ಚಿತ್ರ: ನಾಸಾ
ಜಗವೆಂಬ ಮಾಯಾಲೋಕದೊಳಗೆ ಮಾನವಜನ್ಮ ದೊಡ್ಡದು. ಈ ಮಾನವ ಜನುಮ ಸಾಗರದಷ್ಟೇ ವಿಶಾಲ. ಇಲ್ಲಿ ಈಜಲು ಕಲಿಯುವುದು ಅನಿವಾರ್ಯ. ಇಲ್ಲಿನ ಅದ್ಭುತಗಳನ್ನು ಅರಿಯದೆ, ಚಿಕ್ಕಪುಟ್ಟ ತೊಂದರೆಗಳಿಗೂ ಭೀತರಾಗಿ ʼಸಾಕಪ್ಪಾ ಈ ಜೀವನʼ ಎನ್ನುವವರು ದಡ್ಡರೇ ಸರಿ.
ಅಂತವರು ತೊಂದರೆಯಿಂದ ಹೊರಬರುವ ಯೋಚನೆ ಮಾಡದೆ, ಯೋಜನೆ ರೂಪಿಸಿಕೊಳ್ಳದೆ ಸುಲಭವಾಗಿ ಋಣಾತ್ಮಕ ಮನಸ್ಥಿತಿಗೆ ಜಾರಿಬಿಡುತ್ತಾರೆ. ತಮ್ಮ ಬದುಕಿಗೇ ವಿರಾಮ ಹಾಡಿಬಿಡುತ್ತಾರೆ. ನೋವಿಗೆ ಸಾವು ಶಾಶ್ವತ ಶಮನ ಎಂಬ ಅಂಧಕಾರದಲ್ಲಿ ಕೆಲವು ಮನಸ್ಸುಗಳು ನಮ್ಮ ಸುತ್ತಮುತ್ತ ಅಕ್ಕಪಕ್ಕ ಅಲೆದಾಡುವುದನ್ನು ನೀವು ಕಂಡಿರಬಹುದು. ಅಂತವರಿಗೆ ಬದುಕು ಬರಡಾಗದಂತೆ ತೋರಬಹುದು. ಆದರೆ ಬದುಕಿನಲ್ಲಿ ಬರುವ ನೀರಿನ ಸೆಲೆಗಳು ಜೀವನಕ್ಕೇ ತಿರುವಾಗಿ ನವ ಅಧ್ಯಾಯಕ್ಕೆ ಸಾಕ್ಷಿಯಾಗುತ್ತವೆ ಎಂಬುದನ್ನು ಅವರು ಅರಿಯಬೇಕಷ್ಟ ೇ.
ಗೆಳೆಯರೇ, ಸಾವು ಯಾರನ್ನೂ ಹೇಳಿ-ಕೇಳಿ ಬರುವುದಿಲ್ಲ ಸರಿ. ಆದರೆ ಸಾವು ತಾನಾಗಿ ಬರುವುದಕ್ಕೂ ಸಾವನ್ನು ನಾವೇ ಹುಡುಕಿ ಹೋಗುವುದಕ್ಕೂ ತುಂಬಾ ವ್ಯತ್ಯಾಸವಿದೆ. ಈ ಬದುಕ ಪಯಣದಲ್ಲಿ ಎದುರಾಗುವ ಸಾಲುಸಾಲು ತೊಂದರೆಗಳಿಗೆ ನಮ್ಮ ಬಳಿಯೇ ಔಷಧವಿದೆ. ತೊಂದರೆಗಳನ್ನು ಶಕ್ತಿಯಿಂದ, ಯುಕ್ತಿಯಿಂದ ಎದುರಿಸಬೇಕು. ಧೈರ್ಯವೆಂಬ ಆಯುಧದ ಸಹಾಯದಿಂದ ಎಲ್ಲವನ್ನೂ ಗೆಲ್ಲಬೇಕು. ‘ಈಸಬೇಕು, ಈಸಿ ಜಯಿಸಬೇಕುʼ ಎಂಬ ದಾಸರ ಪದ ಅದೆಷ್ಟು ಸತ್ಯ ಅಲ್ಲವೇ…
ಮಾನವ ಜನ್ಮದಲ್ಲಿ ನೋವು-ನಲಿವು ಸಹಜ. ಅದ ಅರಿತು ನಡೆಯುವವನೇ ಮನುಜ. ಬದಲಾಗಿ ಮಾನಕೆ ಅಂಜಿ ಸುಲಭವಾಗಿ ಯಾವುದಕ್ಕೂ ಸೋಲಬೇಡ. ಸೋತರೂ ಅದೇ ಅಂತ್ಯವಲ್ಲ. ಸೋಲನ್ನು ಮೆಟ್ಟಿ ನಿಂತರೆ ಅದೇ ಹೊಸದೊಂದು ಬದುಕಿನ ಸ್ಪೂರ್ತಿ ಕಥೆ. ಮನವು ಅಂಜದೆ ಅಳುಕದೆ ಇರಲಿ ಸದಾ. ನಿನ್ನ ಬದುಕ ಶಿಲ್ಪಿ ನೀನೇ ಎಂಬುದನ್ನು ಅರಿತುಕೋ. ತಪ್ಪಿದರೆ ಸರಿ ಪಡಿಸಿಕೋ. ಅದನ್ನು ಬಿಟ್ಟು ಅನ್ಯ ದಾರಿಯ ಹಿಡಿಯಬೇಡ. ಇದನರಿಯದೆ, ಜಗದ ಮಾಯೆಯ ಆಟಕ್ಕೆ ಪಾತ್ರದಾರಿ ಆಗಬೇಡ. ತಿಳಿದುಕೋ, ತಿಳಿದುಕೋ ಅನುಸರಿಸಿಕೋ...
-ಗಿರೀಶ್ ಪಿ ಎಂ
ದ್ವಿತೀಯ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ