ಬೆಂಗಳೂರು: ಸರ್ಕಾರ ಸೋಮವಾರ ಸಂಜೆಯೊಳಗೆ ಸದನದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡದಿದ್ದರೆ ಬುಧವಾರ ಕರ್ನಾಟಕ ಬಂದ್ ಗೆ ತೀರ್ಮಾನಿಸುತ್ತೇವೆ ಎಂದು ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜು ಮತ್ತು ಸಾರಾ ಗೋವಿಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದ ಸಾ.ರಾ ಗೋವಿಂದು "ಎಂಇಎಸ್ ಸಂಘಟನೆಗೆ ರಾಜ್ಯದಲ್ಲಿ ನಿಷೇಧ ಹೇರಬೇಕು. ಇಂದು ಸಂಜೆಯೊಳಗೆ ಸರ್ಕಾರ ನಿರ್ಣಯಕ್ಕೆ ಬಾರದಿದ್ದಲ್ಲಿ ಕನ್ನಡ ಪರ ಸಂಘಟನೆಗಳು ಬುಧವಾರ ಸಭೆ ನಡೆಸಿ ಕರ್ನಾಟಕ ಬಂದ್ ಗೆ ನಿರ್ಧರಿಸುತ್ತೇವೆ" ಎಂದು ಹೇಳಿದ್ದಾರೆ.
"ಕನ್ನಡಿಗರ ಹೃದಯಕ್ಕೆ ಕೊಳ್ಳಿ ಇಟ್ಟ ಆ ಸಂಘಟನೆ ವಿರುದ್ಧ ಎಲ್ಲಾ ಕನ್ನಡಿಗರು ಭೇಧ ಮರೆತು ಹೋರಾಟ ಮಾಡಬೇಕು. ಎಲ್ಲರೂ ಸ್ವತಃ ಆಸಕ್ತಿಯಿಂದ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಯಾರನ್ನೂ ಆಮಂತ್ರಿಸುವ ಅಗತ್ಯವಿಲ್ಲ " ಎಂದರು.