ಮುಂಜಾಗ್ರತೆ ವಹಿಸಿದರೆ ರೇಬಿಸ್ ರೋಗವನ್ನು ತಡೆಗಟ್ಟಬಹುದು : ಡಾ.ಪ್ರಸನ್ನ ಹೆಬ್ಬಾರ್
ಪುತ್ತೂರು: ರೇಬಿಸ್ ಒಂದು ಪ್ರಮುಖ ಪ್ರಾಣಿಜನ್ಯ ಕಾಯಿಲೆ. ಇದು ಸಾಮಾನ್ಯವಾಗಿ ರೋಗಪೀಡಿತ ನಾಯಿ, ಕೆಲವೊಮ್ಮೆ ಬೆಕ್ಕುಗಳು ಹಾಗೂ ಮಂಗಗಳಿಂದ, ಕುದುರೆ, ಹಸು, ಮೇಕೆ, ಕುರಿ ಮುಂತಾದ ಪ್ರಾಣಿಗಳಿಂದ ಕೂಡ ಹರಡಬಹುದು. ನೀರಿನ ಭಯ ಕಂಡುಬಂದು ತದನಂತರ ನರಳಿ ಸಾವು ಉಂಟಾಗುತ್ತದೆ. ಆದರೆ ರೇಬಿಸ್ ಬರದಂತೆ ತಡೆಯುವುದಕ್ಕೆ ಸಾಧ್ಯ ಎಂದು ಪುತ್ತೂರಿನ ಪಶುವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಪ್ರಸನ್ನ ಹೆಬ್ಬಾರ್ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ದ.ಕ., ಪಶು ಆಸ್ಪತ್ರೆ ಪುತ್ತೂರು ಇವರ ಸಹಯೋಗದಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಸಿಯಲ್ಲಿ ನಡೆದ ರೇಬಿಸ್ ರೋಗದ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ರೆಬೀಸ್ ರೋಗದ ಹತೋಟಿ ಮುಂಜಾಗ್ರತೆಯಿಂದ ಮಾತ್ರ ಸಾಧ್ಯ. ರೋಗ ಬರುವ ಮೊದಲೇ ಲಸಿಕೆ ಹಾಕಿಸಿಕೊಳ್ಳಬೇಕು. ಹಾಗಾಗಿ ನಾಯಿ ಸಾಕುವವರು ತಮ್ಮ ನಾಯಿಗಳಿಗೆ ಕಾಲಕಾಲಕ್ಕೆ ರೋಗ ನಿರೋಧಕ ಲಸಿಕೆ ಹಾಕುವ ಮುಖಾಂತರ ಈ ರೋಗ ಬಾರದಂತೆ ತಡೆಗಟ್ಟಬಹುದು. ರೇಬಿಸ್ ಜಾಗೃತಿ ಶಿಬಿರದ ಮೂಲ ಉದ್ದೇಶ ರೋಗದ ನಿರ್ಮೂಲನೆ. 2030ರ ವೇಳೆಗೆ ಭಾರತದಲ್ಲಿ ರೇಬಿಸ್ ನಿರ್ಮೂಲನ ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ವಹಿಸಿದ್ದರು. ಈ ಸಂದರ್ಭದಲ್ಲಿ ರೇಬಿಸ್ ರೋಗದ ಲಕ್ಷಣಗಳು ನಾಯಿ ಕಚ್ಚಿದಾಗ ಪಾಲಿಸಬೇಕಾದಂತಹ ವಿವಿಧ ಹಂತದ ಕ್ರಮಗಳ ಕುರಿತಾಗಿ ದೃಶ್ಯಾವಳಿಗಳ ಮೂಲಕ ಛಾಯಾಚಿತ್ರಗಳ ಮೂಲಕ ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಜೊತೆಗೆ ವಿದ್ಯಾರ್ಥಿಗಳು ರೇಬಿಸ್ ಕುರಿತಾದ ತಮ್ಮ ಅನುಮಾನಗಳನ್ನು ಕೇಳಿ ಪರಿಹರಿಸಿಕೊಂಡರು. ಶಿಕ್ಷಕ - ಶಿಕ್ಷಕೇತರ ವೃಂದ, ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಂಶಕ ಬಿ ಜೆ ಸ್ವಾಗತಿಸಿದರು. ಭವಿಷ್ ವಂದಿಸಿದರು. ಸಂಸ್ಕೃತಿ ವಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ