ಪ್ರಕೃತಿಯ ಪ್ರತಿಯೊಂದು ಜೀವಿಗಳಲ್ಲೂ ದೇವರನ್ನು ಕಾಣುತ್ತಿದ್ದ ನಮ್ಮ ಪೂರ್ವಿಕರು ಹಲವಾರು ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಶ್ರಾವಣ ಮಾಸ ಬಂತು ಎಂದರೆ ಹಬ್ಬಗಳ ಸಾಲು ಸಾಲು ಆರಂಭ. ಅದರಲ್ಲಿ ಮೊದಲನೆಯದು ನಾಗರ ಪಂಚಮಿ. ಹೆಸರೇ ಸೂಚಿಸುವಂತೆ ಸರ್ಪಗಳು ಎಂದರೆ ದೇವರ ಅಂಶ ಎಂದು ನಂಬುವ ನಮ್ಮ ಸಂಪ್ರದಾಯದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.
ಕುಟುಂಬದವರೆಲ್ಲ ಒಂದಾಗಿ ಸೇರಿ ನಾಗನ ಕಲ್ಲಿಗೆ ಹಾಲನೆರೆಯುವ ಪದ್ದತಿಯಿದೆ. ಅಲ್ಲಲ್ಲಿ ತಂಬಿಲ ಮಾಡಿ ನಾಗನ ಸೇವೆಯನ್ನು ಭಕ್ತಿಭಾವದಿಂದ ಮಾಡಿ ಎಲ್ಲರ ಒಳಿತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಮನೆಗಳಲ್ಲಿ ಅರಶಿಣ ಕಡುಬು, ಕಜ್ಜಾಯಗಳನ್ನು ಮಾಡಿ ದೇವರಿಗೆ ನೈವೇದ್ಯವನ್ನು ಮಾಡಿ ಮನೆಯವರೆಲ್ಲರೂ ಸಂಭ್ರಮಿಸುತ್ತಾರೆ.
ನಾಗನನ್ನು ಜಲದಧಿದೇವತೆ ಎಂದು ನಂಬಿಕೆಯನ್ನು ಬೆಳೆಸಿಕೊಂಡ ಭಕ್ತರು ತಮ್ಮ ಜಮೀನಿನಲ್ಲಿ ನೀರಿನ ಕ್ಷಾಮ ಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ.
ಪ್ರತಿಯೊಂದು ಹಬ್ಬಗಳೂ ಜನರನ್ನು ಒಂದುಗೂಡಿಸಿ ಸಾಮರಸ್ಯಕ್ಕೆ ನಾಂದಿ ಹಾಡುತ್ತದೆ. ಪ್ರಕೃತಿಯ ಮೇಲಿರುವ ಭಯ ಭಕ್ತಿಯಿಂದಾಗಿ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವು ನಡೆಯುತ್ತದೆ. ಎಲ್ಲರಿಗೂ ಮಾನಸಿಕ ದೈಹಿಕ ಆರೋಗ್ಯವನ್ನು ಕರುಣಿಸಿ ಸಕಲರಿಗೂ ನಾಗರ ಪಂಚಮಿಯು ಶುಭವನ್ನು ತರಲಿ ಎಂದು ಹಾರೈಸುತ್ತೇನೆ.
-ಗಾಯತ್ರಿ ಪಳ್ಳತ್ತಡ್ಕ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ