|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷಾಂಗಣದಿಂದ 9ನೇ ವರ್ಷದ ನುಡಿಹಬ್ಬ - ತಾಳಮದ್ದಳೆ ಪರ್ವ

ಯಕ್ಷಾಂಗಣದಿಂದ 9ನೇ ವರ್ಷದ ನುಡಿಹಬ್ಬ - ತಾಳಮದ್ದಳೆ ಪರ್ವ

 

ಯಕ್ಷಗಾನ ಜನಮೆಚ್ಚಿದ ಕಲೆ: ಕೆ.ಕೆ .ಶೆಟ್ಟಿ ಅಹ್ಮದ್ ನಗರ


ಮಂಗಳೂರು: 'ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತಾಗಿ ನಾಡು ಹೊರನಾಡುಗಳಲ್ಲಿ ಗೌರವ ಭಾವನೆ ಇದೆ. ಪೌರಾಣಿಕ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ ಅವರಲ್ಲಿ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ. ಪಂಡಿತ ಪಾಮರರನ್ನು ಆಟ-ಕೂಟಗಳ ಮೂಲಕ ರಂಜಿಸುವ ಯಕ್ಷಗಾನ ಜನಮೆಚ್ಚಿದ ಕಲೆ' ಎಂದು ಅಮ್ಮದ್ ನಗರದ ಉದ್ಯಮಿ ಹಾಗೂ ಕುಂಬಳೆ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಿರ್ಮಾತೃ ಕೆ.ಕೆ.ಶೆಟ್ಟಿ ಹೇಳಿದರು.


'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದೊಂದಿಗೆ ನಗರದ ವಿ.ವಿ.ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ ಒಂಭತ್ತನೇ ವರ್ಷದ ಕನ್ನಡ ನುಡಿಹಬ್ಬ 'ಯಕ್ಷಗಾನ ತಾಳಮದ್ದಳೆ ಪರ್ವ - 2021' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ನಗರದ ಹಿರಿಯ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್ ಮಾತನಾಡಿ 'ವೇದ, ಉಪನಿಷತ್ತು, ಭಗವದ್ಗೀತೆ ಹಾಗೂ ಭಾರತೀಯ ಮಹಾಕಾವ್ಯಗಳ ಸಂದೇಶವನ್ನು ಕಲಾವಿದರು ಸುಲಲಿತವಾಗಿ ತಮ್ಮ ಪ್ರೌಢ ಮಾತುಗಾರಿಕೆಯಿಂದ ಅನಾವರಣ ಗೊಳಿಸುವ ತಾಳಮದ್ದಳೆ ಒಂದು ನೈಜ ತತ್ವಾರ್ಥ ಗೋಷ್ಠಿ. ಅಂತಹ ಸರಣಿ ಯಕ್ಷಗಾನ ತಾಳಮದ್ದಳೆ ಕೂಟಗಳನ್ನು ವರ್ಷಂಪ್ರತಿ ನಡೆಸುವ ಯಕ್ಷಾಂಗಣದ ಕಾರ್ಯ ಶ್ಲಾಘನೀಯ' ಎಂದರು.


ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ:


ಸಮಾರಂಭದಲ್ಲಿ ಮೂಡಬಿದಿರೆಯ ಉದ್ಯಮಿ ಕಲಾಪೋಷಕ ಶ್ರೀಪತಿ ಭಟ್ಟರಿಗೆ  ಹಿರಿಯ ನಾಟಕಕಾರ ಸಂಜೀವ ದಂಡಕೇರಿ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ಪ್ರದಾನ ಮಾಡಿದರು. ಸುಧಾಕರ ರಾವ್ ಪೇಜಾವರ ಅಭಿನಂದಿಸಿದರು. ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಉದಯ ಚೌಟ, ವಿ.ವಿ.ಕಾಲೇಜು ಪ್ರಾಚಾರ್ಯೆ ಡಾ.ಅನುಸೂಯ ರೈ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಮತ್ತು ದಿ.ಶಿವಾನಂದ ಕರ್ಕೇರರ ಧರ್ಮಪತ್ನಿ ಪ್ರಫುಲ್ಲ ಎಸ್.ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು.


ಸಾಧಕರ ಸ್ಮರಣೆ:


ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ 2013ರಲ್ಲಿ ಪ್ರಾರಂಭವಾದ ಸಂಸ್ಥೆ ಕಳೆದ 8 ವರ್ಷಗಳಿಂದ ತಾಳಮದ್ದಳೆ ಸಪ್ತಾಹ ವನ್ನು ನಡೆಸುವುದರೊಂದಿಗೆ ಅಗಲಿದ ಸಾಧಕರ ಸಂಸ್ಮರಣೆಯನ್ನೂ ಮಾಡುತ್ತಿದೆ. ಅದರಂತೆ ಯಕ್ಷಾಂಗಣದ ಉಪಾಧ್ಯಕ್ಷರಾಗಿದ್ದು ಕಳೆದ ವರ್ಷ ಆಕಸ್ಮಿಕವಾಗಿ ನಿಧನಹೊಂದಿದ ಕವಿ, ನಾಟಕಕಾರ ಅತ್ತಾವರ ಶಿವಾನಂದ ಕರ್ಕೇರ ಅವರ ನೆನಪಿಗಾಗಿ ಈ ಬಾರಿ ಶಿವಾನಂದ ಸ್ಮೃತಿ ಹಾಗೂ ಇತ್ತೀಚೆಗೆ ಅಗಲಿದ ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಮತ್ತು ಭಾಗವತ ಪದ್ಯಾಣ ಗಣಪತಿ ಭಟ್ ಅವರ ನೆನಪಿಗಾಗಿ ಪುರುಷೋತ್ತಮ ಸರಣಿ ಮತ್ತು ಪದ್ಯಾಣ ಪ್ರಣತಿ ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.


ಯುವ ಪ್ರಸಂಗಕರ್ತ ಮತ್ತು ಉಪನ್ಯಾಸಕ ಡಾ.ದಿನಕರ ಎಸ್. ಪಚ್ಚನಾಡಿ ಸ್ಮೃತಿ ವಚನ ನೆರವೇರಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಮತ್ತು ಸಾಂಸ್ಕೃತಿಕ ಸಂಘಟಕ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಅವರಿಗೆ 'ಶಿವಾನಂದ ಸ್ಮೃತಿ ಗೌರವ' ನೀಡಲಾಯಿತು. ಇದೇ ಸಂದರ್ಭದಲ್ಲಿ ಕೀರ್ತಿಶೇಷ ಯಕ್ಷಗಾನ ಅರ್ಥಧಾರಿಗಳಾದ ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ.ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯನ್ನೂ ನಡೆಸಲಾಯಿತು. ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ ನುಡಿನಮನ ಸಲ್ಲಿಸಿದರು.


ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ 'ಯಕ್ಷಾಂಗಣ ಶೀರ್ಷಿಕೆ ಗೀತೆ' ಹಾಡಿದರು. ಕಾರ್ಯಾಧ್ಯಕ್ಷ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿಗಳಾದ ನಿವೇದಿತ ಎನ್.ಶೆಟ್ಟಿ ಬೆಳ್ಳಿಪ್ಪಾಡಿ ಮತ್ತು ಸುಮ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಕೆ.ರವೀಂದ್ರ ರೈ ಹರೇಕಳ ನಿರೂಪಿಸಿ, ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ವಂದಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ , ಉಮೇಶ ಆಚಾರ್ಯ ಗೇರುಕಟ್ಟೆ, ಕೃಷ್ಣಪ್ಪ ಗೌಡ ಪಡ್ಡಂಬೈಲ್, ಸಿದ್ದಾರ್ಥ ಅಜ್ರಿ ಉಪಸ್ಥಿತರಿದ್ದರು.


ತಾಳಮದ್ದಳೆ:


ಕಾರ್ಯಕ್ರಮದ ಅಂಗವಾಗಿ ಶಿವಾನಂದ ಕರ್ಕೇರ ಅವರ ನಾಟಕ ಆಧಾರಿತ 'ಕಾರ್ನಿಕೊದ ವೈದ್ಯನಾಥೆ'  ತುಳು ತಾಳಮದ್ದಳೆ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ 'ಪಾಂಚಜನ್ಯ' ಯಕ್ಷಗಾನ ಕೂಟ ಜರಗಿತು. ಪ್ರಶಾಂತ ರೈ ಪುತ್ತೂರು ಮತ್ತು ಭವ್ಯಶ್ರೀ ಕುಲ್ಕುಂದ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರು ಹಿಮ್ಮೇಳ - ಮುಮ್ಮೇಳಗಳಲ್ಲಿ ಭಾಗವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post