ಕಲಬುರ್ಗಿ: ಕಾಮಧೇನು ದೀಪಾವಳಿ ಆಚರಣೆ ಪ್ರಯುಕ್ತ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ (ರಿ) ಹಾಗೂ ಸ್ಫೂರ್ತಿ ಕ್ರಿಯೇಟಿವ್ ಮೈಂಡ್ಸ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರೂರ (ಬಿ) ತಾಲೂಕು, ಕಲಬುರ್ಗಿ ಜಿಲ್ಲೆಯಲ್ಲಿ ಗೋಮಯ ಹಣತೆ ತಯಾರಿಕೆಯ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು .
ಶಾಲೆಯ ಮುಖ್ಯಗುರುಗಳಾದ ತಾರು ಚವ್ಹಾಣ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೀಪಾವಳಿ ಬಂತೆಂದರೆ ಸಾಕು ಮನೆಗಳಲ್ಲಿ ಹೂವಿನ ಮಾಲೆ ತೋರಣಗಳು, ದೀಪಗಳ ಅಲಂಕಾರ ಜೊತೆಗೆ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುವುದನ್ನು ಕಾಣುತ್ತೇವೆ. ಸಂಭ್ರಮದ ಜೊತೆಗೆ ಪರಿಸರ ಮಾಲಿನ್ಯವಾಗದಂತೆ ಕಾಳಜಿ ವಹಿಸಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ ಅಧ್ಯಕ್ಷ ಶಿವರಾಜಕುಮಾರ ಹಳ್ಳಿ ಮಾತನಾಡಿ ಅನೇಕ ಆಧ್ಯಾತ್ಮಿಕ ಯಜ್ಞಗಳಲ್ಲಿ ಒಣಗಿಸಿರುವ ಬರಣಿ ಹಾಗೂ ಆಕಳ ತುಪ್ಪಗಳನ್ನು ಬಳಸಿಕೊಂಡು ಅಗ್ನಿಜನನವನ್ನು ಮಾಡಲಾಗುತ್ತದೆ. ಗೋಮುವನ್ನು ತುಪ್ಪದೊಂದಿಗೆ ಉರಿಸುವ ಪ್ರಕ್ರಿಯೆಯು ಮನೆಯನ್ನು ಶದ್ದೀಕರಿಸುವ ಅತ್ಯುತ್ತಮವಾದ ಮಾರ್ಗ. ಜೊತೆಗೆ ವೈಜ್ಞಾನಿಕವಾಗಿಯೂ ಕೂಡ ಸಂಶೋಧನೆಗಳು ನೀಡಿರುವ ಫಲಿತಾಂಶದ ಪ್ರಕಾರ, ಗೋಮಯವು ವಾತಾವರಣದ ಗಾಳಿಯನ್ನು ಶುದ್ಧೀಕರಿಸುತ್ತದೆ ಹಾಗೂ ಪರಿಸರವನ್ನು ಮಾಲಿನ್ಯಮುಕ್ತ ಹಾಗೂ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ ಎಂದರು.
ಅನೇಕ ವಿಚಾರಗಳನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ ಗೋಮಯ ಹಣತೆ ಮಾಡುವುದನ್ನು ಕಲಿಸಿಕೊಡಲಾಯಿತು. ಶಾಲೆಯ ಶಿಕ್ಷಕರಾದ ದಿನೇಶ್ ಕುಲಕರ್ಣಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ರಾಜೇಶ್ವರಿ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಕಲ್ಪನಾದೇವಿ, ಮಲ್ಕಮ್ಮ , ಹಾಗೂ ಮಂದಹಾಸ ಸಂಸ್ಥೆಯ ಸದಸ್ಯರಾದ ಸಂಗಮ್ಮ, ಅಂಬಿಕಾ, ದಯಾನಂದ ಅವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ