ಶಿರಸಿಯ ನಂದಿಹೊಂಡದ ಮನೋರಮಾ ಜೋಷಿ ತುಂಬ ಚುರುಕು, ಕ್ರಿಯಾಶೀಲ ಗೃಹಿಣಿ.
ಈಚೆಗೆ ಉ.ಕ. ಸಾವಯವ ಒಕ್ಕೂಟದವರು ಕೇವೀಕೆ, ಕೃಷಿ ಇಲಾಖೆಗಳ ಜತೆ ಸೇರಿ ಬಾಕಾಹು ಪಾಕ ಸ್ಪರ್ಧೆ ನಡೆಸಿದ್ದರಲ್ಲಾ? ಅದರಲ್ಲಿ ಒಬ್ಬರು ತೀರ್ಪುಗಾರರು ಇವರೇ.
ಇವರು ಪ್ರದರ್ಶನಕ್ಕಾಗಿ ಮಾತ್ರ ಬಾಕಾಹು ಪಾಕಗಳನ್ನು ತಯಾರಿಸಿ ಒಯ್ದಿದ್ದರು. ರೊಟ್ಟಿ, ಇಡ್ಲಿ, ಚಟ್ನಿಪುಡಿ, ಬಾಳೆ ಪಳದ್ಯ, ರಸಂ, ಮೊಮೊ, ವಡೆ, ಕರೆ (ಕಾರ ಕಡ್ಡಿ) ರಿಬ್ಬನ್ ಪಕೋಡಾ- ಹೀಗೆ ಇನ್ನೂ ಹಲವು ತಿಂಡಿ ಮಾಡಿದ್ದರು.
ಬಾಕಾಹು ಬಗ್ಗೆ ಅಡುಗೆ ಪ್ರವೀಣೆ ಮನೋರಮಾರ ಅಭಿಪ್ರಾಯ ಹೀಗಿದೆ: "ಎಲ್ಲಾ ತಿಂಡಿಗೂ ಸೂಟ್ ಆಗುತ್ತೆ. ಜಿಗಿಯೂ ಚೆನ್ನಾಗಿ ಬರುತ್ತದೆ. ತಿಂಡಿ ಒಡೆಯುವುದು, ತುಂಡು ಆಗುವುದು ಮೊದಲಾದ ಸಮಸ್ಯೆ ಇಲ್ಲ. ಆದರೆ ಮೈದಾದ ಆಕರ್ಷಕ ಬಣ್ಣ ಇಲ್ಲ."
"ಬೇರೇನೂ ಹಿಟ್ಟು ಸೇರಿಸದೆ ಚಕ್ಕುಲಿ ಮಾಡಬಹುದು. ಹಗುರ ಮತ್ತು ಗರಿಗರಿ ಆಗಿರುತ್ತದೆ. ಬಹು ಬೇಗನೆ, ಸುಲಭವಾಗಿ ಚಕ್ಕುಲಿ ಮಾಡಿಬಿಡಬಹುದು. ಅಕ್ಕಿ /ಮೈದಾದ ಚಕ್ಕುಲಿ ಮಾಡುವುದಿದ್ದರೆ, ಜಿಗುಟು ಬರಲು ಅದಕ್ಕೆ ಆಲೂಗಡ್ಡೆ, ಕಡ್ಲೆಬೇಳೆ, ಪುಟಾಣಿ, ಸವತೆ- ಹೀಗೆ ಬೇರಾವುದೋ ಕಚ್ಚಾವಸ್ತು ಸೇರಿಸಲೇಬೇಕಾಗುತ್ತದೆ. ಬಾಕಾಹು ಸಹಜವಾಗಿಯೇ ಜಿಗುಟು ಬರುತ್ತದೆ. ಮಿಶ್ರ ಮಾಡುವ ಕೆಲಸವೇ ಬೇಡ. ಹೀಗಾಗಿ ಬಹುಬೇಗನೆ ಚಕ್ಕುಲಿ ಮಾಡಬಹುದು.ಆದರೆ ಬಣ್ಣ ಸ್ವಲ್ಪ ರಆಗಿ ಚಕ್ಕುಲಿಯಂತೆ ಕಂದು ಬರುತ್ತದೆ."
ಮನೋರಮಾ ಅವರು ಗುರುತಿಸಿದ ಇನ್ನೊಂದು ಬಾಕಾಹುವಿನ ಕ್ಷಿಪ್ರ ತಯಾರಿ ’ಮಣಿ ಪಾಯಸ’. ಸಾಮಾನ್ಯವಾಗಿ ಇದನ್ನು ಅಕ್ಕಿಯಿಂದ ಮಾಡುತ್ತಾರೆ. "ಅತಿಥಿಗಳು ಬಂದಾಗ ಮನೆಯಲ್ಲಿ ಬೇರೇನೂ ಸಾಹಿತ್ಯ ಇಲ್ಲದಿದ್ದರೆ ಇದನ್ನು ಥಟ್ಟಂತ ಮಾಡಿಬಿಡುತ್ತಾರೆ. ಬಾಕಾಹುವಿನ ಮಣಿ ಪಾಯಸ, ಒಳಗೆ ಊಟಕ್ಕೆ ತಟ್ಟೆ ಇಟ್ಟ ಮೇಲೂ ಹತ್ತೇ ನಿಮಿಷದಲ್ಲಿ ಸಿದ್ಧಮಾಡಬಹುದು" ಎನ್ನುತ್ತಾರೆ ಮನೋರಮಾ.
ತಾನು ಮೊನ್ನೆ ಶಿರಸಿಯ ಪಾಕಸ್ಪರ್ಧೆಗಾಗಿ ಮಾಡಿದ ಡಜನಿನಷ್ಟು ತಿಂಡಿಗಳಲ್ಲಿ ಇವರು ಅತ್ಯಧಿಕ ಮಾರ್ಕು ಕೊಟ್ಟದ್ದೂ ಮಣಿ ಪಾಯಸಕ್ಕೇ. ಕರೆ (ಕಾರ ಕಡ್ಡಿ) ಮತ್ತು ಚಕ್ಕೆ ಪಳದ್ಯದಂತೆಯೇ ಮಾಡುವ ಬಾಕಾಹು ಪಳದ್ಯಕ್ಕೆ ನಂತರದ, ಅಂದರೆ ಕ್ರಮವಾಗಿ ಎರಡನೆ ಮತ್ತು ಮೂರನೆಯ ಸ್ಥಾನ. ಪ್ರಯೋಗಗಳು ಮುಂದುವರಿದಿವೆ.
ಡ್ರೈಯರ್ ಇದ್ದರೂ ಬಾಳೆಕಾಯಿಯನ್ನು ಚಿಪ್ಸ್ ಮಾಡುವ ಬದಲು ಮನೋರಮಾ ವೆಜಿಟೇಬಲ್ ಕಟ್ಟರ್ ಮೂಲಕ ಶ್ರೆಡ್ (ಚೂರುಚೂರು ಮಾಡುವ ಕ್ರಿಯೆ) ಮಾಡಿದ್ದಾರೆ. "ಕೆಲಸವೂ ಸುಲಭ, ಒಣಗುವುದೂ ಬೇಗ" ಎನ್ನುತ್ತಾರೆ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ