|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುರಳಿ ಕಡೆಕಾರ್ ಅವರಿಗೆ ಪಿಆರ್‌ಸಿಐ 'ಸಮುದಾಯ ಶಿಕ್ಷಣ ಸೇವೆ' ಪುರಸ್ಕಾರ

ಮುರಳಿ ಕಡೆಕಾರ್ ಅವರಿಗೆ ಪಿಆರ್‌ಸಿಐ 'ಸಮುದಾಯ ಶಿಕ್ಷಣ ಸೇವೆ' ಪುರಸ್ಕಾರ


 


ಉಡುಪಿ: ವಹಿಸಿಕೊಂಡ ಕೆಲಸ ಕಾರ್ಯದ ಸಮಗ್ರ ನಿರ್ವಹಣೆಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಯೋಚನೆ, ಯೋಜನೆ, ಸಂಯೋಜನೆಗಳ ಸಂಚಯನ ಶಕ್ತಿಯಾಗಿ ಸಾಫಲ್ಯತೆಯನ್ನು ಪಡೆವ ಒಬ್ಬ ಉತ್ಕೃಷ್ಟ ಮಟ್ಟದ ಸಂಘಟನಾ ಚತುರ. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಉತ್ಕೃಷ್ಟತೆಯ ಹರಿಕಾರ. ಕಲೆಯ ನೆಲೆಗೆ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಹೊಸ ವ್ಯಾಖ್ಯಾನ ಬರೆದ ಕಲಾಕಾರ. ಸಣ್ಣ ಹುದ್ದೆಯ ಹೊತ್ತು ದೊಡ್ಡವರನ್ನು ಮುಂದೆ ಬಿಟ್ಟು ಎಣಿಸಿದ್ದನ್ನು ಸಾಧಿಸಿ ತೋರುವ ಛಲದಂಕಮಲ್ಲ. ಅಸಾಧ್ಯವನ್ನರಿಯದ ಅಸಾಧಾರಣ ವ್ಯಕ್ತಿತ್ವ. ತನ್ನ ಅಭಿಪ್ರಾಯಗಳನ್ನು ನಿರ್ಧಾಕ್ಷಿಣ್ಯದಿಂದ ಮಂಡಿಸುವ ಸ್ಪಷ್ಟ ಅಭಿವ್ಯಕ್ತಿಯ ವಾಕ್ಚತುರ. ಯಾರಲ್ಲೂ ನಿಷ್ಟುರವಿಲ್ಲದೆ ಎಲ್ಲರೂ ನಮ್ಮವರೇ ಎನ್ನುವ ಸೌಹಾರ್ಧ ಸಂಬಂಧಗಳ ಮನೋಭಾವ. ಇವೆಲ್ಲ ಮುರಳಿಯೊಳಗಿನ ಭವ್ಯ ನಾದ ಶಕ್ತಿ.


ಸಂಸ್ಕಾರವಂತ ಸುಸಂಸ್ಕೃತ ಮನೆತನದ ನಾರಾಯಣ ಭಟ್ ವನಜಾಕ್ಷಿ ದಂಪತಿಗಳ ಒಂಬತ್ತನೆಯ ಕುವರ - ಅವರ ಆರಾಧ್ಯ ಲಕ್ಷ್ಮೀನಾರಾಯಣ ದೇವರು ಅವರಿಗೆ ಹಾಗೂ ಉಡುಪಿಗೆ ನೀಡಿದ ವರ ಪ್ರಸಾದ ಮುರಳಿ ಎಂದರೆ ತಪ್ಪಾಗಲಾರದು. ಕಡೆಕಾರು ಇವರು ಹುಟ್ಟಿ ಬೆಳೆದ ಊರು. ಬಾಲ್ಯದಿಂದಲೂ ಶಿಕ್ಷರರ ಮೇಲಿದ್ದ ಗೌರವ ಅವರಿಗೆ BEd ಮಾಡಿ ಶಿಕ್ಷಕನಾಗಲು ಪ್ರೇರೇಪಿಸಿತು. ಎಳವೆಯಿಂದಲೂ ಅಂಟಿದ ಸಾಂಸ್ಕೃತಿಕ ರಂಗದ ಮೇಲಿನ ಆಸಕ್ತಿ ಅವರನ್ನು ಒಬ್ಬ ನಟ ಹಾಗೂ ತೆಂಕು ಹಾಗೂ ಬಡಗು ತಿಟ್ಟಿನ ಶ್ರೇಷ್ಟ ಯಕ್ಷಗಾನ ಪಟುವನ್ನಾಗಿಸಿತು.


ಯಕ್ಷಗಾನದ ಹೆಬ್ಬಯಕೆ ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾ ಮಂಡಳಿಯ ದಕ್ಷ ಅಧ್ಯಕ್ಷನನ್ನಾಗಿಸಿ ಸಂಸ್ಥೆಯನ್ನು ಮುನ್ನಡೆಸಿತು. ಜೊತೆಗೆ ಪಾರ್ಥಿ ಸುಬ್ಬ ನಗದು ಪ್ರಶಸ್ತಿಯ ಸ್ಥಾಪನೆಯ ಕತೃವೆನಿಸಿದರು. ನಿಟ್ಟೂರು ಪ್ರೌಢಶಾಲೆಯ ಓರ್ವ ದಕ್ಷ ಅಧ್ಯಾಪಕನಾಗಿ ನಂತರ ಪ್ರಾಧ್ಯಾಪಕನಾಗಿ ದುಡಿದು ತನ್ನ ಶೈಕ್ಷಣಿಕ ಸಂಸ್ಥೆಯ ಕೀರ್ತಿಗೆ ಹೊಸ ಮೆರುಗೊಂದನ್ನು ಕೊಟ್ಟರು. ತನ್ನ ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ನಡುವಳಿಕೆಯಿಂದ ಅತ್ಯುತ್ತಮ ಶಿಕ್ಷಕರೆನಿಸಿಕೊಂಡು ಮಾದರಿ ಶಿಕ್ಷಕರಾದರು.


ಶಾಲಾ ಬಡ ಮಕ್ಕಳ ವೈಯಕ್ತಿಕ ದು:ಖ ದುಮ್ಮಾನ ನೋವುಗಳನ್ನು ಅರಿತು ಸ್ಪಂದಿಸಿ ತನ್ನಿಂದ, ಸಮಾಜದಿಂದ ಹಾಗೂ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಅವರಿಗೆ ತಲುಪಿಸಲು ಶ್ರಮಿಸಿ ಯಶಸ್ವಿಯಾದರು. ಬಡ ಮಕ್ಕಳ ಮನೆಗೆ ಸೋಲಾರ್, ವಿದ್ಯುತ್ ಸಂಪರ್ಕ, ಗ್ಯಾಸ್ ಕನೆಕ್ಷನ್, ಸಿಲಿಂಡರ್ ವ್ಯವಸ್ಥೆ, ಶಾಲಾ ಸಮವಸ್ತ್ರ, ಸ್ಕೂಲ್ ಬ್ಯಾಗ್, ನೋಟ್ ಬುಕ್, ಉಚಿತ ಊಟದ ವ್ಯವಸ್ಥೆ ಹೀಗೆ ವಿದ್ಯೆಗೆ ಪೂರಕವಾದ ನೆರವನ್ನು ದೊರಕಿಸಿಕೊಟ್ಟರು. 


ಇನ್ನು ಶೈಕ್ಷಣಿಕ ಸಂಸ್ಥೆಗೆ ಅಗತ್ಯವಿರುವ ಬಯಲು ರಂಗಮಂಟಪ, ಬಾವಿ, ಫಲ ಪುಷ್ಪಗಳ ಕೈತೋಟ, ಶಾಲಾ ವಾಹನದ ವ್ಯವಸ್ಥೆ, ಹಿಂದುಳಿದ ಮಕ್ಕಳ ವಸತಿ ನಿರ್ಮಾಣಕ್ಕೆ ಮುತುವರ್ಜಿ, ಸೌರವಿದ್ಯುತ್ ಸಂಪರ್ಕದಂತಹ ಬಹಳಷ್ಟು, ಸಂಸ್ಥೆಯ ಉನ್ನತಿ ಕಾರ್ಯಗಳಿಗೆ ಶ್ರಮಿಸಿದರು.


ತನ್ನ ಕನಸಿನ ಯೋಜನೆ ಸುವರ್ಣ ಕೃಷಿ ಅಭಿಯಾನವನ್ನು ಪರಿಚಯಿಸಿ ಹಡಿಲು ಭೂಮಿ ಕೃಷಿ ಮಾಡಿ ಸಾವಯವ ಕೃಷಿ ಭತ್ತವನ್ನು ಅಕ್ಕಿ ಮಾಡಿ ಮಾರಾಟ ಹಾಗೂ ಹಿತೈಷಿಗಳಿಗೆ ಕಾಣಿಕೆಯಾಗಿ ನೀಡಿ ಆತ್ಮನಿರ್ಭರ ಭಾರತದ ಕಲ್ಪನೆಗೆ ಕೈಜೋಡಿಸಿದರು.


ಕಲಾರಂಗದ ಕಾರ್ಯದರ್ಶಿಯಾಗಿದ್ದುಕೊಂಡು ಮಾಡಿದ ಸಾಮಾಜಿಕ ಸೇವೆಗಳು ಲೆಕ್ಕಕ್ಕೆ ಎಟುಕದ್ದು. ಕಲಾವಿದರಿಗೆ ಸಮ್ಮಾನ, ಆರ್ಥಿಕ ನೆರವು, ವಿದ್ಯಾ ಪೋಷಕ ಯೋಜನೆ, ಯಕ್ಷ ನಿಧಿ, ಗೃಹನಿರ್ಮಾಣ, ವಿಮಾ ಯೋಜನೆ, ಇನ್ಫೋಸಿಸ್ ನೆರವಿನಿಂದ ಕಲಾರಂಗಕ್ಕೆ ನಿರ್ಮಾಣ ಹಂತದಲ್ಲಿರುವ ಭವ್ಯ ಕಟ್ಟಡದ ಕೊಡುಗೆ ಇತ್ಯಾದಿ. 


ವೃತ್ತಿಯ ನಿವೃತ್ತಿಯ ನಂತರ ಕೇದಾರೋತ್ಥಾನ ಟ್ರಸ್ಟ್ ನ ಕಾರ್ಯದರ್ಶಿಯಾಗಿ ಹಡಿಲು ಭೂಮಿಗಳ ವಿಲೇವಾರಿ. ಹೀಗೆ ಇವರ ಸಾಧನೆಗಳಿಗಿಲ್ಲ ಮೈಲಿಗಲ್ಲು. ಅವರೆಲ್ಲ ಸಾಧನೆಗಳ ಹಿಂದೆ ಪತ್ನಿ ಶಿಕ್ಷಕಿ ವಿನೋದಾ ಹಾಗೂ ಮಕ್ಕಳು ಕಲಾ ಪ್ರತಿಭೆಗಳಾದ ವಲ್ಲರಿ -ಸನಕರ ಕೊಡುಗೆಯೂ ಇಲ್ಲದಿಲ್ಲ. ಒಟ್ಟಾರೆ ಇವರೆಲ್ಲಾ ಸಾಧನೆಗಳಲ್ಲಿ ಸಮುದಾಯ ಶಿಕ್ಷಣ ಸೇವೆ ಗಮನಾರ್ಹವೆಂದರಿತು ಇವರ ಸಾಧನೆ ಹಾಗೂ ಸೇವೆಗೆ ಶಿರಬಾಗಿ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ, ಉಡುಪಿ-ಮಣಿಪಾಲ ಘಟಕವು ವಿಶ್ವ ಸಂವಹನಕಾರರ ದಿನಾಚರಣೆಯ ಅಂಗವಾಗಿ ಮುರಳಿ ಕಡೆಕಾರ್ ರವರಿಗೆ "ಸಮುದಾಯ ಶಿಕ್ಷಣ ಸೇವೆ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದೆ.

-ರಾಜೇಶ್ ಭಟ್ ಪಣಿಯಾಡಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم