ನಾವು ನಾಲ್ಕು ಜನ ಕೃಷಿಕರು ಸೇರಿದರೆ ಅಲ್ಲಿ ಬರುವ ಮಾಮೂಲು ಮಾತು "ಅಯ್ಯೋ" ಅಡಿಕೆ ಇಳುವರಿಯೇ ಇಲ್ಲ. ನಳ್ಳಿ ಪೂರ ಉದುರಿ ಹೋಯಿತು. ಅಕಾಲದ ಮಳೆ ಬಂತು, ಸಿಂಗಾರ ಒಣಗಿ ಹೋಯಿತು. ಈ ನಮೂನೆ ಎಳೆ ಅಡಿಕೆ ಉದುರಿದಲ್ಲಿ ಕೃಷಿಕನಿಗೆ ಕೃಷಿಯಲ್ಲಿ ಆಸಕ್ತಿ ಬರಲು ಸಾಧ್ಯವೇ? ಹೀಗೆ ಕಳೆದುಹೋದ ಇಳುವರಿಯ ಕುರಿತು ಮಾತುಕತೆ ಮುಂದುವರಿಯುತ್ತದೆ. ನಾವೇಕೆ ಆಶಾವಾದಿಯಾಗಿ ಯೋಚನೆ ಮಾಡುವುದಿಲ್ಲ ಎಂದು ನನಗೆ ಒಮ್ಮೊಮ್ಮೆ ಕಾಣುವುದು ಉಂಟು. ಗೋ ಆಧಾರಿತ ಕೃಷಿ ಕೈಗೊಂಡಲ್ಲಿ ಈ ಸಮಸ್ಯೆಗಳಿಗೆಲ್ಲ ಪರಿಹಾರ ಉಂಟು.
ನಮ್ಮ ಹಿರಿಯರ ಮಾತು ನೆನಪಿಗೆ ಬರುತ್ತದೆ. ಸಹಜ ಕೃಷಿ ನಡೆಸುತ್ತಿರುವಾಗ 1 ಎಕರೆಯಲ್ಲಿ ಸುಮಾರು 5 ಕ್ವಿಂಟಾಲ್ನಷ್ಟು ಇಳುವರಿ ಇತ್ತಂತೆ. ನಂತರ ಗದ್ದೆಯ ಮೇಲಿನ ಮೋಹ ಕಡಿಮೆಯಾಗಿ ತೋಟಕ್ಕೆ ಮಹತ್ವ ಕೊಟ್ಟ ಮೇಲೆ ಅಡಿಕೆ ತೋಟದಲ್ಲಿ ಹಳೆಯ ತೋಟಗಳಲ್ಲಿ 800 ಕೆಜಿಯಷ್ಟು ಇಳುವರಿ ಬರುತ್ತಿತಂತೆ. ಗದ್ದೆಗಳಲ್ಲಿ ಅಡಿಕೆ ಗಿಡವನ್ನು ನೆಟ್ಟ ಹೊಸ ತೋಟಗಳಲ್ಲಿ 10 ಕ್ವಿಂಟಾಲು ಸರಾಸರಿ ಇಳುವರಿ ಬರುತ್ತಿತ್ತು. ಅಪರೂಪಕ್ಕೆ ಕೆಲವರಿಗೆ 12 ಕ್ವಿಂಟಲ್ ನಷ್ಟು ಇಳುವರಿ ಬಂದಲ್ಲಿ ಅಂತವರಿಗೆ ಸಮಾಜದಲ್ಲಿ ವಿಶೇಷ ಮನ್ನಣೆ ಇತ್ತು.
ಯಾವಾಗ ಇಳುವರಿಯಲ್ಲಿ ನಮಗೆ ಅತೃಪ್ತಿ ಕಾಣಲು ಹೊರಟಿತೋ, ರಾಸಾಯನಿಕ ಗೊಬ್ಬರ ಬಳಕೆಯಿಂದ ಇದರಿಂದ ಹೆಚ್ಚಿನ ಇಳುವರಿಯ ನಿರೀಕ್ಷೆ ಹತ್ತಿತೋ, ಅಲ್ಲಿಂದ ಸುರುವಾಯಿತು ಅತಿಯಾದ ನಳ್ಳಿ ಉದುರುವ ಸಮಸ್ಯೆ. ಗಿಡಗಳ ಸಾಮರ್ಥ್ಯ ಮೀರಿದ ಇಳುವರಿ ಬಂದಾಗ ಹೆಚ್ಚಿನದನ್ನು ಉದುರಿಸಿಕೊಂಡು ತನ್ನ ಸಾಮರ್ಥ್ಯ ಇಷ್ಟೇ ಎಂಬುದನ್ನು ತೋರಿಸಿಕೊಡುತ್ತದೆ. (10ಟನ್ ಸಾಮರ್ಥ್ಯದ ವಾಹನಕ್ಕೆ 15ಟನ್ ಹಾಕಿ ಎಳೆಸಿದಂತೆ. 25ಕೆಜಿಯನ್ನು ಎತ್ತಿ ಹೊರುವ ಮನುಷ್ಯನಿಗೆ 50ಕೆಜಿಯನ್ನು ಹೊರಿಸಿದಂತೆ). ನಾವು ಯೋಚನೆ ಮಾಡಬೇಕಾದದ್ದು ಮರದಲ್ಲಿ ಉಳಿದ ಇಳುವರಿ ಎಷ್ಟು ಎಂಬುದೇ ವಿನಹ: ಬಿದ್ದುಹೋದುದಕ್ಕಲ್ಲ. ಎಷ್ಟೇ ಉದುರಿ ಹೋದರೂ ಹಿರಿಯರು ಅನುಭವದಿಂದ ಹೇಳಿದ ಮಾತಿನಷ್ಟು ಉಳಿದೇ ಉಳಿಯುತ್ತದೆ.(ಮಹಾಳಿಯನ್ನು ಹೊರತುಪಡಿಸಿ)
ಅಡಿಕೆ ತೋಟಗಳಲ್ಲಿ ಐದು ವರ್ಷದ ಗಿಡಗಳಲ್ಲಿ ಇಳುವರಿ ಪ್ರಾರಂಭವಾಗಿ 8 ವರ್ಷದಿಂದ 25 ವರ್ಷಗಳವರೆಗೆ ಅವು ತನ್ನ ಪೂರ್ಣ ಸಾಮರ್ಥ್ಯವನ್ನು ಪ್ರಕಟಿಸುತ್ತವೆ. ನಂತರ 40 ವರ್ಷದ ಮನುಷ್ಯನ ತೆರದಿ ತನ್ನ ಮಿತವಾದ ಸಾಮರ್ಥ್ಯದಲ್ಲಿ ಇಳುವರಿ ಕೊಡುತ್ತದೆ. ಅತಿಯಾದ ಗೊಬ್ಬರವನ್ನು ಇತ್ತು ಮೂರು ವರ್ಷಕ್ಕೆ ಇಳುವರಿಯನ್ನು ಪ್ರಾರಂಭಿಸ ಹೊರಟರೆ ಹದಿಹರೆಯಕ್ಕೆ ಋತುಮತಿ ಯಾಗಬೇಕಾದ ಸ್ತ್ರೀ 9 ವರ್ಷಕ್ಕೆ ಋತುಮತಿ ಆದಂತೆ.
40 ವರ್ಷಕ್ಕೆ ಹಿಂದೆ ನಾನೊಮ್ಮೆ 20 ತೆಂಗಿನ ಗಿಡಗಳನ್ನು ನೆಟ್ಟು ರಾಸಾಯನಿಕ ಗೊಬ್ಬರಗಳನ್ನು ಹಾಕಿ ನಾಲ್ಕು ವರ್ಷಕ್ಕೆ ಇಳುವರಿಯನ್ನು ಪ್ರಾರಂಭಿಸುವಂತೆ ಮಾಡಿದೆ. ಗೊನೆ ತುಂಬಿದ ಎಳನೀರನ್ನು ನೋಡಿ ಸಂತೋಷಪಟ್ಟದ್ದು ಹಲವು ದಿನ ಉಳಿಯಲಿಲ್ಲ. ಕಾಯಿ ದೊಡ್ಡದಾದಂತೆ ಗೊನೆ ಮುರಿದು ಹೋಗುತ್ತಿತ್ತು. ಹಗ್ಗ ಹಾಕಿ ಕಟ್ಟಿ ಕೆಲವನ್ನು ಉಳಿಸಿಕೊಂಡರೂ ಮುರಿದು ಹೋದುದು ಅನೇಕ. ಅದರ ಸ್ವಸಾಮರ್ಥ್ಯ ಬಂದ ನಂತರ ಸಮಸ್ಯೆಯಿಂದ ಬಿಡುಗಡೆ. ಸಮಸ್ಯೆಗಳಿಗೆಲ್ಲ ಕೃತಕ ಪರಿಹಾರ ಹುಡುಕುತ್ತಾ ಹೋದಲ್ಲಿ ನೆಮ್ಮದಿಯ ರಾತ್ರಿ ಸಿಗುವುದು ಕಷ್ಟ. 100 ರೂಪಾಯಿ ಖರ್ಚು ಮಾಡಿ 110 ರೂಪಾಯಿ ಆದಾಯಕ್ಕಿಂತ 50ರೂ ಖರ್ಚುಮಾಡಿ 70 ರೂಪಾಯಿ ಆದಾಯ ನನಗೆ ಇಷ್ಟ. ಗೋ ಆಧಾರಿತ ಕೃಷಿಯ ಮೂಲಕ ನೆಮ್ಮದಿಯನ್ನು ಕಾಣೋಣ ಎಂದು ಆಶಿಸುತ್ತೇನೆ.
-ಎ.ಪಿ. ಸದಾಶಿವ, ಮರಿಕೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ