ನಿಟ್ಟೆ: ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಪ್ರಾತಿನಿದ್ಯ ಅಗತ್ಯ. ಈ ಸಲುವಾಗಿ ಕೆಲಸಮಾಡಲು ಮಾನವನಲ್ಲಿ ಆರೋಗ್ಯಕರ ಮನಸ್ಸಿನ ಅಗತ್ಯತೆಯೂ ಇದೆ. ವಿವಿಧ ಬಗೆಯ ಫಲಾನುಪೇಕ್ಷೆಗಳಿಲ್ಲದೆ ಸೇವಾ ಮನೋಭಾವದಿಂದ ರೋಗಿಗಳನ್ನು ಆರೈಕೆ ಮಾಡುವುದು ನಮ್ಮನ್ನು ನಾವು ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡಂತೆ ಎಂದು ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ, ನಿಟ್ಟೆ ಉಷಾ ನರ್ಸಿಂಗ್ ಕಾಲೇಜು, ನಿಟ್ಟೆ ಉನಿವರ್ಸಿಟಿ- ಮೆಡಿಸಿಮ್ ಮತ್ತು ಕ್ಷೇಮ ಪಬ್ಲಿಕ್ ಹೆಲ್ತ್ ವಿಭಾಗದ ಜಂಟಿ ಆಶ್ರಯದಲ್ಲಿ ನಿಟ್ಟೆಯಲ್ಲಿ ಆಯೋಜಿಸಲಾದ ನಿಟ್ಟೆ ಸ್ಮಾರ್ಟ್ ಹೆಲ್ತ್ ವಿಲೇಜ್ ಯೋಜನೆಯ 'ಆಪತ್ಬಂಧು' ಮತ್ತು ನಿಟ್ಟೆ ಕೋವಿಡ್-19 ಹೋಮ್ ಐಸೋಲೇಶನ್ ಆ್ಯಪ್ 'ಕೋವಿಸ್ವಾಸ್'ನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರಿದ ತಂತ್ರಜ್ಞಾನ, ಆಡಳಿತ ವಿಜ್ಞಾನ ಹಾಗೂ ವಿವಿಧ ವಿಷಯಗಳ ಸಹಕಾರದೊಂದಿಗೆ ಆರೋಗ್ಯ ಕ್ಷೇತ್ರವನ್ನು ಪುಷ್ಕಳವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲದ್ದಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದ ಇನ್ನೋರ್ವ ಅತಿಥಿ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಇಂದಿನ ರೋಗರುಜಿನಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿನೀಡಿ, ಹೆಚ್ಚಿನ ಆರೋಗ್ಯ ಸಂಬಂಧಿ ಸಮಸ್ಯೆಗಳು ಮಾನವನ ನಿರ್ಲಕ್ಷ್ಯ, ಅಸಡ್ಡೆ ಹಾಗೂ ಋಣಾತ್ಮಕ ಚಿಂತನೆಗಳಿಂದ ಸಂಭವಿಸುತ್ತದೆ ಎಂದರು.
ನಿಟ್ಟೆ ಉಷಾ ನರ್ಸಿಂಗ್ ಕಾಲೇಜು ಮತ್ತು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಮೆಡಿಸಿಮ್ ಮತ್ತು ಪಬ್ಲಿಕ್ ಹೆಲ್ತ್ ವಿಭಾಗ ಹಮ್ಮಿಕೊಂಡ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಸ್ಥಳೀಯ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಲಾಯಿತು.
ಕುಲಾಧಿಪತಿ ವಿನಯ ಹೆಗ್ಡೆ ತರಬೇತಿ ಕಿಟ್ಗಳನ್ನು ವಿತರಿಸಿದರು. 'ಕೋವಿಸ್ವಾಸ್' ಆ್ಯಪ್ ಬಗ್ಗೆ ಮತ್ತು ಅದರ ಕಾರ್ಯಾನಿರ್ವಹಣೆಯ ಬಗೆಗೆ ಪಬ್ಲಿಕ್ ಹೆಲ್ತ್ ವಿಭಾಗದ ಮುಖ್ಯಸ್ಥರು ವಿವರಿಸಿದರು. 'ಆಪತ್ಬಂಧು' ಆ್ಯಪ್ನ ನಿರ್ವಹಣೆಯ ಬಗೆಗೆ ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಡಾ.ಫತಿಮಾ ಡಿಸಿಲ್ವ ಮಾಹಿತಿ ಹಂಚಿಕೊಂಡರು. ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಹಾಗೂ ನಿಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ನಿರ್ದೇಶಕ ಡಾ.ಶಂಕರನ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನಿಟ್ಟೆಯ ಅಟಲ್ ಇನ್ಕ್ಯೂಬೇಶನ್ ಕೇಂದ್ರದ ಸಿ.ಇ.ಒ ಡಾ.ಎ.ಪಿ ಆಚಾರ್ ಅತಿಥಿಗಳನ್ನು ಪರಿಚಯಿಸಿ ಪ್ರಸ್ತಾವನೆಗೈದರು. ನಿಟ್ಟೆ ಉಷಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅನಸ್ತೇಶಿಯಾ ವಿಭಾಗದ ಮುಖ್ಯಸ್ಥ ಡಾ.ಶ್ರೀಪಾದ ಮೆಹಂದಳೆ ವಂದಿಸಿದರು. ನಿಟ್ಟೆ ಉದ್ಯಮಾಡಳಿತ ಕಾಲೇಜಿನ ಪ್ರಾಧ್ಯಾಪಕ ಡಾ.ಸುಧೀರ್ ರಾಜ್ ಕೆ ಕಾರ್ಯಕ್ರಮ ನಿರ್ವಹಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಸ್ಥಳೀಯ ಉತ್ಸಾಹಿ ಯುವಕ-ಯುವತಿಯರು ಭಾಗವಹಿಸಿ ತರಬೇತಿ ಪಡೆದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ