ಭಾರತ ಮಾತೆಯ ಒಡಲೊಳು ಜನಿಸಿತು
ಸಾವಿಗು ಹೆದರದ ಚೇತನವೊಂದು
ಸಾಟಿಯೆ ಇಲ್ಲದ ಲಾಲ ಬಹದ್ದೂರ್
ಶಾಸ್ತ್ರಿ ಎನ್ನುವ ಸಿಡಿಗುಂಡೊಂದು.
ಯಾರಿಗು ಬಾಗದ ಮೊಗದಲಿ ಸೂಸುವ
ಜಗವನೆ ಬೆಳಗುವ ಆ ರವಿ ತೇಜಕೆ
ಬಲವಿದ್ದವರೂ ವಿಲವಿಲಗೊಂಡರು
ಛಲಕೆದುರಿಲ್ಲದ ವಾಮನ ಮೂರ್ತಿಗೆ
ಪ್ರಾಮಾಣಿಕತೆಗೆ ಭಾಷ್ಯವ ಬರೆದಿಹ
ಪ್ರಮಾಣಕ್ಕಾದರು ತಪ್ಪೆಸಗದಿರುವ
ಶಾಸ್ತ್ರೀಜಿ ಎಂಬ ಅಪ್ಪಟ ಚಿನ್ನಕೆ
ಸಾಕ್ಷಿಯಾದವರು ಭಾರತೀಯರು
ಪ್ರಧಾನಿಯಾದರು ಭಾರತ ದೇಶಕೆ
ಪೂರ್ವ ದಿಕ್ಕಿನಲಿ ಭಾಸ್ಕರನಂತೆ
ಬೆಳಗಲು ಬಹಳವೆ ಅವಕಾಶಗಳಿರೆ
ಭಾರತಮಾತೆಗೆ ಸಾಟಿಯು ಉಂಟೇ
ಭಾರತೀಯರಿಗೆ ಶಾಪವೊ ಏನೋ
ದೇವ ಕೊಟ್ಟರೂ ವಿಧಿ ಬಿಡಬೇಕೇ
ರವಿಯನು ನುಂಗಿತು ಗ್ರಹಣವು ಅಂದು
ಶಾಶ್ವತ ಇರುಳಲಿ ಬದುಕಿರಿ ಎಂದು
ಭಾರತ ಮಾತೆಯ ಕೊರಳಿನ ಹಾರಕೆ
ಶಾಸ್ತ್ರಿಯಂತಹ ಮುತ್ತಿನ ಮಣಿಗಳು
ಶತಮಾನಕ್ಕೊಂದು ಸಿಗುವುದು ಆದರೆ
ಮಣಿಯೊಂದುದಿಸಿದೆ ಭಾರತಿ ಮಡಿಲಲಿ
***********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ