ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಕಾರಣಗಳಿಂದ ಒತ್ತಡವನ್ನು ಅನುಭವಿಸುತ್ತಿದ್ದಾರೆ ಯಾ ಬಳಲುತ್ತಿದ್ದಾರೆ. ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಒಬ್ಬ ವ್ಯಕ್ತಿಗೆ ಬಹಳಷ್ಟು ಕೆಲಸ ಕಾರ್ಯಗಳು, ಜವಾಬ್ದಾರಿಗಳು ಇವೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಣೆ ಮಾಡಲು ಆಗುವುದಿಲ್ಲ.
ಸುತ್ತಮುತ್ತಲಿನ ಪರಿಸರ ಮತ್ತು ಪುರುಸೊತ್ತು ಇಲ್ಲದ ಆಧುನಿಕ ನಗರ ಜೀವನ ಶೈಲಿಯಿಂದಾಗಿ ಸಾಕಷ್ಟು ಒತ್ತಡಗಳಿಗೆ ಗುರಿಯಾಗುತ್ತಾರೆ. ಆರೋಗ್ಯವಂತರಾಗಿರಬೇಕೆಂದು ಎಲ್ಲರೂ ಇಚ್ಚಿಸುತ್ತಾರೆ ಆದರೆ, ಅದರಲ್ಲಿ ಎಲ್ಲರೂ ಸಫಲರಾಗುವುದಿಲ್ಲ. ವೈಯಕ್ತಿಕ ಸಂಬಂಧಗಳಲ್ಲಿನ ಏರುಪೇರು, ಕಿರಿಕಿರಿ ಉಂಟಾಗುವಿಕೆ, ಸುತ್ತಮುತ್ತಲಿನ ಪರಿಸರ ಮಾಲಿನ್ಯ, ಜೀವನದಲ್ಲಿ ಪದೇಪದೇ ಸೋಲನ್ನು ಅನುಭವಿಸಿದಾಗ ಬರುವ ಹತಾಶೆಯ ಮನೊಭಾವ... ಇತ್ಯಾದಿ.
ಆತಂಕವು ಸಾಮಾನ್ಯ ಭಾವನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಆತಂಕದ ಕಾಯಿಲೆಗಳನ್ನು ಅನುಭವಿಸುವ ಜನರಿಗೆ ಯೋಗವು ಪರಿಣಾಮಕಾರಿ ಸಹಾಯಕ ಚಿಕಿತ್ಸೆಯಾಗಿದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಆತಂಕಕ್ಕೆ ಬೆಕ್ಕು ಭಂಗಿ, ಹಸು ಭಂಗಿ, ಒಂಟೆ ಭಂಗಿ, ಬಿಲ್ಲು ಭಂಗಿ, ಮೊಲ ಭಂಗಿ, ಮೊಸಳೆ ಭಂಗಿ, ಹಾಗೂ ಶವದ ಭಂಗಿ ಸಹಕಾರಿಯಾಗುತ್ತದೆ. ಹಾಗೂ ದಿನಕ್ಕೆ ಎರಡು ಬಾರಿ ಧ್ಯಾನ ಮತ್ತು ಮುಂಜಾನೆಯ ಹದಿನೈದು ನಿಮಿಷದ ಪ್ರಾಣಾಯಾಮವು ದೇಹ ಮತ್ತು ಮನಸ್ಸು ಶಾಂತ ಮತ್ತು ನಿರಾಳತೆಯನ್ನು ಪಡೆಯಲು ಅನುವು ಮಾಡಿ ಕೊಡುತ್ತದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಮನಸ್ಸಿನ ನಿರ್ಮಲತೆಗೆ, ಏಕಾಗ್ರತೆಗೆ, ಆಳ ವಿಶ್ರ್ರಾಂತಿಗೆ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಧ್ಯಾನ ಎಲ್ಲ ಸಮಸ್ಯೆಗಳ ನಿವಾರಣೆಗೆ ಬಹಳಷ್ಟು ಸಹಕಾರಿ. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವಂತೆ ಮನಸ್ಸಿನ ಆರೋಗ್ಯಕ್ಕೂ ಒತ್ತು ಕೊಡಬೇಕು.
ಆತಂಕ ನಿವಾರಣೆಗೆ ಕನಿಷ್ಠ ಮೂರು ತಿಂಗಳು ಗುರುಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ.
ಪದೇ ಪದೇ ಒತ್ತಡದ ಕೆಲಸಗಳಿಂದ ಬರುವ ಸಾಮಾನ್ಯ ಪರಿಣಾಮಗಳು (ದೇಹಕ್ಕೂ, ಮನಸ್ಸಿಗೂ) ದೇಹದ ಮೇಲೆ ಒತ್ತಡಗಳು:-
- ಅನಾರೋಗ್ಯದ ತಲೆನೋವು
- ಸ್ನಾಯು ಸೆಳೆತದ ನೋವು
- ಎದೆನೋವು, ಡವಡವ ಎನ್ನುವ ಅನುಭವ
- ಆಯಾಸ, ತೀರ ಬಳಲಿಕೆ
- ಲೈಂಗಿಕ ನಿರಾಸಕ್ತಿ
- ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು
- ನಿದ್ರೆಯ ಸಮಸ್ಯೆಗಳು.
ಸಾಮಾನ್ಯವಾಗಿ ಮನಸ್ಥಿತಿ ಮೇಲೆ ಉಂಟಾಗುವ ಪರಿಣಾಮಗಳು:
- ಆತಂಕ ಉಂಟಾಗುವುದು.
- ಚಡಪಡಿಕೆಯಾಗುವುದು, ಗಡಿಬಿಡಿಯಾಗುವುದು.
- ಗಮನದ ಕೊರತೆಯಾಗುವುದು
- ಕೋಪ ಉಂಟಾಗುವುದು ಹಾಗೂ ಸಿಡುಕುತನದಲ್ಲಿರುವುದು.
- ದುಃಖ ಯಾ ಖಿನ್ನತೆ ಉಂಟಾಗುವುದು.
ನಡವಳಿಕೆ ಮೇಲೆ ಒತ್ತಡದ ಸಾಮಾನ್ಯ ಪರಿಣಾಮಗಳು:
- ಆಹಾರದ ಸೇವನೆ ಕ್ರಮದಲ್ಲಿ ವ್ಯತ್ಯಾಸ.
- ಆಗಾಗ ಕೆಲವೊಮ್ಮೆ ಬರುವ ಸಿಟ್ಟು
- ಮದ್ಯಪಾನ ಯಾ ಔಷಧ ಸೇವೆನೆ ಮಾಡುವುದು
- ತಂಬಾಕು ಬಳಕೆ
- ದೈಹಿಕ ಚಟುವಟಿಕೆ ಸಮರ್ಪಕಾಗಿ ಮಾಡದೆ ಇರುವುದು.
- ಸಾಮಾಜಿಕವಾಗಿ ಹಿಂದುಳಿವುದು, ಬೆರೆಯುವುದು ಕಡಿಮೆ.
- ವ್ಯಾಯಾಮ ಇಲ್ಲದೆ ಇರುವುದು.
ಈ ಎಲ್ಲಾ ಸಮಸ್ಯೆಗಳಿಗೆ ನಮ್ಮ ಭಾರತೀಯ ಕಲೆಯಾದ “ಯೋಗ”ವನ್ನು ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳಷ್ಟು ಸಹಕಾರಿಯಾಗಬಹುದು. ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಮನಸನ್ನು ನಿಯಂತ್ರಣಗೊಳಿಸುವ ವಿಧಾನ ಗೊತ್ತಿದ್ದರೆ ಸಮರ್ಪಕವಾಗಿ ತನ್ನ ಕೆಲಸ ಕಾರ್ಯಗಳನ್ನು ಹಾಯಾಗಿ ಆರಾಮವಾಗಿ ನಿರ್ವಹಿಸಬಹುದು. ಇಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಯೋಗವನ್ನು ವ್ಯಕ್ತಿಯು ತನ್ನ ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ನೆಮ್ಮದಿಯ ಬಾಳುವೆಗೆ ಸೋಪಾನವಾಗುವುದು. ಮಾನಸಿಕ ಹಾಗೂ ಶಾರೀರಿಕ ನೆಮ್ಮದಿಗೆ ಪ್ರತೀ ದಿನ ಅರ್ಧ ಗಂಟೆಯಿಂದ ಒಂದು ಗಂಟೆಯ ಯೋಗ ಮಾಡುವುದು ಅತ್ಯಾವಶ್ಯಕ.
ಈ ಒತ್ತಡದ ನಿಯಂತ್ರಣಕ್ಕೆ ಯೋಗ ಮುದ್ರೆಗಳು ವರ್ಣಚಿಕಿತ್ಸೆ ಬಹಳಷ್ಟು ಸಹಕಾರಿಯಾಗುತ್ತದೆ. ಅದರಲ್ಲು ಪ್ರಾಣಯಾಮ ಧ್ಯಾನ ಚಕ್ರಧ್ಯಾನ, ಸಹಕಾರಿಯಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವ ಮುಂಚೆ ಸಮರ್ಪಕವಾದ ಮಾಹಿತಿಯನ್ನು ಪಡೆದು ಗುರುಮುಖೇನ ಕಲಿತನಿತ್ಯ ನಿರಂತರ ಅಭ್ಯಾಸ ಮಾಡಿ.
ಒತ್ತಡದ ನಿವಾರಣೆಗೆ ಇರುವಂತಹ ಯೋಗದ ಸಂಕ್ಷಿಪ್ತ ಪಟ್ಟಿ:
• ಪದೇ ಪದೇ ಒತ್ತಡಕ್ಕೊಳಗಾಗುವವರು ಆರಂಭದಲ್ಲಿ ಶವಾಸನದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಬೇಕು.(ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ)
• ಇಷ್ಟದೇವರನ್ನು ನೆನೆಸಿಕೊಂಡು ಆರು ಬಾರಿ ದೀರ್ಘ ಉಸಿರಾಟ ನಡೆಸಬೇಕು.
• ಸ್ವಲ್ಪ ಹೊತ್ತು ನೆಟ್ಟಗೆ ನೇರವಾಗಿ ಕುಳಿತುಕೊಂಡು ಧ್ಯಾನ ಮಾಡಬೇಕು.
• ಸರಳ ವ್ಯಾಯಾಮಗಳನ್ನು ಅಥವಾ ನಡಿಗೆಯನ್ನು ಮಾಡಬೇಕು.
ಅಭ್ಯಾಸ ಮಾಡಬೇಕಾದ ಯೋಗಾಸನಗಳ ಸಂಕ್ಷಿಪ್ತ ಪಟ್ಟಿ ಹೀಗಿದೆ:
1.ಅರ್ಧ ಚಕ್ರಾಸನ 2.ಪಾದಹಸ್ತಾಸನ 3.ಪಾರ್ಶ್ವೋತ್ತಾನಾಸನ
4.ಪರ್ವತಾಸನ 5.ವಜ್ರಾಸನ 6. ಶಶಾಂಕಾಸನ
7.ಅರ್ಧ ಉಷ್ಟ್ರಾಸನ 8.ಸರ್ವಾಂಗಸನ 9.ಹಲಾಸನ
10. ಶೀರ್ಷಾಸನ (ಸಾಧ್ಯಾವಾಗುವವರು) 11. ಅಧೋಮುಖ ಶ್ವಾನಾಸನ 12. ಊರ್ಧ್ವಮುಖ ಶ್ವಾನಾಸನ
ಕೊನೆಯಲ್ಲಿ ಶವಾಸನ 7 ರಿಂದ 10 ನಿಮಿಷ
ನಾಡಿಶುದ್ಧಿ ಪ್ರಾಣಾಯಾಮ ಮತ್ತು ಧ್ಯಾನ 5 ರಿಂದ 10 ನಿಮಿಷ.
ಒತ್ತಡ ನಿಯಂತ್ರಣಕ್ಕೆ ಮುದ್ರೆಗಳಲ್ಲಿ ಪ್ರಮುಖವಾಗಿ ಪ್ರಾಣಮುದ್ರೆ ಚಿನ್ಮುದ್ರೆ, ಕ್ಷೇಪನಾ ಮುದ್ರೆ ಹಕಿನಿ ಮುದ್ರೆ ಸಹಕಾರಿಯಾಗುತ್ತದೆ.
ಇದರೊಂದಿಗೆ ವ್ಯಕ್ತಿಯು ದೇಹಕ್ಕೆ ಒಳ್ಳೆಯ ಆಹಾರ ನೀಡುವಂತೆಯೇ ಮನಸ್ಸಿಗೆ ಒಳ್ಳೆಯ ಆಹಾರ ನೀಡಬೇಕು.
ಮೇಲೆ ತಿಳಿಸಿದ ಯೋಗವನ್ನು ಶಿಸ್ತು ಬದ್ಧವಾಗಿ, ಕ್ರಮವತ್ತಾಗಿ ಗುರುಮುಖೇನ ಕಲಿತು ಅಭ್ಯಾಸ ಮಾಡಿದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಪಡೆದು ನೆಮ್ಮದಿಯ ಜೀವನವನ್ನು ಸಾಗಿಸಬಹುದು.
ಒತ್ತಡ ನಿವಾರಣೆಗೆ ಯೋಗವೊಂದಿಗೆ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಉದಾ: ತೋಟಗಾರಿಕೆ, ಕರಕುಶಲ, ಸಾಕುಪ್ರಾಣಿಗಳ ಆರೈಕೆ, ಸ್ನೇಹಿತರೊಂದಿಗೆ ಬೆರೆಯುವುದು ಪಾರ್ಕಿಗೆ ಹೋಗುವುದು, ಸಂಗೀತ ಹಾಡು ಕೇಳುವುದು ಇತ್ಯಾದಿಗಳು. ಎಲ್ಲರೊಂದಿಗೆ ಬೆರೆಯಿರಿ, ಮಾತಾಡಿ, ಸಂತೋಷದಿಂದಿರಿ. ಜೀವನದ ಸುಖವನ್ನು ಅನುಭವಿಸಿ, ಆನಂದಿಸಿ. ದೇವರಿಗೆ ಪ್ರಾರ್ಥನೆ ಮಾಡಿ, ಎಲ್ಲರಿಗೂ ಒಳಿತಾಗಲಿ ಶುಭವಾಗಲಿ ಎಂದು ಬೇಡಿ.
ಯೋಗ ಎಂದರೇನು? ಪತಂಜಲಿ ಯೋಗ ಸೂತ್ರದಲ್ಲಿ ಯೋಗ: ‘ಚಿತ್ತವೃತ್ತಿ ನಿರೋಧಃ’ ಎಂದು ತಿಳಿಸುತ್ತದೆ. ಚಿತ್ತದ ವೃತ್ತಿಗಳನ್ನು ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದು ಯೋಗ. ಋಷಿ ಪತಂಜಲಿಯವರು ಯೋಗದಲ್ಲಿ ಎಂಟು ಮೆಟ್ಟಿಲುಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.
‘ಯೋಗರತ್ನ’ ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು
ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್
ಮಂಗಳೂರು -575 008
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ