ಪ್ರೊ. ಟಿ.ಎಸ್. ನಾಗರಾಜ ಶೆಟ್ಟರ ಅನುವಾದ ಸಾಹಿತ್ಯ ಕೃತಿ ವಿಮರ್ಶೆ

Upayuktha
0



ಪ್ರೊ. ಟಿ.ಎಸ್. ನಾಗರಾಜ ಶೆಟ್ಟರಿಗೆ ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ 2020ನೆಯ ಸಾಲಿನ ಅನುವಾದ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ ತೆಲುಗಿನ 'ವಿಶ್ವನಾಥ ಸತ್ಯನಾರಾಯಣ' ಕೃತಿಯನ್ನು ಕುರಿತು ನಾನು ಬರೆದ ವಿಮರ್ಶೆ ಇಲ್ಲಿದೆ.    


ಬಹುಮಾನಕ್ಕಾಗಿ ಲೇಖಕರನ್ನು ಆಯ್ಕೆಮಾಡುವ ಸಮಿತಿಯ ಮೂವರು ಮೌಲ್ಯಮಾಪಕರಲ್ಲಿ ನಾನೂ ಒಬ್ಬನಾಗಿದ್ದೆ.


    


ಕೃತಿ ಕುರಿತ ವಿಮರ್ಶೆ:   

ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲುವಿನ ಪ್ರೊ. ಟಿ.ಎಸ್. ನಾಗರಾಜ ಶೆಟ್ಟಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು. ತೆಲುಗು ಮಾತೃಭಾಷಿಕರು. ಹಾಗಾಗಿ ತೇಟ ತೆಲುಗು ಮತ್ತು ಕಸ್ತೂರಿ ಕನ್ನಡ; ಈ ಎರಡೂ ಭಾಷೆಗಳ ಸೂಕ್ಷ್ಮಗಳನ್ನೂ, ನುಡಿಗಟ್ಟುಗಳನ್ನೂ ಬಲ್ಲವರು. ಎರಡೂ ಭಾಷಿಕ ಸಮುದಾಯಗಳ ಜೀವನ ವಿಧಾನವನ್ನು ಅರಿತವರು.  ಹಾಗಾಗಿ ತೆಲುಗನ್ನು ಕನ್ನಡಿಸುವುದೆಂದರೆ ಅವರಿಗೆ ಲೀಲಾಜಾಲ. ನೀರು ಕುಡಿದಷ್ಟು ಸಲೀಸು; ನೈಸ್ ರಸ್ತೆಯಲ್ಲಿ ವಾಹನ ಓಡಿಸಿದಷ್ಟು ಸರಾಗ.      


ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅವರು ತೆಲುಗಿನಿಂದ ಕನ್ನಡಕ್ಕೆ ಭಾಷಾಂತರಿಸಿರುವ ಸಂಪತ್‌ ಕುಮಾರಾಚಾರ್ಯ ಅವರ ರಚನೆ ಜ್ಞಾನಪೀಠ ಪ್ರಶಸ್ತಿ ಗ್ರಹೀತ ಉದ್ಧಾಮ ತೆಲುಗು ಸಾಹಿತಿ ವಿಶ್ವನಾಥ ಸತ್ಯನಾರಾಯಣ ಅವರ ಜೀವನಚರಿತ್ರೆ ಕೃತಿಯು ಅನುವಾದದ ದೃಷ್ಟಿಯಿಂದ ಅನನ್ಯವೂ, ಅಸದೃಶವೂ ಆಗಿದೆ. ಶೆಟ್ಟರು ಎರಡೂ ಭಾಷೆಗಳ ನಾಡಿಯನ್ನು ಹಿಡಿಯಬಲ್ಲವರು. ಆದ್ದರಿಂದ ಅನುವಾದದಲ್ಲಿ ಜೀವಂತಿಕೆಯಿದೆ; ಸಾರವಿದೆ, ಸತ್ತ್ವವಿದೆ. ತೆಲುಗು ಕೃತಿಯ ಚಕ್ಕುಬಂದಿ ಒಂದಿನಿತೂ ಚದುರದೆ ಕನ್ನಡಕ್ಕೆ ಸರಿದು ಬಂದಿದೆ. 

ಇದು ಸಾಹಿತಿಯೊಬ್ಬರ ಜೀವನಚರಿತ್ರೆ. ಏಕವಿಷಯ ಪ್ರಕಾರಕ್ಕೆ ಸೇರಿದ ಹೊತ್ತಗೆ. ಹಾಗಾಗಿ ಇದರ ಅನುವಾದದಲ್ಲಿ ಸವಾಲುಗಳಿರದು. ಅನುವಾದಕರಿಗೆ ಸುಲಿದ ಬಾಳೆಯ ಹಣ್ಣು,  ಉಷ್ಣವಳಿದ ಹಾಲು. ಜೊತೆಗೆ ಸಿಗುರು ತೆಗೆದ ಕಬ್ಬಿನ ಜಲ್ಲೆ! ಓದುಗರಿಗೆ ಸುಲಭದ ತುತ್ತು.      


ಇದು ನಿರಾಡಂಬರ ಅನುವಾದ. ಅದನ್ನೆಲ್ಲೂ ಸಂಕೀರ್ಣಗೊಳಿಸದ ಶ್ರೇಯ ನಾಗರಾಜ ಶೆಟ್ಟರದು. ಅಭಿವ್ಯಕ್ತಿ ಜಟಿಲವಾದರೆ, ಸಂವಹನ ಕಬ್ಬಿಣದ ಕಡಲೆಯಾಗುತ್ತದೆ.  ಹಳಿತಪ್ಪಿದ ಯಾವುದೇ ಕೃತಿಯಾದರೂ, ಕೇವಲ ಭಾಷಿಕ-ಬೌದ್ಧಿಕ ಹೊರೆಯಾಗುತ್ತದೆ.     


ಶೆಟ್ಟರ ಸರಳ ಅನುವಾದಕ್ಕೆ ಮಾದರಿಯಾಗಿ ಪುಟ 13ರ ಈ ಸಾಲುಗಳನ್ನು ಗಮನಿಸಬಹುದು:   


"ಅಚ್ಯುತಲಕ್ಷ್ಮಿ ಎಂದರೆ ಸತ್ಯನಾರಾಯಣರಿಗೆ ಇನ್ನಿಲ್ಲದ ಪ್ರೀತಿ. ಅವರು ತಮ್ಮ ಚಿಕ್ಕಂದಿನಲ್ಲಿ ಆಕೆಯ (ಅತ್ತೆಯವರ) ಮನೆಯಲ್ಲೇ ಇದ್ದು ಸ್ವಲ್ಪ ಕಾಲ ವ್ಯಾಸಂಗ ಮಾಡಿದರು. ಆಕೆಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಯಿತು..."

- ಕೆ. ರಾಜಕುಮಾರ್


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top