|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಟೀಲು ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶೇಖರ್ ಗೌಡ ಹಿರೇಬಂಡಾಡಿ

ಕಟೀಲು ಮೇಳದ ಪ್ರಧಾನ ಸ್ತ್ರೀ ವೇಷಧಾರಿ ಶೇಖರ್ ಗೌಡ ಹಿರೇಬಂಡಾಡಿ


ಪುತ್ತೂರು ತಾಲ್ಲೂಕು ಹಿರೇಬಂಡಾಡಿ ಗ್ರಾಮದ ಶ್ರೀಮತಿ ಹೊನ್ನಮ್ಮ ಹಾಗೂ ಶ್ರೀಯುತ ಚನ್ನಪ್ಪ ಗೌಡ ಇವರ ಮಗನಾಗಿ 03.12.1981 ರಂದು ಶ್ರೀಯುತ ಶೇಖರ್ ಗೌಡ ಹಿರೇಬಂಡಾಡಿ ಅವರ ಜನನ. 10ನೇ ತರಗತಿವರೆಗೆ ಇವರ ವಿದ್ಯಾಭ್ಯಾಸ. ಸ್ವಂತ ಇಚ್ಛೆ ಇಂದ ಯಕ್ಷಗಾನ ಕ್ಷೇತ್ರಕ್ಕೆ ಬಂದ ಇವರ ತೆಂಕುತಿಟ್ಟು ಯಕ್ಷಗಾನದ ಗುರುಗಳು  ಶ್ರೀಯುತ ಅಂಬಾ ಪ್ರಸಾದ್ ಪಾತಾಳ ಹಾಗೂ ತಾರಾನಾಥ ಬಲ್ಯಾಯ, ಹಾಗೂ ರಮೇಶ ಹಾರಾಡಿಯವರು ಇವರ ಬಡಗುತಿಟ್ಟಿನ ಗುರುಗಳು.


ಮಾನಿಷಾದ, ಶ್ರೀ ದೇವಿ ಮಹಾತ್ಮೆ, ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ, ಪಂಚವಟಿ, ಚೂಡಾಮಣಿ, ದಕ್ಷಯಜ್ಞ, ಶ್ರೀನಿವಾಸ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳು. ಮಂದಾರ್ತಿ ಮೇಳದಲ್ಲಿ 2 ವರ್ಷ ತಿರುಗಾಟ ಮಾಡಿರುವ ಇವರು, ಕಟೀಲು ಮೇಳದಲ್ಲಿ 10 ವರ್ಷಗಳಿಂದ ತಿರುಗಾಟ ಮಾಡುತ್ತಿದ್ದಾರೆ. ಯಶೋಮತಿ, ಶ್ರೀದೇವಿ, ಸೀತೆ, ಸುಭದ್ರೆ, ಮೀನಾಕ್ಷಿ ಹೀಗೆ ಹಲವಾರು ವೇಷಗಳನ್ನು ಅವಕಾಶ ಒದಗಿದಾಗ ಎಲ್ಲ ಪಾತ್ರಗಳನ್ನು ಇಷ್ಟಪಟ್ಟು ಮಾಡಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಪ್ರಧಾನ ಭಾಗವತರಲ್ಲಿ ಮಾಹಿತಿ ಪಡೆಯುತ್ತೇನೆ, ಹಿರಿಯ ಕಲಾವಿದರಲ್ಲಿ ಪ್ರಸಂಗದ ಪಾತ್ರದ ಬಗ್ಗೆ ಮಾಹಿತಿ ಹಾಗೂ ಮಾತುಕತೆ ನಡೆಸುತ್ತೇನೆ ಹಾಗೂ ಆಯಾ ವೇಷದ ಸಂದರ್ಭದಲ್ಲಿ ಯಾರು ಭಾಗವತರು ಇರುತ್ತಾರೆ ಅವರಲ್ಲಿ ಸನ್ನಿವೇಷಕ್ಕೆ ಮಾಹಿತಿ ಪಡೆದು ತಯಾರಿಯಾಗುತ್ತೇನೆ. ಮತ್ತೆ ವೇಷದಲ್ಲಿ ಅಚ್ಚುಕಟ್ಟುತನ, ಮುಖವರ್ಣಿಕೆ, ಮತ್ತೆ ಎದುರು ವೇಷದ ಮಾತುಕತೆ, ಹಿರಿಯ ಕಲಾವಿದರಲ್ಲಿ ಮಾತುಕತೆ ನಡೆಸಿಕೊಂಡು ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ ಎಂದು ಹಿರೇಬಂಡಾಡಿ ಹೇಳುತ್ತಾರೆ.


ನಾನು ಪ್ರಧಾನ ಸ್ತ್ರೀ ವೇಷಧಾರಿಯಾಗಿ ಬಂದಿರುವುದು ಇದು ಮೊದಲನೆಯದಾಗಿ. ಇಷ್ಟರವರೆಗೆ ನಾನೊಬ್ಬ ಸಣ್ಣ ಪುಟ್ಟ ವೇಷಗಳನ್ನು ಮಾಡಿ ಗುರುತಿಸಿದರೂ ಸನ್ಮಾನದ ಮೂಲಕ ಗುರುತಿಸಿದ್ದು ಕಡಿಮೆಯೇ, ಎರಡು ಬಾರಿ ಸನ್ಮಾನ ಆಗಿದೆ.


ಜೆಸಿಐ ನೆಕ್ಕಿಲಾಡಿ, ಯಕ್ಷಧ್ರುವ ಪಟ್ಲ ಫೌಂಡೇಷನ್ (ರಿ.) ಹಾಗೂ ಯಕ್ಷ ಸಂಗಮ ಉಪ್ಪಿನಂಗಡಿ ಇದರ ಜಂಟಿ ಆಶ್ರಯದಲ್ಲಿ ಹಾಗೂ ವೆಂಕಟರಮಣ ಭಜನಾ ಮಂದಿರ ಹಿರೇಬಂಡಾಡಿ, ಇವರ ಯಕ್ಷಗಾನ ರಂಗದ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿದ್ದಾರೆ. ಪ್ರಚಾರದ ಆಸೆ ಇಲ್ಲ ಕಲಾಮಾತೆಯ ಸೇವೆಯೇ ಮುಖ್ಯ, ಶ್ರೀ ಭ್ರಮರಾಂಬಿಕೆಯ ಸೇವೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಆಯುಷ್ಯ ಸಂಪೂರ್ಣ ಸಿಕ್ಕಿದೆ. ಅದುವೇ ನನಗೆ ಸಿಕ್ಕಿದ ಸನ್ಮಾನ ತಾಯಿಯ ಪ್ರಸಾದ ಎಂದು ಹಿರೇಬಂಡಾಡಿ ಹೇಳುತ್ತಾರೆ.


ಪುರಾಣ ಪುಸ್ತಕಗಳನ್ನು ಓದುವುದು, ವಿವೇಕಾನಂದರ ಪುಸ್ತಕಗಳನ್ನು ಸಂಗ್ರಹಿಸುವುದು ಹಾಗೂ ಓದುವುದು, ಪೌರಾಣಿಕ ಧರ್ಮ ಮತ್ತು ಆಧ್ಯಾತ್ಮಿಕದ ಒಲವು, ಯಕ್ಷಗಾನ ವಿಡಿಯೋಗಳನ್ನು ವೀಕ್ಷಿಸುವುದು ಹಾಗೂ ಜನ ಸೇವೆ ಮಾಡುವುದು ಇವರ ಹವ್ಯಾಸಗಳು.


ಯಕ್ಷಗಾನದಲ್ಲಿ ಕಲಿತು ಪೂರ್ಣ ಆಯಿತು ಅಂತ ಯಾವ ಕಾಲಕ್ಕೂ ಹೇಳುವ ಹಾಗಿಲ್ಲ. ಹಾಗೆಯೇ ಯಕ್ಷಗಾನ ರಂಗದಲ್ಲಿ ಇನ್ನು ಹೆಚ್ಚಿನ ಅಧ್ಯಯನ ಮಾಡಬೇಕು ಎಂಬ ಆಸೆ ಇದೆ. ನಾನು ಕಲಿತದ್ದು ಏನು ಇಲ್ಲ ಕಲಿಯಲು ಇನ್ನು ತುಂಬಾ ಇದೆ ಎಂದು ಹಿರೇಬಂಡಾಡಿ ಹೇಳುತ್ತಾರೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಭೂಲೋಕ ನಿತ್ಯ ನೂತನವಾದದು. ಹಾಗೆಯೇ ಕಾಲಕ್ಕೆ ತಕ್ಕಂತೆ ಯಕ್ಷಗಾನ ಶೈಲಿಯೂ ಬದಲಾಗಿದೆ. ಅದು ನಾನು ಹೇಳುವ ಹಾಗಿಲ್ಲ "ಕಾಲಯ ತಸ್ಮೈ ನಮಃ" ಎಂಬ ಹಾಗೇ ಯಕ್ಷಗಾನ ಕಲೆ ಉಳಿಯಬೇಕು ಬೆಳೆಸಬೇಕು.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಇವರು ಹೇಳುವುದು ಹೀಗೆ:-

ಯಕ್ಷಗಾನ ಕಲೆಯನ್ನು ಪ್ರತ್ಯಕ್ಷ ಕಲಾಮಾತೆ ಎಂದೇ ಆರಾಧಿಸಿಕೊಂಡು ಬಂದಿದ್ದಾರೆ. ಹಾಗೆಯೇ ಕಲೆಯನ್ನು ಆರಾಧಿಸಿಕೊಂಡು ಪ್ರದರ್ಶನ ನೀಡುತ್ತಿರುವ ಕಲಾವಿದರನ್ನು ಕಲಾ ದೇವತೆ ಎಂದೇ ಹೇಳುತ್ತಾರೆ. ಕಲೆಯನ್ನು ಕಲಾವಿದರನ್ನು ಗೌರವಿಸುತ್ತಾರೆ. ಹೀಗೆ ಕಲಾ ಪ್ರೇಕ್ಷಕರ ಸಹಕಾರವೂ ಮುಖ್ಯವಾಗಿದೆ.


ನಾನು ತಿರುಗಾಟದಲ್ಲಿ ಕಿರೀಟ ವೇಷ, ಪುಂಡು ವೇಷ, ಕಸೆ ವೇಷ, ಸ್ತ್ರೀ ವೇಷ ಹೀಗೆ ಎಲ್ಲಾ ರೀತಿಯ ಪಾತ್ರವನ್ನು ನಿರ್ವಹಿಸಿದ್ಧೇನೆ. ನಾಲ್ಕು ವರ್ಷ ದುಬೈನಲ್ಲಿ ಬೇರೆ ಉದ್ಯೋಗ ನಿಮಿತ್ತ ಯಕ್ಷಗಾನವನ್ನು ಒಮ್ಮೆ ಬಿಟ್ಟಿದ್ದೆ. ಆದರೆ ದುಬೈನಲ್ಲಿ ಉದ್ಯೋಗದ ಜೊತೆಗೆ ಯಕ್ಷ ಮಿತ್ರರು ದುಬೈ ಅವರ ಸಂಸ್ಥೆಯೊಂದಿಗೆ ಪಾತ್ರಗಳನ್ನು ಮಾಡಿದ್ದೇನೆ.ಕಾಲಕ್ರಮೇಣ ಉದ್ಯೋಗದಲ್ಲಿ ಆಡಚಡಣೆಗಳು ಎದುರಾಗಿ ಮತ್ತೆ ಯಕ್ಷಗಾನವನ್ನೇ ಜೀವನದಲ್ಲಿ ಅಳವಡಿಸಿಬೇಕೆಂದು ತೀರ್ಮಾನ ಮಾಡಿದೆ. ಕಟೀಲು ತಾಯಿಯ ಆಶೀರ್ವಾದದಿಂದ ಮೇಳದಲ್ಲಿ ತಿರುಗಾಟ ಮಾಡುವ ಅವಕಾಶ ಸಿಕ್ಕಿತು,ಕಟೀಲು ಮೇಳದಲ್ಲಿ ಸೇವೆಯನ್ನು ಪ್ರಾರಂಭ ಮಾಡಿದ ನಂತರ ಜೀವನದಲ್ಲಿ ಮಾನಸಿಕ ನೆಮ್ಮದಿ, ಸುಖ ಶಾಂತಿ ಸಿಕ್ಕಿದೆ ನನ್ನ ಜೀವನದ ಮುಖ್ಯ ಉದ್ಧೇಶ. ಭ್ರಮರಾಂಬಿಕೆಯ ಆಶೀರ್ವಾದದಿಂದ ಕಲಾಮಾತೆಯ ಅನುಗ್ರಹ ನನಗೆ ದೊರೆತು ಶ್ರೀ ದೇವಿಯ ಪಾತ್ರದ ಮೂಲಕ ದೈವಿಕ ಶಕ್ತಿಯ ಆರಾಧನೆಯಿಂದ ಯಕ್ಷಗಾನದ ಹಿರಿಮೆಯನ್ನು ಎತ್ತಿತೋರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಭಕ್ತಿ ಶ್ರದ್ಧೆಯ ಮೂಲಕ ತೋರಿಸಲು ಈ ವರ್ಷ ಕಟೀಲು 1 ನೇ ಮೇಳದಲ್ಲಿ ಭಡ್ತಿ ದೊರಕಲು ಅವಕಾಶ ನೀಡಿದ ಮೇಳದ ಯಜಮಾನರನ್ನು ಹಾಗೂ ಆಸ್ರಣ್ಣರನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹಿರೇಬಂಡಾಡಿ ಹೇಳುತ್ತಾರೆ


20.02.2013 ರಂದು ಸುಮಲತಾ ಅವರನ್ನು ವಿವಾಹವಾದ ಶೇಖರ್ ಗೌಡ ಹಿರೇಬಂಡಾಡಿ ಇಬ್ಬರು ಮಕ್ಕಳಾದ ಪೂಜಶ್ರೀ ಹಾಗೂ ಚಿನ್ಮಯ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos:- Pratheesh Nayak 

- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post