|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೋದಕ ಪ್ರಿಯನಿಗೆ ಮೂರ್ತರೂಪ

ಮೋದಕ ಪ್ರಿಯನಿಗೆ ಮೂರ್ತರೂಪ

 ಸೆ. 10- ಗಣೇಶ ಚತುರ್ಥಿ




ಶಿವ ಪಾರ್ವತಿಯ ಪ್ರೀತಿಯ ಸುತ, ಸಂಸಾರದ ವಿಘ್ನಗಳನ್ನು ಪರಿಹರಿಸುವ ಕಾರುಣ್ಯ ಮೂರ್ತಿ ಗಣಪ ಮನೆಗೆ ಬರಲು ಇನ್ನೇನು ಕೆಲವೇ ದಿನಗಳಲ್ಲಿ ಬರಲಿದ್ದು ದೇಶದಾದ್ಯಂತ ಜನತೆ ಸಂಭ್ರಮದ ಗಣೇಶ ಚತುರ್ಥಿ ಆಚರಿಸಲು ಕಾಯುತ್ತಿದ್ದಾರೆ.


ಭಾರತೀಯರಲ್ಲಿ ಬಾಂಧವ್ಯ ಬೆಸೆಯಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶ ಹಬ್ಬವು ಇಂದು ದೇಶದ ಬೀದಿ ಬೀದಿಗಳನ್ನಾವರಿಸಿದೆ. ನಾನಾ ಬಗೆಯ ಮೂರ್ತಿಗಳು ಕಲಾವಿದರ ಕೈಯಲ್ಲರಳಿ ಪ್ರತಿಷ್ಠಾಪಿಸಲ್ಪಡುತ್ತದೆ. ಈ ಸಂಭ್ರಮದ ನಡುವೆ ಕಳೆದ 30 ವರ್ಷಗಳಿಂದ ಮೋದಕ ಪ್ರಿಯನಿಗೆ ಮೂರ್ತರೂಪ ಕೊಡುವಲ್ಲಿ ಅಪ್ರತಿಮರಾದವರು ಹೆಚ್ ಎಂ ನಾಗರಾಜಪ್ಪ.


`ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ’ ಎಂಬುದು ಹಿರಿಯರ, ಅನುಭವಿಕರ ಮಾತು. ಆದರೆ ಕಲೆಯನ್ನು ವೃತ್ತಿಯನ್ನಾಗಿಸಿ ಹೆಸರು ಮಾಡಿದವರು ಶುದ್ಧ ಮಣ್ಣಿನ ಮೂರ್ತಿ ತಯಾರಕ ಹೆಚ್ ಎಂ ನಾಗರಾಜಪ್ಪ ಕೂಡ ಒಬ್ಬರು. ಕಲಾವಿದ ಕುಟುಂಬಸ್ಥರು ತಲತಲಾಂತರದಿಂದ ಮಾಡಿಕೊಂಡ ಬಂದ ಮೂರ್ತಿ, ವಿಗ್ರಹಗಳ ನಿರ್ಮಾಣ ಕಾರ್ಯವನ್ನು ನಾಗರಾಜಪ್ಪ ಮುಂದುವರೆಸಿಕೊಂಡು ಬಂದಿದ್ದಾರೆ.

ಬೆಂಗಳೂರು ನಡೆಯುವ ಗಣೇಶೋತ್ಸವಗಳಿಗೆ ಮೂರ್ತಿಗಳನ್ನು ತಯಾರಿಸಿ ಕೊಡುವ ಕಾಯಕದಲ್ಲಿ ತೊಡಗಿಕೊಂಡಿರುವ ನಾಗರಾಜಪ್ಪ, ಚಿಕ್ಕ ವಯಸ್ಸಿನಿಂದಲೇ ಶ್ರದ್ಧೆ, ಭಕ್ತಿಯಿಂದ ಮೂರ್ತಿ ಮಾಡುವ ಕಾಯಕದಲ್ಲಿ ತೊಡಗಿಕೊಂಡವರು. ನಗರದ ಶ್ರೀನಿವಾಸ ನಗರದ ಬ್ರಹ್ಮಚೈತನ್ಯ ಮಂದಿರದ ಸಮೀಪ ವರ್ಷದ ನಾಲ್ಕು ತಿಂಗಳು ವಿವಿಧ ಆಕೃತಿಗಳ ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ಬೇಡಿಕೆಗನುಗುಣವಾಗಿ ತಯಾರಿಸುತ್ತಾರೆ. ಮಣ್ಣಿನಿಂದ ಸಾವಿರಾರು ಮೂರ್ತಿಗಳನ್ನು ಮಾಡುವುದು ಕಷ್ಟದ ಕೆಲಸ. ಅದರಲ್ಲೂ ಬೇಡಿಕೆ ಹೆಚ್ಚಿದಾಗ ಹಸಿ ಮೂರ್ತಿಗಳು ಒಣಗುವುದು ಕಷ್ಟ. ಹೀಗಾಗಿ ನಾಗರಾಜಪ್ಪ ಜೇಡಿ ಮಣ್ಣನ್ನು ತಂದು ಗಣೇಶನ ಮೂರ್ತಿಗಳನ್ನು ನಿರ್ಮಿಸುತ್ತಾರೆ.


ಸಮರ್ಪಕ ಜೇಡಿ ಮಣ್ಣಿನ ಪೂರೈಕೆ ಇಲ್ಲದಿರುವುದು ಮತ್ತು ರಾಸಾಯನಿಕಯುಕ್ತ ಬಣ್ಣವನ್ನು ಸರಕಾರ ನಿಷೇಧಿಸಿರುವುದರಿಂದ ಜಲವರ್ಣಗಳನ್ನೇ ಬಳಸುತ್ತಾರೆ. ಹೀಗಾಗಿ ಮೂರ್ತಿ ತಯಾರಿಕೆಯ ವೆಚ್ಚ ಅಧಿಕವಾಗಿದೆ. ಒಂದುವರೆ ಇಂಚಿನಿಂದ ಐದು ಅಡಿ ಗಾತ್ರದ ಗಣಪತಿ ಮೂರ್ತಿಗಳನ್ನು ಗ್ರಾಹಕರ ಅಭಿರುಚಿಗೆ ಹಾಗೂ ಬೇಡಿಕೆ ತಕ್ಕಂತೆ ತಯಾರಿಸಿಕೊಡುತ್ತಾರೆ.


ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಕಳೆದ 2-3 ತಿಂಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಇವರು ಹತ್ತು ದೊಡ್ಡ ಹಾಗೂ ಸಾವಿರಕ್ಕೂ ಹೆಚ್ಚು ಸಣ್ಣ ಗಣಪತಿಗಳನ್ನು ಸಿದ್ಧಗೊಳಿಸಿದ್ದಾರೆ. ಬೇಡಿಕೆಗನುಸಾರವಾಗಿ ನಿರ್ಮಾಣಗೊಳ್ಳುವ ಮೂರ್ತಿಗಳಿಗೆ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣ ನೀಡುತ್ತಾರೆ. ಚತುರ್ಥಿ ದಿನ ದೃಷ್ಟಿ ಬಿಡಿಸಿ, ಕಲೆ ಕೊಡುತ್ತಾರೆ. ಕೊನೆ ಹಂತದ ಕೈಚಳಕದಲ್ಲಿ ಗಣೇಶ ತಯಾರಿಸುವಾಗ ಬಳಿ ಹಾಗೂ ಗುಲಾಬಿ ಮಿಶ್ರಿತ ಬಣ್ಣಗಳನ್ನು ಸಿಂಪಡಿಸುತ್ತಾರೆ. ವರ್ಷದಿಂದ ವರ್ಷಕ್ಕೆ ನಾಗÀರಾಜಪ್ಪ ಜವಾಬ್ದಾರಿ ಹೆಚ್ಚುತ್ತಿದ್ದು, ಪರಿಸರ ಸ್ನೇಹಿ ಗಣಪತಿ ತಯಾರಿಸುವುದು, ಪಿಒಪಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ಗ್ರಾಹಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜೇಡಿ ಮಣ್ಣಿನ ಗಣೇಶನನ್ನು ತಯಾರಿಸಿ ಜಲಚರ, ಪರಿಸರ ರಕ್ಷಿಸಬೇಕೆನ್ನುವುದು ಇವರ ಮನವಿ.



ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸೋದು ಹೇಗೆ? 

• ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆಯಾಗಬಾರದು.

• ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಸಸ್ಯಸಂಕುಲ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ, ಜಲಚರಗಳ ನಾಶಕ್ಕೆ ನಾಂದಿ. 

• ವಿಗ್ರಹಗಳನ್ನು ಹೂವು, ಬಾಳೆಕಂದು ಇತ್ಯಾದಿಗಳಿಂದ ಪ್ರತ್ಯೇಕಿಸಿ ನಂತರ ನಿಗದಿಪಡಿಸಿದ ಸಂಚಾರಿ ವಿಸರ್ಜನಾ ವಾಹನ/ ಕೆರೆ ಅಥವಾ ಬಕೆಟ್‍ನಲ್ಲಿ ಮಾತ್ರ ವಿಸರ್ಜಿಸಿ. 

• ಗಣೇಶೋತ್ಸವ ಅನಗತ್ಯ ಆಡಂಬರವಿರದೆ ಅರ್ಥಪೂರ್ಣ ಆಚರಣೆಯಾಗಲಿ. 

• ಪುಟ್ಟ ಗಣಪ ಸಾಕು ಪರಿಸರ ಕಾಳಜಿ ಹೆಚ್ಚಾಗಬೇಕು. 

• ರಾಸಾಯನಿಕಯುಕ್ತ, ಪ್ಲಾಸ್ಟಿಕ್ ಗಣಪ ಬೇಡ, ಪಟಾಕಿಗಳನ್ನು ದೂರವಿಡಿ 


-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

ಸಂಸ್ಕೃತಿ ಚಿಂತಕರು

ಮೊಬೈಲ್ : 9739369621

ಇ-ಮೇಲ್ : padmapranava@yahoo.com


0 Comments

Post a Comment

Post a Comment (0)

Previous Post Next Post