ಶೇಷಾದ್ರಿಪುರಂ: ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ರತ್ನ ಶ್ರೀ ಅನ್ನದಾನಯ್ಯ ಪುರಾಣಿಕ ಸ್ಮಾರಕ ದತ್ತಿ ಉಪನ್ಯಾಸವನ್ನು ನಗರದ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಯುವಜನತೆಯಲ್ಲಿ ನಶಿಸುತ್ತಿರುವ ನೈತಿಕ ಮೌಲ್ಯಗಳನ್ನು ಮೂಡಿಸುವಲ್ಲಿ ಗಾಂಧಿಚಿಂತನೆಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು. ಉಜಿರೆಯ ಎಸ್ಡಿಎಮ್ ಪದವಿ ಕಾಲೇಜಿನ ಪ್ರಾಧ್ಯಾಪಕ ಮತ್ತು ವಿಮರ್ಶಕ ಡಾ. ರಾಜಶೇಖರ ಹಳೆಮನೆರವರು ‘ಬಸವಣ್ಣ ಮತ್ತು ಗಾಂಧೀಜಿಯವರ ಸಾಮಾಜಿಕ ಚಿಂತನೆಗಳು’ ಕುರಿತು ಉಪನ್ಯಾಸದಲ್ಲಿ ಅಸ್ಪೃಷ್ಯತೆ ನಿವಾರಣೆ , ಸ್ತ್ರೀ ಸಮಾನತೆ ,ಅಹಿಂಸಾ ಚಳುವಳಿ ಮೂಲಕ ಬಸವಣ್ಣನ ಎಂಟು ಶತಮಾನಗಳ ಹಿಂದೆ ಪ್ರತಿಪಾದಿಸಿದ್ದ ತತ್ವಗಳನ್ನೇ ಗಾಂಧಿಜಿಯವರು ಅನುಸರಿಸಿ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದರು ಎಂದು ತಿಳಿಸಿದರು.
ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ವಿಶೇಷ ಆಹ್ವಾನಿತರಾಗಿ ಮತ್ತು ವಿಶ್ರಾಂತ ಪ್ರಾಂಶುಪಾಲರು ಹಾಗೂ ದತ್ತಿಯ ದಾನಿಗಳಾದ ಪ್ರೊ. ಚಂದ್ರಿಕಾ ಪುರಾಣಿಕ ಉಪಸ್ಥಿತರಿದ್ದರು, ಕಾಲೇಜಿನ ಪ್ರಾಂಶುಪಾಲ ಪ್ರೋ. ನೋಟಕಾರ್ ಸತೀಶ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಪ್ರಾಧ್ಯಾಪಕ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ಗೌ. ಕಾರ್ಯದರ್ಶಿ ಡಾ.ಸತ್ಯಮಂಗಲ ಮಹಾದೇವ ವೇದಿಕೆಯಲ್ಲಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ