ಮಂಗಳೂರು: ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ (ಮಾಮ್) ಆಫ್ ಮಂಗಳಗಂಗೋತ್ರಿ ಸಂಘಟನೆ ವತಿಯಿಂದ ಪ್ರತಿವರ್ಷದಂತೆ ನೀಡಲಾಗುವ `ಮಾಮ್ ಇನ್ಸ್ಪೈರ್ ಅವಾರ್ಡ್' ಕಾರ್ಯಕ್ರಮ ನವೆಂಬರ್ 22ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆಯಲಿದೆ.
ಪ್ರಶಸ್ತಿ ಪ್ರದಾನವನ್ನು ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಹೊಸ ದಿಗಂತ ದಿನಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಭಾಗವಹಿಸುವರು.
ಪ್ರಶಸ್ತಿ ವಿಜೇತರು
ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ: ಶ್ರೀರಕ್ಷಾ ರಾವ್ ಪುನರೂರು, ಆಳ್ವಾಸ್ ಕಾಲೇಜು ಮೂಡಬಿದ್ರಿ. ಶ್ರೀರಕ್ಷಾ ಅವರು ಮೂಲ್ಕಿ ಸಮೀಪ ಪುನರೂರಿನವರು. ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ಉತ್ತಮ ಬರಹಗಾರಿಕೆ ಮೂಲಕ ಗುರುತಿಸಿಕೊಂಡವರು. ಆಳ್ವಾಸ್ ಸಂಸ್ಥೆಯಲ್ಲಿ ಸಾಂಸ್ಕೃತಿಕ ದತ್ತು ಸ್ವೀಕಾರ ಯೋಜನೆ ಅಡಿ ಪತ್ರಿಕೋದ್ಯಮ ಕೋರ್ಸ್ಗೆ ಆಯ್ಕೆಯಾದ ಪ್ರತಿಭಾನ್ವಿತೆ. ಆಳ್ವಾಸ್ ರಂಗ ಅಧ್ಯಯನದ ವಿದ್ಯಾರ್ಥಿನಿ. ಚಂಡೀಘಡದಲ್ಲಿ 2019ರಲ್ಲಿ ನಡೆದ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ನಾಟಕದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಬೀದಿ ನಾಟಕ, ತುಳು, ಕನ್ನಡ ನಾಟಕಗಳಲ್ಲಿ ಅಭಿನಯಿಸಿದವರು. ಇದೀಗ ಬೆಂಗಳೂರಿನ ಮಸ್ತ್ ಮಗಾ ಡಾಟ್ ಕಾಂ ಡಿಜಿಟಲ್ ಮಾಧ್ಯಮದಲ್ಲಿ ನಿರೂಪಕಿಯಾಗಿದ್ದಾರೆ.
ಪದವಿ ವಿಭಾಗ: ದುರ್ಗಾ ಪ್ರಸನ್ನ, ಆಳ್ವಾಸ್ ಕಾಲೇಜು ಮೂಡಬಿದ್ರಿ. ಮೂಲತಃ ಕಾಸರಗೋಡು ಜಿಯ ಪೆರ್ಲದವರು. ತಂದೆ ಶ್ರೀಪತಿ ಭಟ ಬೊಳ್ಳುರೋಡಿ ಹಾಗೂ ತಾಯಿ ಇಂದಿರಾ. ಪ್ರಸ್ತುತ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಪದವಿ ವಿದ್ಯಾಭ್ಯಾಸವನ್ನು ಕೂಡ ಆಳ್ವಾಸ್ ನಲ್ಲಿಯೇ ಪೂರೈಸಿದ್ದಾರೆ.ವಿವಿಧ ಪತ್ರಿಕೆಗಳಲ್ಲಿ 60ಕ್ಕೂ ಅಧಿಕ ಲೇಖನ ಬರೆದಿದ್ದಾರೆ. ಕನ್ನಡ ಹಾಗೂ ತುಳು ವಿಕಿಪೀಡಿಯದ ಸಕ್ರಿಯ ಸಂಪಾದಕಿ ಹಾಗೂ ತರಬೇತುದಾರರಾಗಿದ್ದಾರೆ. ಸುದ್ದಿವಾಣಿ ವೆಬ್ಸೈಟ್ನ ಸಂಪಾದಕಿಯಾಗಿದ್ದಾರೆ.
ಪ್ರಜ್ನಾ ಓಡಿಲ್ನಾಳ (ದ್ವಿತೀಯ): ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದರು. ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪ್ರಸ್ತುತ ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಸ್ನಾತಕೋತ್ತರ ಪದವಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪುತ್ತೂರಿನ ಸ್ಥಳೀಯ ವಾಹಿನಿ ಝೂಮ ಇನ್ ಟಿವಿಯಲ್ಲಿ ನಿರೂಪಕಿ ಹಾಗೂ ವರದಿಗಾರ್ತಿ.ನಿರೂಪಕಿ, ಬರಹಗಾರ್ತಿಯಾಗಿ ಗುರುತಿಸಿಕೊಂಡವರು.
ಮಾಮ್ ಕುರಿತು: ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆಯಾಗಿದ್ದು 2015ರಲ್ಲಿ ಸ್ಥಾಪನೆಗೊಂಡಿದೆ. ಪತ್ರಿಕೋದ್ಯಮ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದೊಂದಿಗೆ ಶಿPಣ ವ್ಯವಸ್ಥೆ, ವಿದ್ಯಾರ್ಥಿಗಳನ್ನು ಬೆಸೆಯುವ ಸೇತುವಾಗಿ ಕೆಲಸ ಮಾಡುತ್ತಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದ ಭಾಗವಾಗಿ `ಮಾಮ್ ಇನ್ಸ್ಪೈರ್ ಅವಾರ್ಡ್'ನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ. ಹಲವು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಪತ್ರಿಕೋದ್ಯಮ ಶಿಕ್ಷಣಕ್ಕೆ ಬೇಕಾದ ಸುಧಾರಣೆಗಳ ಕುರಿತು ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಮಗ್ರ ಸಲಹೆ ಒಳಗೊಂಡ ಪ್ರಸ್ತಾವ ಸಲ್ಲಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ