ಪುತ್ತೂರು: ಪ್ರಕೃತಿಯಲ್ಲಿ ಸಮಯ ಕಳೆಯುವುದರಿಂದ ಮನಸ್ಥಿತಿಯು ಉತ್ತಮಗೊಳ್ಳುತ್ತದೆ ಮತ್ತು ಮಾನಸಿಕ ಆರೋಗ್ಯವು ಸುಧಾರಿಸುತ್ತದೆ. ಗುಣಮಟ್ಟದ ಸಮಯವನ್ನು ಚಾರಣದಲ್ಲಿ ಕಳೆಯುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ ಮತ್ತು ಖಿನ್ನತೆಯನ್ನು ದೂರವಿಡುತ್ತದೆ. ಇಂದ್ರಿಯಗಳು ಪ್ರಚೋದಿಸಲ್ಪಟ್ಟು ಸಂವೇದನಾಶೀಲತೆ ಹೆಚ್ಚಾಗುತ್ತದೆ. ಹಾಗೆಯೇ ಓದುವುದರಿಂದ ಬದುಕಿನ ಬಗೆಗಿರುವ ನಮ್ಮ ದೃಷ್ಟಿಕೋನವೇ ಬದಲಾಗುತ್ತದೆ ಎಂದು ಕೆನಡಾದ ಎಎಂಸಿ ಇನ್ಸೂರೆನ್ಸ್ ಕಂಪನಿಯ ಅಕೌಂಟಿಂಗ್ಗ್ ಸಹಾಯಕಿ ಸ್ವಾತಿ ಕಿಳಿಂಗಾರು ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ನೇಚರ್ ಕ್ಲಬ್, ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 'Explore to Experience' ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭಾನುವಾರ ಮಾತನಾಡಿದರು.
ಬಿಡುವಿಲ್ಲದ ದೈನಂದಿನ ಜೀವನದಿಂದ ಚಿಕ್ಕ ವಿರಾಮ ಅಗತ್ಯವೆನಿಸಿದಾಗ ಪ್ರಕೃತಿಯನ್ನು ಆಸ್ವಾದಿಸುವುದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ ಎಂದು ಪ್ರಕೃತಿಯೊಂದಿಗೆ ತಾವು ಕಳೆದ ಕ್ಷಣಗಳನ್ನು ವಿದ್ಯಾರ್ಥಿಗಳೊಂದಿಗೆ ಅವರು ಹಂಚಿಕೊಂಡರು. ಜೊತೆಗೆ ಆಸಕ್ತ ವಿದ್ಯಾರ್ಥಿಗಳಿಗಾಗಿ ಓದಲೇ ಬೇಕಾದ ಪುಸ್ತಕಗಳ ಕುರಿತಾಗಿ ಒಂದಷ್ಟು ಮಾಹಿತಿ ನೀಡಿದರು.
ನೇಚರ್ ಕ್ಲಬ್ ನ ಸಂಚಾಲಕಿ ಡಾ. ಸ್ಮಿತಾ ಪಿ.ಈ. ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ದ್ವಿತೀಯ ಬಿಝಡ್ ಸಿ ವಿದ್ಯಾರ್ಥಿಗಳಾದ ಶೈನಿ ಕೆ ಆರ್ ಸ್ವಾಗತಿಸಿ, ಪ್ರೀತಮ್ ವಂದಿಸಿದರು. ಸಿಂಚನ ಪಿ. ಭಟ್ ನಿರೂಪಿಸಿದರು. ಗೂಗಲ್ ಮೀಟ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಸುಮಾರು ೬೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ