ಹಿಂದೂ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ
ಉಡುಪಿ: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನೇನೋ ಜಾರಿಗೆ ಬಂತು. ಆದರೆ ಕರಾವಳಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಿರಂತರವಾಗಿ ಗೋವುಗಳ ಮೇಲೆ ಆಕ್ರಮಣ, ಅಕ್ರಮ ಸಾಗಾಟ ಗೋಹತ್ಯೆಗಳು ನಡೆಯುತ್ತಿವೆ. ಹೀಗಿರುವಾಗ ಹಲ್ಲಿಲ್ಲದ ಕಾನೂನನಿಂದ ಪ್ರಯೋಜನವಾದರೂ ಏನು? ಆ ಕಾನೂನು ತೆಗೆದು ಬಿಸಾಡುವುದೇ ಲೇಸು ಎಂದು ಹಿಂದೂ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಮಂಗಳೂರು ಜಿಲ್ಲೆಗಳಲ್ಲಂತೂ ಗೋವುಗಳ ಸ್ವಚ್ಛಂದ ಬದುಕಿಗೆ ಬೆಂಕಿ ಬೀಳುತ್ತಿದೆ. ದೇವಸ್ಥಾನಗಳ ಅಂಗಣ, ಮನೆಗಳ ಹಟ್ಟಿಗಳಿಗೆ ಹಾಗೂ ಅಲ್ಲಲ್ಲಿ ಬೀದಿಗಳಲ್ಲಿ ಅನಾಥ ಬದುಕು ಸಾಗಿಸುತ್ತಿರುವ ಗೋವುಗಳ ಮೇಲೆ ದುರುಳರ ಅಟ್ಟಹಾಸ ಮುಂದುವರೆದಿದೆ ಎಂದಾದರೆ ಕಾನೂನು ಯಾರಿಗಾಗಿ ಎಂದು ಭಟ್ ಪ್ರಶ್ನಿಸಿದ್ದಾರೆ.
ಪರಿಸ್ಥಿತಿ ಹೀಗೇ ಮುಂದುವರೆದರೆ ಖಂಡಿತವಾಗಿ ಆಗಬಾರದ್ದು ಆಗಿಯೇ ತೀರುತ್ತದೆ. ಹಿಂದೂ ಸಂಘಟನೆಗಳು ಮತ್ತು ಹಿಂದೂ ಸಮಾಜವೇ ಕಾನೂನು ಮಾಡಬೇಕಾದ ಕೆಲಸ ಮಾಡಬೇಕಾದೀತು ಎಚ್ಚರ ಎಂದು ಅವರು ಹೇಳಿದ್ದಾರೆ.
ನಂತರ ಆಗಬಹುದಾದ ಅನರ್ಥಗಳಿಗೆ ಸರ್ಕಾರ ಜಿಲ್ಲಾಡಳಿತಗಳೇ ಹೊಣೆಯಾಗಬೇಕು. ಗೋವುಗಳಿಗೆ ನೆಮ್ಮದಿಯ ಬದುಕು ಈ ನೆಲದಲ್ಲಿ ಸಾಧ್ಯವಿಲ್ಲವೆಂದಾದರೆ ತೀರಾ ನಾಚಿಕೆಗೇಡು. ಇಂತಹ ಧರ್ಮದ್ರೋಹದ ಪಾಪವನ್ನು ಇಡೀ ಸಮಾಜ ಹೊರಬೇಕು ಎಂದು ಭಟ್ ವಿಷಾದಿಸಿದ್ದಾರೆ.