ಬೆಳಗೊಸಗೆ ದೊರೆವಾಗ ಕಾರಿರುಳು ಕಳೆಯುವುದು
ಒಳಗೊಳಗೆ ಸಂತಸವು ಮೂಡುವುದು ಮನದಿ |
ಕೊಳದಲ್ಲಿ ತಾವರೆಯು ಅರಳುತಿರೆ ನಸುನಗುತ
ಇಳೆಯಲ್ಲಿ ಪರಿತೋಷ - ಪುಟ್ಟಕಂದ || ೧ ||
ಥಳಥಳಿಪ ದಿನಕರನು ಆಗಸದಿ ಹೊಳೆಯುತಿರೆ
ಬೆಳಗೊಸಗೆ ವರದೊರೆತ ಸಂತಸವೆ ಮಿಗಿಲು |
ಕಳೆಯುವರು ಬಳಲಿಕೆಯ ವೀರಯೋಧರು ಧುರದ
ಕೊಳುಗುಳದ ರಂಗದಲಿ - ಪುಟ್ಟಕಂದ || ೨ ||
ಬೆಳಗೊಸಗೆ ಪಡೆಯುವನು ಬಾಹುಬಲಿ ಬೆಟ್ಟದಲಿ
ಬೆಳುಗೊಳದ ಸಹಜ ಸೌಂದರ್ಯವೀಕ್ಷಿಸುತ |
ತಿಳಿಗೊಳದ ಸಲಿಲದಲಿ ಪಡಿನೆರಳು ಮಾರ್ಪೊಳೆಯೆ
ತಳಿರು ತೋರಣವಕ್ಕು - ಪುಟ್ಟಕಂದ || ೩ ||
ಮೂಡಣದಿ ರವಿಯುದಿಸಿ ನೀಡುವನು ಬೆಳಗೊಸಗೆ
ನಾಡಿನಲಿ ಸುಖಶಾಂತಿ ಸುಗ್ಗಿಯನು ಬಯಸಿ |
ಕಾಡಿನಲಿ ಕಿರಣಗಳ ಕಾಂತಿಯನು ಬೀರುತಲಿ
ತೀಡುವನು ವಸುಮತಿಯ - ಪುಟ್ಟಕಂದ || ೪ ||
ಪ್ರಕೃತಿಯು ನೀಡುತಿಹ ಬೆಳಗೊಸಗೆ ವರವನ್ನು
ಸುಕೃತವೆಂದು ತಿಳಿದವಗೆಲ್ಲು ಸೋಲಿರದು |
ವಿಕೃತವಹ ಚಿಂತನೆಯ ಮಾಡಿದರೆ ಗತಿಯಿರದು
ಕುಕೃತಿಗಳ ಮರೆತುಬಿಡು - ಪುಟ್ಟಕಂದ || ೫ ||
( ಬೆಳಗೊಸಗೆ ಎಂಬ ದತ್ತಪದವೊಳಗೊಂಡಂತೆ ರಚಿಸಿದ ಪಂಚ ಮುಕ್ತಕಗಳು)
ವಿ.ಬಿ.ಕುಳಮರ್ವ , ಕುಂಬ್ಳೆ ✍️
ವಿಕಾಸ್ ಪಿಯು ಕಾಲೇಜ್ ಮಂಗಳೂರು#Vikaas #VikaasPUCollege #Mangalore #education #career pic.twitter.com/g5H01eE0YI
— Upayuktha News (@UpayukthaNews) August 25, 2021