ನಾನು ಓದಿದ ಪುಸ್ತಕ- 'ಪರಕಾಯ ಪ್ರವೇಶ'

Upayuktha
2 minute read
0

ಮೊನ್ನೆ ರಾಧಾಕೃಷ್ಣ ಕಲ್ಚಾರ್ ಅವರ "ಪರಕಾಯ ಪ್ರವೇಶ" ಓದಿ ಮುಗಿಸಿದೆ. ಇದು ನನಗೆ ಹೊಸ ಪುಸ್ತಕವಾದರೂ ಪುಸ್ತಕ ಹೊಸದಲ್ಲ. ನನಗೆ ಸಿಕ್ಕಿದ್ಧು ಎರಡನೇ ಮುದ್ರಣಗೊಂಡ  ಪುಸ್ತಕ. ಸಾಲದೆ ಇದು "ಉತ್ಥಾನ" ಮಾಸಿಕದಲ್ಲಿ ಪ್ರಕಟಗೊಂಡ ಲೇಖನಗಳ ಸಂಗ್ರಹ. ಹಾಗಾಗಿ ಈ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯ ಬರೆಯ ಬೇಕೇ ಬೇಡವೇ ಎಂಬ ದ್ವಂದ್ವ ಕಾಡತೊಡಗಿತು.


ಇಲ್ಲೊಂದು ಪ್ರಶ್ನೆಯೂ ಉದ್ಭವಿಸಿತು. ಓದಿದ ಪುಸ್ತಕದ ಬಗ್ಗೆ ಎಲ್ಲಾ ಅಭಿಪ್ರಾಯ ಬೇಕೇ?  ಅಥವಾ ಅಭಿಪ್ರಾಯ ಸೂಚಿಸುವಷ್ಟು ಉನ್ನತ ಚಿಂತನೆ ಹೊಂದಿದವನು ನಾನೇ? ಎಂದು. ಮನುಷ್ಯರಲ್ಲಿ ಭಿನ್ನ ಸ್ವಭಾವ ಸ್ವಾಭಾವಿಕ. ನಾನು ಓದಿದ ಎಲ್ಲಾ ಪುಸ್ತಕಗಳ ಬಗ್ಗೆ ಅಭಿಪ್ರಾಯ ಬರೆಯುವವನೂ ಅಲ್ಲ. ಅಷ್ಟು ಉನ್ನತ ಜ್ಞಾನ ಹೊಂದಿದವನೂ ಅಲ್ಲ. ಆದರೆ ಕೆಲವು ಪುಸ್ತಕಗಳನ್ನು ಓದಿದಾಗ ಅದು ಮನಕ್ಕೆ ತಟ್ಟುತ್ತದೆ. ಅಂತಹ ಪುಸ್ತಕಗಳ ಬಗ್ಗೆ ನನ್ನ ಸೀಮಿತ ಜ್ಞಾನದಲ್ಲಿ ಎರಡು ವಾಕ್ಯ ಬರೆಯದಿದ್ದರೆ ಅದು ಆ ಕೃತಿಗೆ ಮಾಡುವ ಅಪಚಾರವೇನೋ ಅನ್ನಿಸುವ ಸ್ವಭಾವ ನನ್ನದು. ಇನ್ಮೊಬ್ಬ ಓದಲಿ ಬಿಡಲಿ ಅದು ಅವರಿಗೆ ಸೇರಿದ್ಧು. ನನ್ನ ಅಭಿಪ್ರಾಯ ಎಲ್ಲೋ ಒಂದು ಕಡೆ ವ್ಯಕ್ತಪಡಿಸದಿದ್ದರೆ ಮನಸ್ಸಿಗೆ ಹಿಂಸೆಯಾಗುತ್ತದೆ.


ಆದ್ದರಿಂದ ಈ ಅಭಿಪ್ರಾಯ ಪ್ರಕಟಿಸುತ್ತಿದ್ದೇನೆ. ನಾನು ಯಕ್ಷಗಾನ ಪ್ರೇಮಿಗಳ ಸಾಲಿಗೆ ಸೇರಿದವನಲ್ಲ. ಯಕ್ಷಗಾನ ಆಸ್ವಾದಿಸುವುದೇ ಇಲ್ಲ ಎಂಬವನೂ ಅಲ್ಲ. ಆದ್ದರಿಂದ ಎಲ್ಲಾ ಯಕ್ಷಗಾನ ಪಾತ್ರಗಳ ಪರಿಚಯ ಕಡಮೆ. "ಪರಕಾಯ ಪ್ರವೇಶ" ಓದಿದಾಗ ಈ ಲೇಖಕ ನಿಜವಾಗಿಯೂ ಪರಕಾಯ ಪ್ರವೇಶ ವಿದ್ಯೆ ಕಲಿತಿರಬಹುದೇ ಅನ್ನಿಸಿತು. ಸಾಮಾನ್ಯ ವೈಭವೀಕರಿಸಲಾಗುವ ಪಾತ್ರಗಳನ್ನು ಬಿಟ್ಟು ಎಲ್ಲೋ ಒಮ್ಮೆ ಹೆಸರು ಬಂದು ಹೋಗುವ ಪಾತ್ರಗಳೊಳಗೆ ಅವರ ಪರಕಾಯ ಪ್ರವೇಶ ಅನನ್ಯ.


ಸುಗ್ರೀವನ ಪತ್ನಿ "ರುಮೆ" ಯ ಪಾತ್ರದೊಳಗಿನ ಪರಕಾಯ ಪ್ರವೇಶ ಅದ್ಭುತ ಪರಿಣಾಮ ಬೀರಿದೆ. ಹಾಗೆಯೇ ಅಲ್ಲಿ ಅವರು ಪರಕಾಯ ಪ್ರವೇಶ ಮಾಡಿದ ಎಲ್ಲಾ ಪಾತ್ರಗಳೂ ತಮ್ಮ ಮನ ಬಿಚ್ಚಿ ಮಾತಾಡಿದ ರೀತಿ ನಿಜವಾಗಿಯೂ ಮನ ಮುಟ್ಟಿತು. ಇದರಲ್ಲಿ ದುರ್ಯೋಧನನನ್ನು ಬಿಟ್ಟರೆ ಉಳಿದೆಲ್ಲಾ ಪಾತ್ರದಾರಿಗಳೂ ಎಲ್ಲೋ ಒಮ್ಮೆ ಕೇಳಿ ಮರೆತು ಹೋದ ಪಾತ್ರಗಳು. ಆ ಪಾತ್ರದಾರಿಗಳ ಮನ:ಸ್ಥಿತಿಯನ್ನು ಈ ವರೆಗೆ ಯಾರೂ ಊಹಿಸಿರಲಿಕ್ಕಿಲ್ಲ ಅಥವಾ ಆ ಪಾತ್ರಗಳ ಹೆಸರನ್ನು ಮತ್ತೊಮ್ಮೆ ನೆನಪಿಸಿರಲಿಕ್ಕಿಲ್ಲ. ಆದರೆ ಶ್ರೀ "ರಾಧಾಕೃಷ್ಣ ಕಲ್ಚಾರ್" ಅವರು ಅಂತಹ ಒಂದು ಪ್ರಯತ್ನ ಮಾಡಿದ್ಧು ಮಾತ್ರವಲ್ಲ ಅದರಲ್ಲಿ ಸಂಪೂರ್ಣ ಯಶಸ್ವಿಯೂ ಆಗಿದ್ದಾರೆ.


ನನ್ನ ಮನಸ್ಸಿಗೆ ಅನ್ನಿಸಿದಂತೆ ಕೌರವನ ಪಾತ್ರಕ್ಕೆ ಅವರ ಪರಕಾಯ ಪ್ರವೇಶ ಅವಶ್ಯವಿರಲಿಲ್ಲ. ಯಾಕೆಂದರೆ  ಅವನ ಮನೋಸ್ಥಿತಿಯ ಬಗ್ಗೆ ಹಲವೂ ಲೇಖನ ಓದಿದ್ದೇನೆ, ಹಲವರೂ ಬರೆದಿದ್ದಾರೆ. ಇಲ್ಲಿ ಒಂದಷ್ಟು ಭಿನ್ನ ವಾಗಿದ್ದರೂ ಸಂಪೂರ್ಣ ಪುಸ್ತಕದಲ್ಲಿ ಉಳಿದ ಪಾತ್ರಗಳಿಗೆ ಹೋಲಿಸಿದರೆ ಕೌರವ ಮಾತ್ರ ಆಗಾಗ ವಿಮರ್ಶಿಸಲ್ಪಟ್ಟ ಪಾತ್ರ. ಆದ್ದರಿಂದ ಅದರ ಅವಶ್ಯವಿಲ್ಲವಾಗಿತ್ತೇನೋ ಅನ್ನಿಸಿತು. ಹಾಗೆಂದು ಅಲ್ಲಿ ಅವರ ಪರಕಾಯ ಪ್ರವೇಶ  ಸೋತಿದೆ ಎನ್ನುತ್ತಿಲ್ಲ ನಾನು. ಅದರ ಅವಶ್ಯಕತೆ ಇತ್ತೇ ಎಂದಷ್ಟೇ ನನ್ನ ಪ್ರಶ್ನೆ.


ಚಿಕ್ಕ ಪಾತ್ರಗಳಿಗೆ ಮಹತ್ವ ಕೊಟ್ಟ ಲೇಖನ ಮಾಲಿಕೆಯಲ್ಲೊಂದು ದೊಡ್ಡ ಪಾತ್ರ ಯಾಕೆ ಬಂತೋ ಅನ್ನಿಸಿದೆಯಷ್ಟೆ. ಶಲ್ಯ ,ಸಾಲ್ವ ಇತ್ಯಾದಿತ್ಯಾದಿ ನಾಮಾಂಕಿತರ ಪಾತ್ರಗಳಿದ್ದರೂ ಅವರಾರೂ ವೈಭವೀಕರಣ ಗೊಂಡವರಲ್ಲ.  ದುರ್ಯೋಧನ ಅಂತಲ್ಲ‌ ಸಾಕಷ್ಟು ವೈಭವೀಕರಣಗೊಂಡವ.


ಈಗಾಗಲೇ ಓದಿದವರು ಇನ್ನೊಮ್ಮೆ ಮೆಲುಕು ಹಾಕುವಷ್ಟು ಉತ್ತಮದ ಲೇಖನಗಳು. ಓದದವರು ಸಾಧ್ಯ ಇದ್ದರೆ ಕೊಂಡು ಓದಬಹುದು. ಇಲ್ಲವಾದರೆ ಬೇರೆ ರೀತಿಯಲ್ಲಾದರೂ ಓದಬಹುದಾದ ಲೇಖನ ಮಾಲೆ. ಉತ್ತಮ ಪುಸ್ತಕಕ್ಕಾಗಿ ಬರೆದ "ರಾಧಾಕೃಷ್ಣ ಕಲ್ಚಾರ್" ಅವರಿಗೆ ಧನ್ಯವಾದಗಳು.


-ಎಡನಾಡು ಕೃಷ್ಣ ಮೋಹನ ಭಟ್ಟ

Key Words: Book Review, Kannada Books, ಪರಕಾಯ ಪ್ರವೇಶ, ಕನ್ನಡ ಪುಸ್ತಕ, ರಾಧಾಕೃಷ್ಣ ಕಲ್ಚಾರ್


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top