|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಮ್ಮ ಭವಿಷ್ಯದ ಕೀಲಿಕೈ ನಮ್ಮಲ್ಲೇ ಇದೆ: ಪ್ರೊ. ಪಿ.ಎಸ್. ಯಡಪಡಿತ್ತಾಯ

ನಮ್ಮ ಭವಿಷ್ಯದ ಕೀಲಿಕೈ ನಮ್ಮಲ್ಲೇ ಇದೆ: ಪ್ರೊ. ಪಿ.ಎಸ್. ಯಡಪಡಿತ್ತಾಯ

ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಾನಂದ ಸಂಶೋಧನ ಕೇಂದ್ರ’ ಉದ್ಘಾಟನೆ



ಪುತ್ತೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ಕಾಲಾವಧಿಯಲ್ಲಿ ಜಾರಿಗೊಳಿಸುವ ಅವಕಾಶ ಸಿಗುತ್ತಿರುವುದು ನಮ್ಮ ಅದೃಷ್ಟ. ಈ ಶಿಕ್ಷಣ ನೀತಿಯ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ರಾಷ್ಟ್ರ ಪ್ರೇಮದ ಜೊತೆಗೆ ಚಾರಿತ್ರ್ಯ ನಿರ್ಮಾಣಕ್ಕೆ ಮಹತ್ವವನ್ನು ನೀಡುತ್ತದೆ. ಮೊದಲು ಉತ್ತಮನಾಗು ನಂತರ ಉಪಕಾರಿಯಾಗು ಎನ್ನುವ ಮಾತಿದೆ. ಅದಕ್ಕಾಗಿ ಪ್ರೇರಣೆ ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯವು, ಕಾಲೇಜಿನ ಐಕ್ಯುಎಸಿ ಘಟಕದ ಸಹಯೋಗದೊಂದಿಗೆ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆರಂಭಿಸುತ್ತಿರುವ ವಿವೇಕಾನಂದ ಸಂಶೋಧನ ಕೇಂದ್ರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.


ಹೊಸ ಪ್ರಯೋಗಗಳನ್ನು ಕೈಗೊಂಡಾಗ ಎದುರಾಗುವ ಅಡೆತಡೆಗಳು ಅನೇಕ. ನಮ್ಮನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸುವವರು ಅನೇಕ ಮಂದಿ. ಹೀಗಾಗಿ ಹೊಸ ಪ್ರಯತ್ನಕ್ಕೆ ಕೈಹಾಕಿದಾಗ ಇಂತಹ ನಿಂದನೆಗಳಿಗೆ, ಅಡೆತಡೆಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಟೀಕಾಕಾರರಿಗೆ ನಾವು ನಮ್ಮ ಮಾತುಗಳ ಮೂಲಕ ಉತ್ತರಿಸುವ ಅಗತ್ಯವಿಲ್ಲ. ನಾವು ಸಮಾಜಕ್ಕೆ ನೀಡುವ ಕೊಡುಗೆಗಳು ಉತ್ತರಿಸಬೇಕು. ನಮ್ಮ ಭವಿಷ್ಯದ ಕೀಲಿಕೈ ನಮ್ಮಲ್ಲೇ ಇದೆ. ಅದನ್ನ ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದು ನಮ್ಮ ಕೈಯಲ್ಲಿದೆ. ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ ಎಂದು ಅವರು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ‘ಸಮತ್ವ’ ಸಂಶೋಧನ ಸಂಚಿಕೆಯನ್ನು ಅನಾವರಣಗೊಳಿಸಿ ದಿಕ್ಸೂಚಿ ಭಾಷಣಗೈದ, ಮಂಗಳೂರು ವಿಶ್ವವಿದ್ಯಾನಿಯದ ಡಾ. ಪಿ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲಗಳು. ಮೌಲ್ಯಗಳು ಹಾಗೂ ಅನುಭವಗಳು ಸೇರಿದರೆ ಜ್ಞಾನ. ಜ್ಞಾನವನ್ನು ಸಂಪಾದಿಸಲು ಸಂಶೋಧನೆ ಎನ್ನುವುದು ಪ್ರಮುಖ ಭಾಗವಾಗಿದೆ. ಸಂಶೋಧನೆ ಮಾಡುವವರು ಪ್ರಶ್ನಿಸಬೇಕು, ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಜ್ಞಾನವನ್ನು ಬೆಳೆಸುವುದು, ಪಸರಿಸುವುದು, ಉಳಿಸುವುದು ಹಾಗೆಯೇ ಮುಂದಿನ ಪೀಳಿಗೆಗೆ ವಿಸ್ತರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಸಂಶೋಧನ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಇದೆ. ಆದರೆ ಅದನ್ನು ನಾವು ಗುರುತಿಸಬೇಕಾದ ಅವಶ್ಯಕತೆಯಿದೆ. ಸಂಶೋಧನೆಗೆ ಒಳಪಡಿಸಬಹುದಾದ ವಸ್ತುಗಳು ನಮ್ಮ ಸುತ್ತಲೂ ಇವೆ. ಅವುಗಳನ್ನು ನಾವು ಗುರುತಿಸಿ, ಸಂಶೋಧನೆಗೆ ಒಳಪಡಿಸಿ ಸಮಾಜಕ್ಕೆ ನಮ್ಮಿಂದಾಗುವ ಒಳಿತನ್ನು ಮಾಡುವ ಅವಶ್ಯಕತೆಯಿದೆ. ನಮ್ಮ ಸಂಶೋಧನೆಗಳಿಂದ ಸಮಾಜಕ್ಕೆ, ದೇಶಕ್ಕೆ ಒಳಿತಾಗಬೇಕೆ ವಿನಃ ಕೆಡುಕಾಗಬಾರದು. ಹಾಗೆಯೇ ಕೇವಲ ಸಂಶೋಧನೆಗಳನ್ನು ಕೈಗೊಂಡು ನಾವು ವಿಷಯವನ್ನು ತಿಳಿದುಕೊಂಡರೆ ಸಾಲದು. ಅದನ್ನು ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕು. ಹಳೆಬೇರುಗಳ ಜೊತೆ ಹೊಸ ಚಿಗುರುಗಳು ಸೇರಿ, ಹೊಸವಿಚಾರಗಳನ್ನು ಕಲೆಹಾಕಿ ದೇಶಕ್ಕೆ ಹೆಮ್ಮೆತರುವಂತಹ ಕೆಲಸಗಳು ನಮ್ಮಿಂದಾಗಲಿ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಅವರು ಸಾಂಕೇತಿಕವಾಗಿ ಆಯ್ದ ಅಧ್ಯಾಪಕರಿಗೆ ಕಿರುಸಂಶೋಧನ ಅನುಮತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಸಂಶೋಧನ ಕೇಂದ್ರಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳು, ವಿವೇಕಾನಂದ ಆಡಳಿತ ಮಂಡಳಿ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು, ಸದಸ್ಯರು, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿಶೇಷ ಆಹ್ವಾನಿತರು, ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಶೋಧನ ಕೇಂದ್ರದಲ್ಲಿ ಶಾರದ ಪೂಜೆಯನ್ನು ನೆರವೇರಿಸಲಾಯಿತು.


ಕಾಲೇಜಿನ ಎನ್.ಎಸ್.ಎಸ್. ಹಾಗೂ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ವತಿಯಿಂದ ಕುಲಪತಿಗಳಿಗೆ ಗೌರವವಂದನೆ ಅರ್ಪಿಸಲಾಯಿತು. ಭಾರತ ಮಾತೆ ಹಾಗೂ ವಿವೇಕಾನಂದರಿಗೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಪ್ರಥಮ ಎಂ.ಕಾಂ. ವಿದ್ಯಾರ್ಥಿನಿಯರಾದ ಅನುಶ್ರೀ, ರೂಪ ಹಾಗೂ ಅಶ್ವಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ವಿವೇಕಾನಂದ ಸಂಶೋಧನ ಘಟಕದ ನಿರ್ದೇಶಕ ಡಾ. ಶ್ರೀಧರ ಹೆಚ್. ಜಿ. ಪ್ರಸ್ತಾವನೆಗೈದರು. ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ವಂದಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.


“ವಿವೇಕಾನಂದ ಕಾಲೇಜು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಎಂದರೆ ನನಗೆ ಅದು ಖುಷಿಯ ಸಂಗತಿ. ಏಕೆಂದರೆ ಇಲ್ಲಿ ಆಯೋಜಿಸುವ ಪ್ರತಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ. ಹಾಗೂ ಅಷ್ಟೇ ಪರಿಣಾಮಕಾರಿಯಾಗಿಯೂ ಇರುತ್ತವೆ. ವಿದ್ಯೆಗೆ ಶಕ್ತಿಕೇಂದ್ರವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತವೆ. ಯಾವುದೇ ಅಡತಡೆಗಳು ಬಂದರೂ ಅದನ್ನು ಮೀರಿ ಯಶಸ್ವಿಯಾಗಿ ಮುಂದುವರೆಯಲಿ”

-ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post