ಹೆಚ್ಚಿಸಿಕೊಳ್ಳಬೇಕು ಎಂದು ನುಡಿದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕಿ ಅಂಬಿಕಾ, ಸರಸ್ವತಿ ಸಿ.ಕೆ, ಸೌಂದರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಪೌರ್ಣಿಕ ಪ್ರಾರ್ಥಿಸಿದರು ದ್ವಿತೀಯ ಬಿ.ಎ. ವಿದ್ಯಾರ್ಥಿಗಳಾದ ಸ್ಪೂರ್ತಿ ಸ್ವಾಗತಿಸಿ, ವಾಗ್ದೇವಿ ವಂದಿಸಿದರು. ಧನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ