|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನುಡಿನಮನ: ಮರೆಯಾದ ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯಣ್ಣ; ಮೂರು ತಲೆಮಾರುಗಳ ಪೋಷಕ ಶಿವರಾಂ

ನುಡಿನಮನ: ಮರೆಯಾದ ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯಣ್ಣ; ಮೂರು ತಲೆಮಾರುಗಳ ಪೋಷಕ ಶಿವರಾಂ



ಹುಟ್ಟು ಉಚಿತ- ಸಾವು ಖಚಿತ ಅನ್ನೋ ಮಾತಿದೆಯಲ್ವಾ. ಹುಟ್ಟಿದ ಪ್ರತೀ ಜೀವಿ ಈ ಭೂಮಿಯಲ್ಲಿ ಸಾಯುವಂತಹದ್ದೇ. ಜನನ ದೇವರ ವರವಾದರೆ ಮರಣ ದೇವರು ನಮಗಿತ್ತ ವಿರಾಮ ಎಂದು ಬಲ್ಲವರು ನುಡಿಯುತ್ತಾರೆ. ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಒಬ್ಬ ಅದ್ಭುತ, ಉತ್ತಮ ನಟನನ್ನು ಕಳೆದುಕೊಂಡಿದ್ದೆವು. ಇದೀಗ ಮತ್ತೊಂದು ಅಂತಹುದೇ ಆಘಾತದ ಸುದ್ದಿ... ಮನಸ್ಸನ್ನು ಮೌನವಾಗಿಸಿದೆ.


ಯುಗದ ಅಂತ್ಯವೋ, ಪ್ರಕೃತಿಯ ಆಟವೋ ತಿಳಿದಿಲ್ಲ. ಕಾಲ ಹೋದಂತೆ ಇಂತಹ ಅನೇಕ ಸಾವು ನೋವುಗಳ ಸುದ್ದಿ ಕೇಳುತ್ತಲೇ ಬಹುಶಃ ಎಲ್ಲರ ಮನಸ್ಸಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.


ಹೌದು ಇವತ್ತು ನಮ್ಮನೆಲ್ಲ ಮತ್ತೆ ಆಘಾತಗೊಳಿಸಿದ ವಿಷಯವೆಂದರೆ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಎಸ್. ಶಿವರಾಂ ರವರ ನಿಧನ. ಇವರು ಕನ್ನಡ ಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡ ಹಿರಿಯ ನಟ, ಪ್ರತಿಭಾನ್ವಿತ ಕಲಾವಿದ.  


ಚಂದನವನಕ್ಕೆ ಶೋಭೆ ಇದ್ದದ್ದೇ ಇಂತಹ ಹಿರಿಯ ಉದಯೋನ್ಮುಖ ಕಲಾವಿದರಿಂದ. ಕರ್ನಾಟಕ- ತಮಿಳುನಾಡು ಗಡಿಭಾಗದ ಪುಟ್ಟಹಳ್ಳಿ ಚೂಡಸಂದ್ರ.‌ ಪ್ರಾಥಮಿಕ ಶಿಕ್ಷಣವನ್ನು ತಮ್ಮ ತವರೂರಲ್ಲೇ ಮುಗಿಸಿದ ಇವರು ಮತ್ತೆ ಆಕರ್ಷಿತರಾದದ್ದು ಸಾಂಸ್ಕೃತಿಕ ನಗರಿ ಬೆಂಗಳೂರನ್ನು ನೋಡಿ. ಬರೀ ಬೆಂಗಳೂರು ಮಾತ್ರವಲ್ಲ. ಕಲೆಯಲ್ಲೂ ಆಸಕ್ತಿ ಹೊಂದಿದ್ದ ಇವರ ಮೇಲೆ ಪ್ರಭಾವ ಬೀರಿದ್ದು ಗುಬ್ಬಿ ವೀರಣ್ಣನ ನಾಟಕಗಳು. ನಾಟಕಗಳನ್ನು ನೋಡುನೋಡುತ್ತಿದ್ದಂತೆ ಇವರೂ ರಂಗಭೂಮಿ ಪ್ರವೇಶಿಸಿದ್ದರು. ಮುಂದೆ ಸಿನಿಮಾ ಲೋಕಕ್ಕೆ ಕಾಲಿಡಲು ಇದೇ ಅವರ 'ಆದಿ'ಯಾಯಿತು. 1958 ಇವರು ಬಣ್ಣದ ಬದುಕಿಗೆ ತಿರುವು ನೀಡಿದ ವರ್ಷ. ನಿರ್ದೇಶಕ ಕು.ರಾ ಸೀತಾರಾಮಶಾಸ್ತ್ರಿ ಅವರ ಸಹಾಯಕರಾಗಿ ಶಿವರಾಂ ಕೆಲಸ ಮಾಡುತ್ತಿದ್ದರು. ಆಮೇಲೆ ಇವರು "ಬೆರೆತ ಜೀವ"  ಸಿನಿಮಾದಲ್ಲಿ ನಟನೆಯ ಮೊದಲು ಹೆಜ್ಜೆ ಇಟ್ಟದ್ದು. ಪ್ರತಿಭೆ ಸಾಧನೆಯಾಗಿ ಬದಲಾದದ್ದೇ ಅಂದಿನಿಂದ. 86ಚಲನಚಿತ್ರಗಳಲ್ಲಿ ನಟಿಸಿದ ಕೀರ್ತಿ ಇವರದ್ದು. 6 ದಶಕಗಳಲ್ಲಿ ಸಿನಿಮಾ ರಂಗದಲ್ಲಿ ಅದ್ಭುತ ಅನುಭವವನ್ನುಂಡ ಒಬ್ಬ ಹಿರಿಯ ಕಲಾವಿದ ಎಸ್.ಶಿವರಾಂ.


ಸಿನಿಮಾ ಮಾತ್ರವಲ್ಲದೆ ಧಾರವಾಹಿಗಳಲ್ಲೂ ಪೋಷಕ ನಟನಾಗಿ ಅಭಿನಯಿಸಿದ ಇವರು ಅಭಿಮಾನಿಗಳ ನೆಚ್ಚಿನ ಹಿರಿಯ ಕಲಾವಿದ,  ಮಕ್ಕಳ ಪ್ರೀತಿಯ ಅಜ್ಜ, ಚಿತ್ರರಂಗದ ಪ್ರೀತಿಯ ಶಿವರಾಮಣ್ಣ. ಕ್ಯಾಮೆರಾ ಸಹಾಯಕ, ನಿರ್ದೇಶಕ, ನಟನಾಗಿ ನಿಜವಾಗಿಯೂ ಚಿತ್ರರಂಗವನ್ನು ಪೋಷಿಸಿದ ಒಬ್ಬ ಸೌಜನ್ಯವಂತ ಪೋಷಕ. ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲುಜೇನು, ಹೊಂಬಿಸಿಲು, ಸಿಂಹದ ಮರಿ ಸೈನ್ಯ, ಮಕ್ಕಳ ಸೈನ್ಯ ಚಿತ್ರಗಳಲ್ಲೂ ಪಾತ್ರಕ್ಕೆ ಜೀವ ತುಂಬಿದವರು. 


ಇವರ "ಬದುಕು" ಧಾರವಾಹಿ ಕೂಡ ಅಭಿಮಾನಿಗಳನ್ನು ಸಂಪಾದಿಸಿತ್ತು. ಒಟ್ಟಾರೆಯಾಗಿ ಸಿನಿಮಾದ ಎಲ್ಲ ಮಜಲುಗಳನ್ನು ಪ್ರವೇಶಿಸಿ ಸಿನಿಮಾ ಲೋಕಕ್ಕೆ ಮಾರ್ಗದರ್ಶನ ನೀಡಿ ಅನುಭವದ ಕಿವಿಮಾತನ್ನಾಡುತ್ತಿದ್ದ ಮುಗ್ಧ "ಪೋಷಕ". 


ಕಲಾಕ್ಷೇತ್ರದಲ್ಲಿ ಸಾಧನೆಗೈದ ಇವರಿಗೆ 2013ರಲ್ಲಿ ಡಾ.ಬಿ ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಅಷ್ಟೇ ಅಲ್ಲದೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.  


ಇಂತಹ ಒಬ್ಬ ಉತ್ತಮ ಹಿರಿಯ ನಟನನ್ನು ಕಳೆದುಕೊಂಡ ನೋವು ಚಿತ್ರರಂಗಕ್ಕೆ ಮಾತ್ರವಲ್ಲ. ಇಡೀ ಅಭಿಮಾನಿ ಬಳಗವನ್ನೂ ತಲ್ಲಣಗೊಳಿಸಿದೆ. ಸಿನಿಮಾ ಲೋಕ ಕಂಡ ಸರಳ ಸಜ್ಜನ ಮಹಾಪುರುಷ ಎಸ್.ಶಿವರಾಂ ಅವರಿಗೆ ಸದ್ಗತಿ ದೊರೆಯಲಿ.

-ಅರ್ಪಿತಾ ಕುಂದರ್


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم