ಖಾತೆ ಹೋದರೂ ಕಾಳಜಿ ಮರೆಯದ ಸುರೇಶ್ ಕುಮಾರ್
ಬೆಂಗಳೂರು: 34ನೇ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಮಾಜಿ ಶಿಕ್ಷಣ ಮಂತ್ರಿ ಎಸ್ ಸುರೇಶ್ ಕುಮಾರ್ ಪತ್ನಿಯೊಂದಿಗೆ ಬುಧವಾರ ಬೆಂಗಳೂರು ಕತ್ರಿಗುಪ್ಪೆಯ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ್ದರು.
ಈ ಸಂದರ್ಭ ಅಲ್ಲಿನ ಶ್ರೀ ಕೃಷ್ಣನ ಗುಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನಗಳನ್ನೂ ಸಂದರ್ಶಿಸಿದ ಸುರೇಶ್ ಕುಮಾರ್ ಬಳಿಕ ವಿದ್ಯಾಪೀಠದೊಳಗೊಂದು ಪ್ರದಕ್ಷಿಣೆ ಬಂದು ಅಲ್ಲಿನ ವಿವಿಧ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂತೋಷ ಉತ್ಸಾಹ ಕಾಳಜಿಯಿಂದ ಬೆರೆತರು. ಉಭಯಕುಶಲೋಪರಿ ಮತ್ತು ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದವನ್ನೂ ನಡೆಸಿದರು. ಪ್ರಸ್ತುತ ಸಚಿವ ಸಂಪುಟದಲ್ಲಿ ಇರದಿದ್ದರೂ ಶಿಕ್ಷಣದ ಬಗೆಗಿನ ತಮ್ಮ ಕಾಳಜಿ ಕಳಕಳಿ ಸರಳತೆ ಮರೆಯಾಗಿಲ್ಲ ಎಂಬಂತಿತ್ತು ಅವರ ಈ ನಡೆ.
ಬಳಿಕ ಸ್ವಾಮೀಜಿಯವರನ್ನು ಭೇಟಿ ಮಾಡಿ ಗುರುವಂದನೆ ಸಲ್ಲಿಸಿ ಒಂದಷ್ಟು ಹೊತ್ತು ಸಮಾಲೋಚನೆ ನಡೆಸಿದರು. ಸುರೇಶ್ ಕುಮಾರ್ ದಂಪತಿಯನ್ನು ಶ್ರೀಗಳು ಪ್ರಸಾದ ನೀಡಿ ಆಶೀರ್ವದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ