ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ... ಇದು ಉಪನಿಷತ್ತಿನ ವಾಕ್ಯ. ಮನುಷ್ಯನ ಉನ್ನತಿಗೂ ಅವನತಿಗೂ ಆತನ ಮನಸ್ಸೇ ಕಾರಣ ಎನ್ನುವುದೇ ಇದರರ್ಥ. ಮನಸ್ಸಿನಂತೆ ಮಾನವ ಎಂದು ಕನ್ನಡದಲ್ಲೂ ತಿಳಿವುಳ್ಳವರು ಹೇಳಿದ್ದು ಇದನ್ನೇ. ಹೆಚ್ಚು ಹೆಚ್ಚು ಓದಿ ಜ್ಞಾನಿಗಳಾದವರ ಮಟ್ಟಕ್ಕೆ ನಮ್ಮಂಥವರಿಗೆ ಏರಲಾಗದಿದ್ದರೂ ನಮ್ಮ ವ್ಯಾಪ್ತಿಯಲ್ಲಿ ಇದು ಯಾವ ರೀತಿಯಲ್ಲಿ ತೆರೆದುಕೊಳ್ಳಬಹುದೆಂದು ನೋಡಬಹುದು.
ನಮ್ಮ ಎಲ್ಲ ವ್ಯವಹಾರಗಳೂ ನಮ್ಮ ಮನಸ್ಸಿನ ಭಾವಗಳ ಅಭಿವ್ಯಕ್ತಿ. ಸಣ್ಣ ಮಕ್ಕಳಿಂದ ತೊಡಗಿ ವೃದ್ಧರವರೆಗೆ ಎಲ್ಲರೂ ಮಾಡುವ ಕ್ರಿಯೆಗಳಿಗೆ ಹಿಂದಿರುವ ಶಕ್ತಿಯೇ ಮನಸ್ಸು. ಮನಸ್ಸೆಂಬುದು ಎಷ್ಟು ಶಕ್ತಿಶಾಲಿ ಎಂದರೆ ಅದರ ಎದುರು ಎಲ್ಲವೂ ತಲೆಬಾಗಲೇ ಬೇಕು. ಹಿಮಾಲಯವನ್ನು ಏರಬೇಕೆಂಬ ಮನಸ್ಸೊಂದಿದ್ದರೆ ಸಾಕು ಅಂಗವಿಹೀನನಾದರೂ ಸಾಧಿಸಿಯೇ ಬಿಡುತ್ತಾನೆ. ಸರ್ವಾಂಗ ಪರಿಪೂರ್ಣನಾದರೂ ಮನಸ್ಸಿಲ್ಲದಿದ್ದರೆ ಹತ್ತು ಹೆಜ್ಜೆಯನ್ನೂ ನಡೆಯಲಾರ. ಬರಿದೆ ಕ್ರಿಯೆ ಮಾತ್ರವಲ್ಲ ಒಂದು ವಸ್ತುವಿನ ಗುಣ ಕೂಡ ಅನುಭವಿಸುವವನ ಅಥವಾ ನೋಡುವವನ ಮನಸ್ಸನ್ನವಲಂಬಿಸಿರುತ್ತದೆ.
ಮನಸ್ಸು ಸ್ಥಿಮಿತದಲ್ಲಿರುವಾಗ ಹಿತವಾಗಿರುವಂಥದ್ದು, ಸ್ಥಿಮಿತ ಕಳಕೊಂಡಾಗ ಅಹಿತವಾಗುವುದೂ ಇದೆ. ತನ್ನ ಮನಸ್ಸಿಗೆ ಪ್ರಿಯರೆನಿಸಿದವರು ಯಾವ ಅಪಸವ್ಯವನ್ನು ಮಾಡಿದರೂ ನಾವು ಅದನ್ನು ಸಮರ್ಥಿಸಿಕೊಳ್ಳುತ್ತೇವೆ, ಅದಿಲ್ಲ ಸಹಿಸಿಕೊಂಡಿರುತ್ತೇವೆ. ಅದೇರೀತಿ ಮನಸ್ಸಿಗೆ ಅಪ್ರಿಯರೆನಿಸಿದವರು ಮಾಡುವ ಯಾವ ಒಳ್ಳೆಯ ಕಾರ್ಯವೂ ನಮಗೆ ಹಿತವೆನಿಸುವುದಿಲ್ಲ ಬದಲಾಗಿ ಅದರಲ್ಲಿ ಕೊರತೆಯನ್ನೇ ಹುಡುಕುತ್ತೇವೆ. ಇದು ಮನಸ್ಸಿನ ಗುಣ. ವ್ಯಕ್ತಿ ಯಾರೇ ಇರಲಿ ಒಳಿತು ಕೆಡುಕನ್ನು ಸಮಭಾವದಿಂದ ಕಂಡು ಅದಕ್ಕೆ ತಕ್ಕಂತೆ ವರ್ತಿಸುವುದಾದರೂ ಅದಕ್ಕೂ ಆ ವ್ಯಕ್ತಿಯ ಮನಸ್ಸೇ ಕಾರಣ.
ಇನ್ನು ಆರೋಗ್ಯದ ವಿಷಯದಲ್ಲೂ ಈ ಮನಸ್ಸು ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ. ಮನಸ್ಸಿಗೆ ಭೀತಿ ಉಂಟಾದಾಗ ಅಥವಾ ತನಗೇನೋ ಆರೋಗ್ಯದಲ್ಲಿ ಎಡವಟ್ಟು ಇದೆ ಎಂದು ಅನ್ನಿಸಿದಾಗ ಸೂಕ್ತ ವೈದ್ಯರ ಭೇಟಿಯಾಗುವಲ್ಲಿವರೆಗೂ ಎಲ್ಲ ರೋಗಗಳ ಲಕ್ಷಣಗಳೂ ತನಗೆ ಇವೆಯೆಂಬ ಭ್ರಮೆ ಉಂಟಾದರೆ ವಿಶೇಷವಲ್ಲ. ಅದೇರೀತಿ ಮನಸ್ಸು ಗಟ್ಟಿ ಇದ್ದವನಿಗೆ ಯಾವುದೇ ರೋಗಗಳು ಶರೀರದೊಳಗಿದ್ದರೂ, ವೈದ್ಯರೇ ಭೀತಿಗೊಂಡರೂ ರೋಗಿಯಾದವನು ನಿರಾಳವಾಗಿರುವುದೂ ಇದೆ ಮನಸ್ಸಿಗಂಟಿಸಿಕೊಳ್ಳದೆ.
ಕೊಲೆಗಡುಕರಿರಬಹುದು, ದರೋಡೆಕೋರರಿರಬಹುದು, ದೊಂಬಿ ಗಲಾಟೆ ಮಾಡುವವರಿರಬಹುದು ಅವರೊಳಗೂ ಜಾಣತನವಿದೆ, ಬುದ್ಧಿವಂತಿಕೆ ಇದೆ, ಕಾರ್ಯಗತಗೊಳಿಸುವ ಚಾಣಾಕ್ಷತನವಿದೆ. ಆದರೆ ಅದೆಲ್ಲವೂ ಕೆಟ್ಟ ಮನಸ್ಸಿನಾಧೀನವಾಗಿರುವಷ್ಟು ಹಾಗೂ ಆ ಮನಸ್ಸು ಕೆಡುಕನ್ನು ಬಯಸುವಷ್ಟು ಸಮಯ ಆ ವ್ಯಕ್ತಿಯು ಲೋಕಕಂಟಕನೇ ಆಗುವನು. ಹಾಗೆಂದು ಆತನ ಮನಸ್ಸೆಂಬುದು ಪರಿವರ್ತನವಾದರೆ ಅದೇ ವ್ಯಕ್ತಿ ಲೋಕೋದ್ಧಾರಕನೂ ಆಗುವನು. ಯಾರು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲನೋ ಆತನೇ ಸಾಧಕನಾಗುವನು. ಆದರೆ ಸಾಧಕನಾಗಬೇಕೆಂಬ ಮನಸ್ಸು ಆತನಿಗೆ ಇರಬೇಕು ಮಾತ್ರವಲ್ಲ ಅಂಥ ಮನಸ್ಸು ವಿವೇಕದ, ಬುದ್ಧಿಯ ಅಂಕೆಯಲ್ಲಿರಬೇಕು.
ಮನಸ್ಸು ಶುದ್ಧವಾಗಿದ್ದಲ್ಲಿ ಆತನ ವ್ಯವಹಾರಗಳೆಲ್ಲವೂ ಸಹಜವಾಗಿಯೇ ಯಾವುದೋ ಒಂದು ಸಾಧನೆಯ ಪಥದಲ್ಲಿರುತ್ತವೆ. ಅದೇ ಮನಸ್ಸು ಕೆಟ್ಟದಾದರೆ ಯಾವುದೇ ವ್ಯವಹಾರಗಳು ಎಷ್ಟೇ ಉತ್ತುಂಗದಲ್ಲಿದ್ದರೂ ಕ್ರಮೇಣ ಸಹಜವಾಗಿಯೇ ಅಧಃಪಾತಕ್ಕೆ ಸೇರುತ್ತವೆ. ಇನ್ನು ಕೆಲವರಲ್ಲಿ ಅಗಾಧ ಪ್ರತಿಭೆಗಳಿರುತ್ತವೆ. ಆದರೆ ಅವರ ಮನಸ್ಸಿಗೆ ತನ್ನತನದ ಅರಿವಿಲ್ಲದಿರುವುದರಿಂದ ಅವೆಲ್ಲವೂ ಸುಪ್ತವಾಗಿರುತ್ತವೆ. ಅಂತೆಯೇ ಕೆಲವರಲ್ಲಿ ಹೇಳಿಕೊಳ್ಳುವಂಥ ಹೆಚ್ಚುಗಾರಿಕೆ ಏನಿರುವುದಿಲ್ಲ.ಆದರೂ ಅಂಥವರು ಮನಸ್ಸು ಮಾಡಿದರೆ ತಮ್ಮಲ್ಲಿರುವಂಥ ವಿಷಯಗಳನ್ನೇ ಅತ್ಯಂತ ಚಾಣಾಕ್ಷತನದಿಂದ ಉಪಯೋಗಿಸಿಕೊಂಡು ಬೆಳಕಿಗೆ ಬರುತ್ತಾರೆ ಮನಸ್ಸಿನ ಪ್ರಭಾವದಿಂದ.
ಹಾಗೆಯೇ ಕೆಲವೊಮ್ಮೆ ಮನಸ್ಸಿಗೂ, ಆರ್ಥಿಕತೆಗೂ, ಭದ್ರತೆಗೂ ನೇರ ಸಂಬಂಧವಿರುತ್ತದೆ. ಹೇರಳ ಸಂಪತ್ತಿದ್ದು, ತಾನು ಪರಾವಲಂಬಿ ಅಲ್ಲವೆಂಬ ಭಾವ ಮನಸ್ಸಿನಲ್ಲಿದ್ದರೆ ಆತನಲ್ಲೊಂದು ಭದ್ರತಾ ಭಾವವಿರುತ್ತದೆ. ಹಾಗೆಂದು ವರ್ತಮಾನವಷ್ಟೇ ಬದುಕು ಎಂಬಂಥ ಮನಸ್ಸುಳ್ಳವನು ಕೂಡ ಭದ್ರವಾಗಿಯೇ ಇರುತ್ತಾನೆ. ಇಲ್ಲಿ ಸೋಲುವವನು ಯಾರೆಂದರೆ ಅತೃಪ್ತ ಮನಸ್ಸುಳ್ಳವನು. ವಿಚಿತ್ರವೆಂದರೆ ಮನುಷ್ಯನಿಗೆ ಬರುವ ಸೋಲು ಗೆಲುವುಗಳು ಕೂಡ ಆಯಾ ವ್ಯಕ್ತಿಯ ಮನಸ್ಸನ್ನವಲಂಬಿಸಿರುತ್ತದೆ. ಸೋಲಾದಾಗ ಗೆಲ್ಲಬೇಕೆಂಬ ಛಲವಿದ್ದರೆ ಸೋಲು ಕೂಡ ಗೆಲುವಿನ ಏರು ಮೆಟ್ಟಿಲಾಗಬಲ್ಲದು. ಗೆಲುವಾದಾಗ ಮೈಮರೆತರೆ ಅದೇ ಮೆಟ್ಟಿಲು ಸೋಲಿಗೆ ಜಾರಿಸಿ ಬಿಡುವ ಮೆಟ್ಟಿಲಾಗಬಲ್ಲದು. ಮನಸ್ಸೆಂಬ ಏಣಿಯನ್ನು ಆತ್ಮೊನ್ನತಿಗೆ ಬಳಸಿಕೊಂಡಾಗ ಆತ ಸಾಧಕನಾಗುವನು. ನಾವೆಲ್ಲರೂ ಸಾಧಕರಾಗುವ ಮನಸ್ಸು ಮಾಡೋಣ ಇಂದ್ರಿಯಗಳ ಸೆಳೆತದಿಂದ ವಿವೇಕದ ಕಡೆಗೆ ಹೋಗುವ ಏಣಿಯಂತೆ, ಏಣಿಯ ಮೆಟ್ಟಿಲಿನಂತೆ ಮನಸ್ಸನ್ನು ತಿದ್ದಿಕೊಳ್ಳೋಣ... ಮನ ಏವ ಮನುಷ್ಯಾಣಾಂ... ಎಷ್ಟೊಂದು ಅರ್ಥಪೂರ್ಣವಲ್ಲವೇ..?
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ