ಕಾರವಾರ: ಗೋಕರ್ಣಕ್ಕೆ ಸಮೀಪದ ಅಶೋಕೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ಈ ತಿಂಗಳ 19ರಂದು (ಶುಕ್ರವಾರ) ಭಾವಸಂಗೀತೋತ್ಸವ ಆಯೋಜಿಸಲಾಗಿದೆ.
ಶ್ರೀಮಜ್ಜಗದ್ಗುರು ಶಂಕರಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಸಾನ್ನಿಧ್ಯ ಮತ್ತು ನಿರ್ದೇಶನದಲ್ಲಿ ನಡೆಯುವ ಈ ಸಂಗೀತೋತ್ಸವದಲ್ಲಿ ನಾಡಿನ ಖ್ಯಾತ ಮತ್ತು ಉದಯೋನ್ಮುಖ ಗಾಯನ ಪ್ರತಿಭೆಗಳು ಕಾರ್ಯಕ್ರಮ ನೀಡಲಿದ್ದಾರೆ ಎಂದು ಸಂಗೀತ ವಿಭಾಗದ ಮುಖ್ಯಸ್ಥ ರಘುನಂದನ್ ಬೇರ್ಕಡವು ಪ್ರಕಟಣೆಯಲ್ಲಿ ಹೇಳಿದ್ದಾರೆ.
ವಿದ್ಯಾವಿಶ್ವ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ನಡೆಯುವ ಸಂಗೀತೋತ್ಸವದಲ್ಲಿ ವಿದುಷಿ ಕಾಂಚನ ಎಸ್.ಶ್ರುತಿರಂಜನಿ, ವಿದುಷಿ ಶಂಕರಿ ಮೂರ್ತಿ ಬಾಳಿಲ, ದೀಪಿಕಾ ಭಟ್, ಸಾಕೇತ ಶರ್ಮಾ, ಪೂಜಾ ಕೋರಿಕ್ಕಾರು, ರಘುನಂದನ ಬೇರ್ಕಡವು ಮತ್ತು ವಿಶ್ವೇಶ್ವರ ಭಟ್ ಖರ್ವಾ ಗಾಯನ ಪ್ರಸ್ತುತಪಡಿಸುವರು. ಇದರ ಜತೆಗೆ ಗಣೇಶ್ ಭಾಗವತ್ ಅವರ ತಬಲಾ ವಾದನ, ಸುಬ್ರಹ್ಮಣ್ಯ ಹೆಗಡೆಯವರ ಸಿತಾರ್ ವಾದನ, ಪ್ರಜಾನಲೀಲಾಕುಶ ಉಪಾಧ್ಯಾಯ ಅವರ ಹಾರ್ಮೋನಿಯಂ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಶ್ವೇಶ್ವರ ಹೆಗಡೆ ಮೂರೂರು ಅವರ ಅಭಿನಯ ಕಾರ್ಯಕ್ರಮ ಇರುತ್ತದೆ ಎಂದು ವಿವರಿಸಿದ್ದಾರೆ.
ಒಂದು ತಿಂಗಳಲ್ಲಿ ವಿವಿವಿಯಲ್ಲಿ ನಡೆಯುತ್ತಿರುವ ಮೂರನೇ ಸಂಗೀತ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುತ್ತದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ