ಕೊಡಗಿಗೂ ಹಬ್ಬಿದ ಬಾಕಾಹು ಘಮ
ವಿದ್ಯಾಲಯದ ಮೂಲಕ 'ಬಾಕಾಹು’ ವಿದ್ಯಾಪ್ರಸಾರ
ಕೊಡಗಿನ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಈಚೆಗೆ ವಿದ್ಯಾರ್ಥಿಗಳ ಮೂಲಕವೇ ಬಾಳೆಕಾಯಿ ಹುಡಿ ತಯಾರಿ ಕಾರ್ಯಕ್ರಮ ನಡೆಸಿತು. ಅರಣ್ಯಶಾಸ್ತ್ರ ಬಿಎಸ್ಸಿ ಕೊನೆ ವರ್ಷದ 20 ಮತ್ತು ’ರಾಷ್ಟ್ರೀಯ ಷಿ ವಿಕಾಸ ಯೋಜನೆ’ಯ ರಾಜ್ಯಾದ್ಯಂತದ 20 - ಹೀಗೆ 40 ವಿದ್ಯಾರ್ಥಿ - ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅರಣ್ಯ ಉತ್ಪನ್ನ ಮತ್ತು ಉಪಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಬಿ.ಎನ್ ಈ ತರಬೇತಿಯ ರೂವಾರಿ. ಡೀನ್ ಡಾ. ಕುಶಾಲಪ್ಪ ಅವರ ಸಕ್ರಿಯ ಬೆಂಬಲ.
ಬಳಸಿದ್ದು ಏಲಕ್ಕಿ ಬಾಳೆ. ಸತೀಶ್ ಅವರ ಪತ್ನಿ ವಚನಾ ಹೆಚ್.ಸಿ. ಅವರಿದ ಪಾಕಪ್ರಯೋಗ. ಅರ್ಧ ಪಾಲು ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು) ಸೇರಿಸಿ ಕೊಡಗಿನ ಜನಪ್ರಿಯ ಅಕ್ಕಿ ರೊಟ್ಟಿ ಮತ್ತು ನೂ(ಲ್)ಪುಟ್ಟು ತಯಾರಿ. "ಎರಡು ತಿಂಡಿಗಳಲ್ಲೂ ಕೊರತೆ ಹೇಳಲು ಏನೂ ಇಲ್ಲ. ಬಾಕಾಹು ಅಷ್ಟು ಚೆನ್ನಾಗಿ ಬ್ಲೆಂಡ್ ಆಗಿದೆ. ಬರೇ ಅಕ್ಕಿ ತಿನ್ನೋದಕ್ಕೆ ಬದಲು ಇಷ್ಟು ಪೋಷಕಾಂಶಭರಿತ ಬಾಳೆಕಾಯಿ ಸೇರಿಸುವುದು ಉತ್ತಮ ಅಲ್ಲವೇ?" ಎಂದು ಪ್ರಶ್ನಿಸುತ್ತಾರೆ ದಾವಣಗೆರೆ ಮೂಲದ ಕೊನೆ ವರ್ಷದ ವಿದ್ಯಾರ್ಥಿನಿ ಸೌಂದರ್ಯ ಆರ್.ವಿ.
ಅದೇ ವರ್ಷದ ವಿದ್ಯಾರ್ಥಿ ಶಿವಮೊಗ್ಗದ ಸುಮನ್ ಎಂ.ಡಿ.ಗೆ ಕೂಡಾ ಈ ಉಪಾಹಾರಗಳು ಮೆಚ್ಚುಗೆ ಆಗಿವೆ. ಪದವಿ ಮುಗಿಸಿ ಸೆಪ್ಟೆಂಬರಿನಲ್ಲೆ ಊರು ಸೇರುತ್ತಾರೆ. ಅಮ್ಮನನ್ನು ಎದುರಿಟ್ಟು ಬನ್ಸ್, ರೊಟ್ಟಿ ಮಾಡುವ ಪ್ಲಾನ್ ಹಾಕಿದ್ದಾರೆ. "ಬಾಳೆಹಣ್ಣು ಮಧುಮೇಹಿಗಳಿಗೆ ಆಗದು. ಬಾಕಾಹು ಬಳಸಲು ಅಡ್ಡಿಯಿಲ್ಲ ತಾನೇ. ರೈತರು ಗಾಳಿ ಮಳೆಗೆ ಬೀಳುವ ಗೊನೆಗಳ ಹುಡಿ ಮಾಡಿಟ್ಟು ಬಳಸಬಹುದು", ಸುಮನ್ ಹಾರೈಸುತ್ತಾರೆ.
ಮುಂದಿನ ಬದುಕಿಗೆ ಮಹತ್ವದ್ದಾಗಬಲ್ಲ 'ಬಾಕಾಹು ವಿದ್ಯೆ’ಯನ್ನು ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ಹಂಚಿದ ಅರಣ್ಯ ಮಹಾವಿದ್ಯಾಲಯಕ್ಕೆ ಭಲೇ ಎನ್ನಲೇಬೇಕು. ಈ ಮೂಲಕ ಈ ಕಾಲೇಜು ಉಳಿದ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಡಾ. ಸತೀಶ್ ಬಿ.ಎನ್- 98801 25962 (4- 5 PM)
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: ಬಾಕಾಹು, ಬಾಳೆ ಕಾಯಿ ಹುಡಿ, ಬಾಕಾಹು ಆಂದೋಲನ, Banana flour, Banana Powder, Bakahu, Kodagu,