|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡದಲ್ಲಿ ವಿಜ್ಞಾನವನ್ನು ಮಾತನಾಡುವ ಪ್ರವೃತ್ತಿ ಹೆಚ್ಚಬೇಕು: ಡಾ ಎಂ ಎಸ್ ಮೂಡಿತ್ತಾಯ

ಕನ್ನಡದಲ್ಲಿ ವಿಜ್ಞಾನವನ್ನು ಮಾತನಾಡುವ ಪ್ರವೃತ್ತಿ ಹೆಚ್ಚಬೇಕು: ಡಾ ಎಂ ಎಸ್ ಮೂಡಿತ್ತಾಯ

ಮಂಗಳೂರು ವಿವಿ: 16ನೇ ಕನ್ನಡ ವಿಜ್ಞಾನ ಸಮ್ಮೇಳನ ಸಮಾರೋಪ



ಮಂಗಳೂರು: ವಿಜ್ಞಾನದ ಅಗತ್ಯತೆ ಜನಸಾಮಾನ್ಯನಿಗೂ ಇದೆ. ಕನ್ನಡದಲ್ಲಿ ವಿಜ್ಞಾನವನ್ನು ಮಾತನಾಡುವ ಪ್ರವೃತ್ತಿ ಹೆಚ್ಚಬೇಕು. ವಿಜ್ಞಾನದ ಆವಿಷ್ಕಾರಗಳು ಜನಸಾಮಾನ್ಯರನ್ನು ತಲುಪಲು ಪ್ರಾದೇಶಿಕ ಭಾಷೆಗಳು ಮಾಧ್ಯಮವಾಗಬೇಕು, ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ ಎಂ ಎಸ್ ಮೂಡಿತ್ತಾಯ ಅಭಿಪ್ರಾಯಪಟ್ಟರು.


ಶುಕ್ರವಾರ ನಡೆದ ಸ್ವದೇಶೀ ವಿಜ್ಞಾನ ಆಂದೋಲನ ರಾಜ್ಯ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ ಮಂಗಳಾ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ 16 ನೇ ಕನ್ನಡ ವಿಜ್ಞಾನ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.


“ವಿಜ್ಞಾನಕ್ಕೆ ಅದರದ್ದೇ ಆತ ಬಾಷೆಯಿದೆ. ಅದು ಬಹಳ ಸಂಕ್ಷಿಪ್ತ ಮತ್ತು ಸ್ಥಿರ. ಮಕ್ಕಳು ಮಾತೃ ಭಾಷೆಯಲ್ಲದಿದ್ದರೂ, ಪ್ರಾದೇಶಿಕ ಭಾಷೆಯಲ್ಲಿ ಐದನೇ ತರಗತಿಯವರೆಗೆ ಓದಬೇಕು. ವೈಜ್ಞಾನಿಕ ಚಿಂತನೆ ಬೆಳೆದ ಬಳಿಕ, ಅಂದರೆ ಸುಮಾರು ಎಂಟನೇ ತರಗತಿ ಬಳಿಕ ವಿಜ್ಞಾನದ ಭಾಷೆ ಕಲಿಯಬೇಕು. ಆಗ ಅವರಲ್ಲಿನ ಉತ್ಪಾದಕತೆ ಹೆಚ್ಚುತ್ತದೆ. “ವಿಜ್ಞಾನದಲ್ಲಿ ಅಧ್ಯಾಪಕರಿಗೆ ಅಧ್ಯಯನ ಸಾಮಗ್ರಿ, ಅಧ್ಯಾಪನ ತರಬೇತಿ ಅಗತ್ಯ. ವಿಜ್ಞಾನದ ಬಗ್ಗೆ ಪ್ರಾದೇಶಿಕವಾಗಿ ಯೋಚಿಸಿದರೂ ಜಾಗತಿಕ ಚಿಂತನೆ ಬಿಡಬಾರದು” ಎಂದು ಕಿವಿಮಾತು ಹೇಳಿದರು.


ಮುಖ್ಯ ಅತಿಥಿ ಸ್ವದೇಶಿ ವಿಜ್ಞಾನ ಆಂದೋಳನ ರಾಜ್ಯಾಧ್ಯಕ್ಷ ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, “ಈ ಕಾರ್ಯಕ್ರಮ ಒಂದು ಆಂದೋಲನದ ಭಾಗ. ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಹೆಜ್ಜೆ ಹಾಕಿ ಸಂಸ್ಕೃತಿಯನ್ನು ಹುಟ್ಟುಹಾಕಿದವರು. ಅವರಲ್ಲಿದ್ದ ಆ ಜ್ಞಾನ ಜನಸಾಮಾನ್ಯರಿಗೂ ತಿಳಿಯಬೇಕು, ಎಂದರು.


ಕಾರ್ಯಾಧ್ಯಕ್ಷ ಡಾ. ಸಿ ರೇಣುಕಾ ಪ್ರಸಾದ್, ಸ್ವದೇಶಿ ವಿಜ್ಞಾನ ಆಂದೋಳನ ಕನ್ನಡ ಪ್ರಬಂಧ ಮಂಡನೆಯ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಿದೆ. ಪ್ರಬಂಧಗಳ ವಿಷಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನವೂ ನಡೆಯುತ್ತಿದೆ, ಎಂದರು.


ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಡೀನ್ ಡಾ. ಮಂಜುನಾಥ ಪಟ್ಟಾಭಿ, ಮಂಡನೆಯಾದ ಪ್ರಬಂಧಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ಣಯಗಳನ್ನು ಮಂಡಿಸಿದ ಸಿಂಡಿಕೇಟ್ ಸದಸ್ಯ ಡಾ. ಶಿಕಾರಿಪುರ ಕೃಷ್ಣಮೂರ್ತಿ, ಕನ್ನಡವನ್ನು ತಾಂತ್ರಿಕ ಭಾಷೆಯಾಗಿ ಪದವಿಯ ಕೊನೆಯ ಸೆಮಿಸ್ಟರ್ನಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕು. ತಾಂತ್ರಿಕ ಕನ್ನಡ ಪದಕೋಶ ಮತ್ತು ವಿಕಿಪೀಡಿಯಾಗಳ ರಚನೆಯಾಗಬೇಕು, ಇದಕ್ಕಾಗಿ ಸಮಿತಿ ಸ್ಥಾಪನೆಯಾಗಬೇಕು, ಎಂದರು.


ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿಕೆ, ವಿಜ್ಞಾನವೆಂದರೆ ಒಂದು ವಿಷಯದ ಬಗ್ಗೆ ವಿಸ್ತಾರವಾಗಿ, ವೈಜ್ಞಾನಿಕವಾಗಿ ಅಧ್ಯಯನ ನಡೆಸುವುದಷ್ಟೇ. ವಿಜ್ಞಾನ ವಿಸ್ತರಿಸಿದಷ್ಟು ಇತರ ವಿಷಯಗಳು ಸಹಜವಾಗಿ ಬೆಳೆಯುತ್ತವೆ, ಎಂದರು. ʼಅನ್ವೇಷಣೆʼ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದ ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ ಮತ್ತು ಪ್ರಬಂಧ ಮಂಡಿಸಿದ ಅರಣ್ಯ ಇಲಾಖೆಯ ತಂಡಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು.


ಸಮ್ಮೇಳನದ ಸಂಚಾಲಕ ಡಾ. ನಿರಂಜನ ಪ್ರಭು ಟಿ, ಸ್ವದೇಶಿ ವಿಜ್ಞಾನ ಆಂದೋಳನ (ಕರ್ನಾಟಕ) ಪ್ರಧಾನ ಕಾರ್ಯದರ್ಶಿ ರಮೇಶ್ ಹೆಚ್, ಕರಾವಳಿ ಜಿಲ್ಲಾ ಘಟಕದ ಮುಖ್ಯಸ್ಥ ಡಾ. ಎಸ್.ಎಂ ಶಿವಪ್ರಕಾಶ್ ಸಕ್ರಿಯವಾಗಿ ಭಾಗವಹಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.


ಬಹುಮಾನ

ಕಾರ್ಯಕ್ರಮದಲ್ಲಿ ಒಟ್ಟು 4 ವೇದಿಕೆಗಳಲ್ಲಿ 12 ವಿಭಾಗಗಳಲ್ಲಿ 230 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಾಗಿತ್ತು. ʼಜಗತ್ತಿಗೆ ಭಾರತೀಯ ವಿಜ್ಞಾನ ಪರಂಪರೆಯ ಕೊಡುಗೆʼ ಎಂಬ ವಿಷಯದ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ, ಆಯ್ದ ಪ್ರಬಂಧಗಳಿಗೆ ʼಅತ್ಯುತ್ತಮ ಪ್ರಬಂಧʼ, ʼಅತ್ಯುತ್ತಮ ಪ್ರಬಂಧ- ಮಹಿಳೆʼ ಮತ್ತು ʼಅತ್ಯುತ್ತಮ ಪ್ರಬಂಧ- ವಿದ್ಯಾರ್ಥಿʼ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ವಿಭಾಗಗಳಲ್ಲಿ ಶ್ರೇಷ್ಟ ಪ್ರಬಂಧ ಮಂಡನೆ ಮಾಡಿದವರನ್ನೂ ಗೌರವಿಸಲಾಯಿತು. ಅರಣ್ಯ ಇಲಾಖೆಯ ಚರಣ್ ಕುಮಾರ್ ಮತ್ತು ಆಳ್ವಾಸ್ ಕಾಲೇಜಿನ ಮಲ್ಲಿಕಾರ್ಜುನ್ ತಮ್ಮ ಅನುಭವ ಹಂಚಿಕೊಂಡರು. 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم