ಒಂದು ಸಣ್ಣ ರಸಪ್ರಶ್ನೆ
ಬೇರೆ ಯಾವುದೇ ರೋಗ, ಕ್ಷಾಮ ಅಥವಾ ವಿಶ್ವ ಯುದ್ಧಕ್ಕಿಂತ ಹೆಚ್ಚು ಮನುಷ್ಯರನ್ನು ಕೊಂದದ್ದು ಯಾವುದು? ಉತ್ತರ: ಸೊಳ್ಳೆ ಕಡಿತ.
ಇಂದು ನಾವು ಆಧುನಿಕ ವೈದ್ಯಕೀಯದಲ್ಲಿ ಅಪ್ರತಿಮ ಸಾಧನೆ ಮಾಡಿದ್ದರೂ ನಿರಾಕರಿಸಲಾಗದ ಸತ್ಯವೆಂದರೆ ಒಂದು ಸಣ್ಣ ಸೊಳ್ಳೆಯಿಂದ ಕಚ್ಚುವಿಕೆಯ ಮಾರಕ ಪರಿಣಾಮಗಳನ್ನು ಎದುರಿಸಲು ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ.
ಸಣ್ಣ ಕಡಿತ-ದೊಡ್ಡ ಹೊರೆ
ಸಣ್ಣ ಸೊಳ್ಳೆ ಕಡಿತವು ದೊಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿರುವುದು ಆತಂಕದ ಅಂಶ. ಸಾಮಾನ್ಯವಾಗಿ ಅವುಗಳು ಕಚ್ಚಿದಾಗಲೇ ಅವುಗಳ ಇರುವಿಕೆ ನಮ್ಮ ಗಮನಕ್ಕೆ ಬರುತ್ತದೆ. ರಕ್ತ ಕುಡಿಯುವ ಪೀಶಾಚಿಯೆಂದೇ ಪರಿಗಣಿತವಾದ ಸೊಳ್ಳೆಯ ಕಡಿತದಿಂದ ಮಲೇರಿಯಾ, ಡೆಂಗ್ಯೂ, ಕಾಮಾಲೆ, ಚಿಕನ್ ಗುನ್ಯಾ, ಆನೆಕಾಲು ಹಾಗೂ ಮಿದುಳುಜ್ವರ ರೋಗಗಳಿಂದ ಜನರು ನರಳುವಂತೆ ಮಾಡುತ್ತಿದೆ ಮತ್ತು ಇವು ಜಗತ್ತಿನ ಮಾರಕ ಪಿಡುಗುಗಳಾಗಿ ಹರಡುತ್ತಿವೆ.
ಸೊಳ್ಳೆ ಕಡಿತದಿಂದ ಬರುವ ಕಾಯಿಲೆಗಳಲ್ಲಿ ಮಲೇರಿಯಾ ಮುಖ್ಯವಾದದ್ದು ಮತ್ತು ಬಹಳ ವ್ಯಾಪಕವಾದದ್ದು. ಪ್ರಪಂಚದ ಸಾವಿಗೆ ಕಾರಣವಾಗುವ ಎಲ್ಲಾ ಸೋಂಕು ರೋಗಗಳಲ್ಲಿ ಮಲೇರಿಯಾಕ್ಕೆ ಐದನೇ ಸ್ಥಾನ. ಜಾಗತಿಕ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಮಲೇರಿಯಾ ಸುಮಾರು 219 ಮಿಲಿಯನ್ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಪ್ರತಿ ವರ್ಷ ಇದರಿಂದಾಗಿ ಸುಮಾರು ನಾಲ್ಕು ಲಕ್ಷ ಸಾವುಗಳು ಸಂಭವಿಸುತ್ತದೆ ಎಂದು ಅಂದಾಜಿಸಲಾಗಿದೆ. ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳೇ ಹೆಚ್ಚು ಜನರನ್ನು ಕೊಲ್ಲುವ ಜೀವಿಗಳು. ಜಗತ್ತಿನಲ್ಲಿ ಸುಮಾರು 7 ಲಕ್ಷ ಜೀವವನ್ನು ಬಲಿ ತೆಗೆದುಕೊಳ್ಳುವುದು ಸೊಳ್ಳೆಗಳೇ.
ಸೊಳ್ಳೆಗಳಿಂದ ಹರಡುವ ರೋಗಗಳಿಂದಾಗಿ ಸಾಮಾಜಿಕ-ಆರ್ಥಿಕ ಹೊರೆಯ ತೀವೃ ಏರಿಕೆಯನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸೇರಿದಂತೆ ಸದಸ್ಯ ರಾಷ್ಟ್ರಗಳು ಸೊಳ್ಳೆ ನಿಯಂತ್ರಣದತ್ತ ಗಮನ ಹರಿಸುವಂತೆ ಕೇಳಿದೆ. ಭಾರತದಲ್ಲಿ ಕೇವಲ ಮಲೇರಿಯಾದಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ಹೊರೆಯು ಸುಮಾರು 1.94 ಬಿಲಿಯನ್ ಡಾಲರ್ ಅಂದರೆ 11640 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸುಮಾರು 95% ಜನಸಂಖ್ಯೆಯು ಮಲೇರಿಯಾ-ಸ್ಥಳೀಯ ಪ್ರದೇಶದಲ್ಲಿರುವುದು ಇನ್ನೂ ಚಿಂತೆಗೀಡು ಮಾಡಿದೆ. ಇದರ ಜೊತೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು ವಾರ್ಷಿಕ ಒಂದು ಬಿಲಿಯನ್ ಡಾಲರ್ (ಸುಮಾರು ರೂ.6000 ಕೋಟಿ) ಹೆಚ್ಚುವರಿ ಹೊರೆಯನ್ನು ತಂದೊಡ್ಡಿದೆ. ಈ ಅಂಕಿ ಅಂಶಗಳು ಸೊಳ್ಳೆ ಕಡಿತದ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಬೊಟ್ಟು ಮಾಡುತ್ತವೆ.
ವಿಶ್ವ ಸೊಳ್ಳೆ ದಿನ!
ಮಾರಣಾಂತಿಕ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡುವ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಗೋಸ್ತು 20ರ ದಿನವನ್ನು ವಿಶ್ವ ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ.
ಹತ್ತೊಂಬತ್ತನೇ ಶತಮಾನದವರೆಗೂ ಸೊಳ್ಳೆ ಇಷ್ಟೊಂದು ಅಪಾಯಕಾರಿ ಎಂದು ಯಾರ ಗಮನಕ್ಕೂ ಬರಲಿಲ್ಲ. ಬ್ರಿಟಿಷ್ ವೈದ್ಯ ಪ್ಯಾಟ್ರಿಕ್ ಮ್ಯಾನ್ಸನ್ ಆನೆಕಾಲು ರೋಗಕ್ಕೆ ಸೊಳ್ಳೆ ಮೂಲ ಕಾರಣ ಎಂದು ಕಂಡುಕೊಂಡರು. 1902ರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರೋಸ್ 1897ರಲ್ಲಿ ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣೆ ಸೊಳ್ಳೆಯೇ ಕಂಡು ಹಿಡಿದಿದ್ದು 1897ರ ಅಗಸ್ಟ್ 20ರಂದೇ. ಈ ಸಂಶೋಧನೆಯ ಸ್ಮರಣಾರ್ಥ ಅಗೋಸ್ತು 20ರಂದು ಜಗತ್ತಿನಾಧ್ಯಂತ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತಿದೆ.
ಗಂಡು ಸೊಳ್ಳೆಗಳು ಸಸ್ಯ ಹಾಗೂ ಹೂವಿನ ರಸ ಸೇವನೆಯಿಂದ ತನ್ನ ಜೀವನ ಸಾಗಿಸುತ್ತವೆ. ಸೊಳ್ಳೆಗಳು ಆಹಾರದ ಉದ್ಧೇಶಕ್ಕಾಗಿ ರಕ್ತ ಹೀರುವುದಿಲ್ಲ. ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೋಟೀನ್ ಗಳನ್ನು ಪಡೆಯುದಕ್ಕಾಗಿ ರಕ್ತ ಹೀರುತ್ತದೆ. ಅನಾಫಲೀಸ್ ಹೆಣ್ಣು ಸೊಳ್ಳೆ ತಾನು ಹೀರಿದ ರಕ್ತವನ್ನು ನೀರಿನ ಮೇಲಿಟ್ಟ ತನ್ನ ಮೊಟ್ಟೆಯನ್ನು ಬಲಿಸಲು ಬಳಸುತ್ತದೆ. ಆ ಮರಿ ಸೊಳ್ಳೆಗಳು ನೀರಿನಲ್ಲಿ ಮರಿಯಾಗುತ್ತದೆ. ಆ ಮರಿಸೊಳ್ಳೆಗಳು ನೀರಿನಲ್ಲೇ ಈಜಾಡಿಕೊಂಡು ರೋಗದ ಮೂಲವಾಗುತ್ತವೆ.
ಈಡಿಸ್ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಜ್ವರ ಬರುತ್ತದೆ. ಇದರಿಂದ ಹೊರಬರಲು ಕನಿಷ್ಠ ಮೂರು ವಾರಗಳಾದರೂ ಬೇಕು. ಜ್ವರ ಬಿಟ್ಟರೂ ಮೈ ಕೈ ನೋವು ಸುಸ್ತು ನಮ್ಮನ್ನು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಹತ್ತು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಹೆಚ್ಚಿನ ಸಮಸ್ಯೆಯನ್ನುಂಟು ಮಾಡಬಲ್ಲ ಡೆಂಗ್ಯೂ ಅವರಿಗೆ ಹೊಟ್ಟೆ ನೋವು, ವಾಂತಿ ತಲೆಸುತ್ತು ಮುಂತಾದ ಸಮಸ್ಯೆಗಳನ್ನು ಒಡ್ಡಬಲ್ಲುದು. ಆದುದರಿಂದ ಮಳೆಗಾಲದಲ್ಲಿ ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಡೆಂಗ್ಯೂ ಜ್ವರ ಮಾನವರನ್ನು ಆಕ್ರಮಿಸಿದಾಗ ತಡೆಯಲಾರದ ತಲೆನೋವು, ಜ್ವರ, ಮಾಂಸಖಂಡಗಳ ಮತ್ತು ಸಂದು ನೋವು, ಗಂಟಲ ಗ್ರಂಥಿಗಳು ಉಬ್ಬುವುದು, ತುರಿಕೆ ಮುಂತಾದ ಲಕ್ಷಣಗಳು ಕಂಡುಬರುವುದು. ಮಕ್ಕಳು, ಗರ್ಬಿಣಿಯರು, ಬಾಣಂತಿಯರು ಹಾಗೂ ವಯಸ್ಸಾದವರಿಗೆ ಡೆಂಗ್ಯೂ ಜ್ವರದ ತೊಂದರೆಯುಂಟಾದಾಗ ಅಪಾಯದ ಪ್ರಮಾಣ ಜಾಸ್ತಿ.
ನಾವೇನು ಮಾಡಬಹುದು?
ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತವೆ ಹಾಗೂ ಡೆಂಗ್ಯೂ ಹರಡುವ ಸೊಳ್ಳೆ ಹಗಲಿನಲ್ಲಿ ಕಚ್ಚುತ್ತವೆ. ಮನೆಯೊಳಗೆ ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸುವುದು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಸೊಳ್ಳೆ ನಿವಾರಕ ಮುಲಾಮುಗಳನ್ನು ಬಳಸಿ ಸೊಳ್ಳೆಕಡಿತದಿಂದ ತಪ್ಪಿಸಿಕೊಳ್ಳಬಹುದು. ಮೈಯನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸಿದರೆ ಉತ್ತಮ.
ಸೊಳ್ಳೆಗೆ ವಾಸಸ್ಥಾನ ನಮ್ಮ ಸುತ್ತಮುತ್ತ ಬೇಡ:
ಕಾಯಿಲೆ ಹರಡುವ ಸೊಳ್ಳೆ ಸಂತಾನಾಭಿವೃದ್ದಿಯಾಗುವ ಸ್ಥಳ ನಿಂತ ನೀರು. ಮನೆಯ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಪಾತ್ರೆಯಲ್ಲಿ ತುಂಬಿಟ್ಟ ನೀರನ್ನು ಬದಲಾಯಿಸುತ್ತಿರಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
ನೀರು ನಿಲ್ಲುವಂತಹ ತಗ್ಗು ಪ್ರದೇಶಗಳನ್ನು ಸಮತಟ್ಟುಗೊಳಿಸುವುದು ಹಾಗೂ ಬಾವಿಗೆ ಗಪ್ಪಿ ಮೀನುಗಳನ್ನು ಹಾಕುವುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು.
ಹಳೆಯ ಟೈರುಗಳು, ಎಳೆನೀರಿನ ಚಿಪ್ಪುಗಳಲ್ಲಿ, ತೆರೆದ ಟ್ಯಾಂಕ್ ಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಮನೆಯಲ್ಲಿರುವ ನೀರು ಶೇಖರಣಾ ತೊಟ್ಟಿಗಳು, ಒವರ್ ಹೆಡ್ ಟ್ಯಾಂಕ್, ಬ್ಯಾರಲ್ ಗಳು, ಹೂವಿನ ಕುಂಡಗಳು, ಸುತ್ತಮುತ್ತ ಎಸೆದ ಎಳನೀರಿನÀ ಚಿಪ್ಪುಗಳು, ಪ್ಲಾಸ್ಟಿಕ್ ಲೋಟಗಳು, ಪಿಂಗಾಣಿ ವಸ್ತುಗಳು, ಬಾಟಲ್ ಗಳು, ಟೈರುಗಳು, ಒಡೆದ ಬಕೆಟ್ನಂತಹ ವಸ್ತುಗಳು ಕೃತಕವಾಗಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗುತ್ತವೆ-ಇವುಗಳ ಬಗ್ಗೆ ಎಚ್ಚರವಿರಲಿ. ಏರ್ ಕೂಲರ್ ಗಳು, ಶೀತಲ ಪೆಟ್ಟಿಗೆಗಳ ಕೆಳಭಾಗದಲ್ಲಿ ಶೇಖರಣೆಗೊಂಡ ನೀರಿನಲ್ಲೂ ಸೊಳ್ಳೆಗಳು ಮರಿ ಮಾಡಬಹುದು.
ಸೊಳ್ಳೆಮುಕ್ತ ಪರಿಸರ ನಮ್ಮ ಹೊಣೆ
ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕೊಳೆತ ತರಕಾರಿ ಮತ್ತು ಕಸದ ಬುಟ್ಟಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ನಮ್ಮ ಸುತ್ತಮುತ್ತ ಬೆಳೆದಿರುವ ಗಿಡಗಂಟೆ ಮತ್ತಿತರ ಕಸವನ್ನು ತೆಗೆಸಿ ಸ್ವಚ್ಚವಾಗಿರಿಸುವುದು. ಮನೆಗಳ ಸುತ್ತ ತುಳಸಿ, ಲಾವಂಚ, ಗೊಂಡೆ ಹೂ, ನೆಲನೆಲ್ಲಿ, ಕಹಿಬೇವು ಮತ್ತಿತರ ಗಿಡಗಳನ್ನು ಬೆಳೆಸುವುದರಿಂದ ಗಾಳಿಯೂ ಶುದ್ಧವಾಗಿರುವುದು ಮತ್ತು ಸೊಳ್ಳೆಕಾಟದಿಂದ ಮುಕ್ತಿ ನೀಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿ, ಸೊಳ್ಳೆಗಳು ಬೆಳೆಯದಂತೆ ಮುನ್ನೆಚರಿಕೆ ವಹಿಸಿ ಉತ್ತಮ ಅರೋಗ್ಯಕ್ಕಾಗಿ ಸೊಳ್ಳೆಮುಕ್ತ ಪರಿಸರ ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
ಜಾಗೃತಿ ಅಗತ್ಯ
ಸೊಳ್ಳೆಗಳನ್ನು ನಿಯಂತ್ರಿಸಲು ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು ಎಂಬ ವಿವೇಕ ನಮ್ಮದಾಗಲಿ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾದಿಂದ ಪಾರಾಗಲು ಇರುವ ಏಕೈಕ ಮಾರ್ಗೋಪಾಯ ಸೊಳ್ಳೆಗಳ ನಿಯಂತ್ರಣ ಮತ್ತು ನಿವಾರಣೆ. ಸೊಳ್ಳೆ ಸಣ್ಣದು, ಕಡಿತ ಸಣ್ಣದು ಎಂಬ ಉದಾಸೀನ ಭಾವ ಸಲ್ಲದು.
ಮನುಕುಲದ ಅಭಿವೃದ್ಧಿಗೆ ಮಾರಕವಾದ ಸೊಳ್ಳೆ
ಅಭಿವೃದ್ಧಿಶೀಲ ದೇಶಗಳ ಅಭಿವೃದ್ಧಿಗೆ ಸಾಂಕ್ರಾಮಿಕ ರೋಗಗಳು ಮಾರಕವಾಗಿ ಪರಿಣಮಿಸಿವೆ. ಮನೆಯ ಹೊರಗೆ ಸೊಳ್ಳೆಗಳ ಉತ್ಪಾದನೆ ಮಾಡಿ, ನಂತರ ಮನೆಯೊಳಗೆ ಅವುಗಳ ವಿರುದ್ಧ ಸೆಣಸಾಡುವುದೇ ನಮ್ಮ ಸಮಸ್ಯೆಯಾಗಿದೆ. ಖಾಯಿಲೆಯ ಮೂಲವಾದ ಸೊಳ್ಳೆಗಳ ನಿಯಂತ್ರಣವನ್ನು ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ, ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಮಾಡುವುದು ಇಂದಿನ ಅಗತ್ಯ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ