ಪರಿಚಯ: ಬಡಗುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿ ಹಾಗೂ ಯಕ್ಷ ಗುರು ಮನೋಜ್‌ ಭಟ್

Upayuktha
0

ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯುವ ಕಲಾವಿದರು ಕಾಣಲು ಸಿಗುತ್ತಾರೆ. ಅಂತಹ ಕಲಾವಿದರ ಸಾಲಿನಲ್ಲಿ ನಮಗೆ ಕಾಣುವ ಯುವ ಸ್ತ್ರೀ ವೇಷಧಾರಿ ಹಾಗೂ ಯಕ್ಷಗಾನ ಗುರುಗಳು ಶ್ರೀಯುತ ಮನೋಜ್ ಭಟ್.


ದಿನಾಂಕ 10.11.1990ರಂದು ಶ್ರೀಮತಿ ಮಹೇಶ್ವರಿ ಹಾಗೂ ಶ್ರೀಯುತ ಮಹಾಬಲೇಶ್ವರ ಭಟ್ ಇವರ ಪ್ರೀತಿಯ ಮಗನಾಗಿ ಜನನ. ಬಿ.ಎ ಇವರ ವಿದ್ಯಾಭ್ಯಾಸ. ಇವರ ಯಕ್ಷಗಾನದ ಗುರುಗಳು ಸಾಲಿಗ್ರಾಮ ಮಕ್ಕಳ ಮೇಳದ ಶ್ರೀ ಎಚ್. ಶ್ರೀಧರ ಹಂದೆ, ಶ್ರೀ ಎಚ್. ಸುಜಯೀಂದ್ರ ಹಂದೆ. ಇವರ ಸೋದರ ಮಾವ ಬೇಸಿಗೆ ರಜೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ ಹರಕೆ ಮೇಳದ ಬಯಲಾಟಗಳು, ಇವರಿಗೆ ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. 


ವೀರ ವೃಷಸೇನ, ದಕ್ಷಯಜ್ಞ, ತಾಮ್ರಧ್ವಜ ಕಾಳಗ, ಕಚ ದೇವಯಾನಿ ಇವರ ನೆಚ್ಚಿನ ಪ್ರಸಂಗಗಳು. ದಾಕ್ಷಾಯಿಣಿ, ದೇವಯಾನಿ, ಕೃಷ್ಣ, ಚಿತ್ರಾಂಗದೆ, ಸೋಮಪ್ರಭೆ ಇವರ  ನೆಚ್ಚಿನ ವೇಷಗಳು.  


ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಹಲವು ವರ್ಷಗಳ ವರೆಗೆ ಬಾಲ ಕಲಾವಿದನಾಗಿ ತಿರುಗಾಟ, ಹಾಗೂ  ಬೆಂಗಳೂರಿನ ಸಂಘ ಸಂಸ್ಥೆಗಳಾದ ಯಕ್ಷ ಸಿಂಚನ, ಯಕ್ಷ ದೇಗುಲ, ಗಾನಸೌರಭ ಮೊದಲಾದ ಹಲವಾರು ಸಂಸ್ಥೆಗಳಲ್ಲಿ ಸ್ತ್ರೀವೇಷಧಾರಿಯಾಗಿ ಭಾಗವಹಿಸಿದ ಅನುಭವ ಇವರಿಗೆ ಇದೆ.ಇವರು ಕಳೆದ 5 ವರ್ಷಗಳಿಂದ ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರ (ರಿ.) ದಲ್ಲಿ ಹಾಗೂ 3 ವರ್ಷಗಳಿಂದ ಮಂಡ್ಯದ ಯಕ್ಷತರಂಗಿಣಿ (ರಿ.) ನಲ್ಲಿ ಯಕ್ಷಗಾನ ಗುರುವಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಪ್ರಸಂಗ ಪ್ರತಿಗಳ ಅವಲೋಕನ, ಹಾಗೂ ಗುರುಗಳಾದ ಶ್ರೀ ಎಚ್. ಸುಜಯೀಂದ್ರ ಹಂದೆ, ಡಾ.ಪ್ರದೀಪ್ ಸಾಮಗ, ಗುರು ಶ್ರೀ ಕೃಷ್ಣಮೂರ್ತಿ ತುಂಗಾರಂಥವರಿಂದ ಪಾತ್ರದ ನಡೆಯ ಕುರಿತು ಮಾರ್ಗದರ್ಶನ ಪಡೆಯುತ್ತೇನೆ. ಹಾಗೆಯೇ ಸಾಮಾಜಿಕ ಜಾಲತಾಣ ಗಳಲ್ಲಿ ದೊರೆಯುವ ತಾಳಮದ್ದಳೆ ಮೂಲಕ ತಯಾರಿ ಮಾಡಿಕೊಳ್ಳುತ್ತೇನೆ.




2 ವರ್ಷಗಳಿಂದ ಮೈಸೂರಿನ ಕರಾವಳಿ ಯಕ್ಷಗಾನ ಕೇಂದ್ರ (ರಿ.) ದಿಂದ 2019ರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ,ಮಂಡ್ಯ ದ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ವತಿಯಿಂದ  2018 ಹಾಗೂ 2020 ರ ಶಿಕ್ಷಕ ದಿನಾಚರಣೆಯ ಗೌರವ ಸನ್ಮಾನ ಇವರಿಗೆ ಸಿಕ್ಕಿರುವ ಗೌರವ ಸನ್ಮಾನಗಳು. ತೃಪ್ತಿ ಸುಂದರ್ ಅಭಿಕರ್ ನಿರ್ದೇಶನ ಮಾಡಿದ #ನಲ್ಕೆ ಚಿತ್ರದಲ್ಲಿ ಅಭಿನಯ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.


ಇವರ ಹವ್ಯಾಸಗಳು:- ವೃತ್ತಿ ಹಾಗೂ ಪ್ರವೃತ್ತಿ ಎರಡೂ ಯಕ್ಷಗಾನವೇ ಎನ್ನುತ್ತಾರೆ. 


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಇವರು  ಹೀಗೆ ಹೇಳುತ್ತಾರೆ:- 

ಕಲಾವಿದನ ಸಾಮರ್ಥ್ಯ ಹಾಗೂ ಪ್ರೇಕ್ಷಕನ ಮನೋಸ್ಥಿತಿಗೆ ತಕ್ಕಂತೆ ಬದಲಾಗಿದೆ. 


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ನಮ್ಮ ಗುರುಗಳು ಹೇಳುವ ಮಾತು.-" ನಾವು ಕಲಿಸುವ ಮಕ್ಕಳು ಮುಂದೆ ಕಲಾವಿದರಾಗದಿದ್ದರೂ ಬೇಸರವಿಲ್ಲ,  ಒಬ್ಬ ಪ್ರಜ್ಞಾವಂತ ಪ್ರೇಕ್ಷಕನಾಗಬೇಕು." ಇದು ನನ್ನ ಅಭಿಪ್ರಾಯವೂ ಹೌದು.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ:-

ಆಸಕ್ತರಿಗೆ ಯಕ್ಷಗಾನದ ತರಬೇತಿ, ಕೇವಲ ವೇಷವಾಗದೇ ಪಾತ್ರವಾಗಿ ರಂಗದಲ್ಲಿ ಇನ್ನೂ ಪ್ರಬುದ್ಧ ಆಗಿ ರೂಪುಗೊಳ್ಳಬೇಕು.


11.06.2020 ಶ್ರುತಿ ಕಾರಂತ್ ಇವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top