ವಿಶ್ವ ಜನಸಂಖ್ಯಾ ದಿನ – ಜುಲೈ 11: ಜನಸಂಖ್ಯೆ ಹೊರೆಯಾಗದೆ ವರವಾಗಿಸೋದು ಹೇಗೆ...?

Upayuktha
0

ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ “ವಿಶ್ವ ಜನಸಂಖ್ಯಾ ದಿನ” ಎಂದು ಆಚರಿಸಲಾಗುತ್ತದೆ. ಏರುತ್ತಿರುವ ಜನಸಂಖ್ಯೆಯಿಂದಾಗುವ ಜಾಗತಿಕ ತೊಂದರೆ, ಸಮಸ್ಯೆ ಮತ್ತು ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ದಿನಾಂಕ ಜುಲೈ 11, 1989ರಿಂದ ಜಾರಿಗೆ ತರಲಾಯಿತು. 


ಕ್ಷಣಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ ಜಾಗತಿಕವಾದ ಬಹುದೊಡ್ಡ ಸಮಸ್ಯೆ ಎಂದರೂ ತಪ್ಪಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಪ್ರತೀ ದಿನ 3,53,000 ಶಿಶುಗಳು ಜನಿಸುತ್ತವೆ. (ಪ್ರತೀ ನಿಮಿಷಕ್ಕೆ 255 ಮತ್ತು ಪ್ರತೀ ಕ್ಷಣಕ್ಕೆ 5 ಶಿಶುಗಳ ಜನನ) ಆದರೆ ಪ್ರತೀ ದಿನ ಜಾಗತಿಕವಾಗಿ 1,53,000 ವ್ಯಕ್ತಿಗಳು ಸಾವನ್ನಪ್ಪುತ್ತಾರೆ. (ಪ್ರತೀ ನಿಮಿಷಕ್ಕೆ 110 ಮತ್ತು ಪ್ರತೀ ಕ್ಷಣಕ್ಕೆ 2 ವ್ಯಕ್ತಿಗಳ ಮರಣ). ಕ್ಷಣಕ್ಷಣಕ್ಕೂ ಏರುತ್ತಿರುವ ಈ ಜನಸಂಖ್ಯೆಯನ್ನು ನಿಯಂತ್ರಿಸುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇಲ್ಲವಾದಲ್ಲಿ ಪ್ರಾಥಮಿಕ ಮೂಲಭೂತ ಅವಶ್ಯಕತೆಗಳಾದ ಅನ್ನ, ನೀರು, ವಸತಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಅವಶ್ಯಕತೆಗಳನ್ನು ಪೂರೈಸುವುದು ಕಷ್ಟವಾಗಿ, ಭೂಮಂಡಲದಲ್ಲಿ ಜೀವಿಸುವುದೇ ಅಸಾಧ್ಯವಾಗಬಹದು.


1987 ಜುಲೈ 11ರಂದು ನಮ್ಮ ವಿಶ್ವದ ಜನಸಂಖ್ಯೆ ಅಧಿಕೃತವಾಗಿ 5 ಮಿಲಿಯನ್ (500 ಕೋಟಿ) ತಲುಪಿತು. ಜನರಲ್ಲಿ ಜನಸಂಖ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಮೇರಿಕ ಆಡಳಿತ ಪರಿಷತ್ತು (UNDP) 1989ರಂದು “ವಿಶ್ವ ಜನಸಂಖ್ಯೆ ದಿನದ ಆಚರಣೆಯನ್ನು ಜಾರಿಗೆ ತಂದಿತು. 2014 ಜನವರಿ 1ರ ಅಂಕಿಅಂಶಗಳ ಪ್ರಕಾರ ವಿಶ್ವದ ಜನಸಂಖ್ಯೆ 7,137,661,030 (ಸುಮಾರು 713 ಕೋಟಿ). 2015 ಜನವರಿ 1ರ ಜನಗಣತೆಯಂತೆ ಈ ಜನಸಂಖ್ಯೆ 7,145,680,000 ಎಂದು ತಿಳಿದು ಬಂದಿದೆ. (ಸುಮಾರು ಏಳುನೂರು ಹದಿನಾಲ್ಕು ಕೋಟಿ) ಈ ಜನಸಂಖ್ಯೆಯಲ್ಲಿ ಸುಮಾರು 60 ಶೇಕಡಾ ಮಂದಿ ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ.


ವಿಶ್ವ ಜನಸಂಖ್ಯೆಯ 50 ಶೇಕಡಾ ಮಂದಿ ಚೀನಾದಲ್ಲಿ 18ಶೇಕಡಾ ಮಂದಿ ಭಾರತದಲ್ಲಿ, 12ಶೇಕಡಾ ಮಂದಿ ಆಪ್ರಿಕಾ ದೇಶದಲ್ಲಿ, 11 ಶೇಕಡಾ ಮಂದಿ  ಯುರೋಪ್ ದೇಶದಲ್ಲಿ, 8 ಶೇಕಡಾ ಮಂದಿ ಉತ್ತರ ಆಮೇರಿಕಾದಲ್ಲಿ ಮತ್ತು 5.5 ಶೇಕಡಾ ಮಂದಿ ದಕ್ಷಿಣ ಅಮೇರಿಕಾದಲ್ಲಿ ವಾಸಿಸುತ್ತಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ನಮ್ಮ ಕರ್ನಾಟಕದಲ್ಲಿ ಸುಮಾರು 6.5 ಕೋಟಿ ಜನ ಸಂಖ್ಯೆ ಇದ್ದು, ಭಾರತದ ಜನಸಂಖ್ಯೆ 140 ಕೋಟಿಗಿಂತಲೂ ಜಾಸ್ತಿಯಾಗಿವುದಂತೂ ಸತ್ಯ. ಜನಸಂಖ್ಯೆ ಜಾಸ್ತಿಯಾದಂತೆ ಮೂಲಭೂತ ಅವಶ್ಯಕತೆಗಳು ಮತ್ತು ಸೌಲಭ್ಯಗಳು ದೊರಕದಿರುವುದೇ ಬಹುದೊಡ್ಡ ವಿಪರ್ಯಾಸ. ಇದರಿಂದಾಗಿ ನೂರಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ. ಒಂದು ದೇಶದ ಪ್ರಗತಿ ಮತ್ತು ಪರಿಪೂರ್ಣ ಬೆಳವಣಿಗೆಗೆ ಮನುಷ್ಯ ಸಾಮರ್ಥ್ಯ (Man Power) ಎಷ್ಟು ಅಗತ್ಯವೋ ಅಷ್ಟೇ ರೀತಿಯಲ್ಲಿ ಏರುತ್ತಿರುವ ಜನಸಂಖ್ಯೆ ಕೂಡಾ ಬೆಳವಣಿಗೆಗೆ  ಕಡಿವಾಣ ಹಾಕುತ್ತದೆ ಎನ್ನುವುದು ವಿಪರ್ಯಾಸವಾದರೂ ನಂಬಲೇಬೇಕಾದ ಸತ್ಯ. 1987 ಜುಲೈ 11ರಂದು 500 ಕೋಟಿ ತಲುಪಿದ್ದ ವಿಶ್ವದ ಜನಸಂಖ್ಯೆ 2015ರಲ್ಲಿ ಅಂದರೆ ಕೇವಲ 28 ವರ್ಷಗಳಲ್ಲಿ ಏಳುನೂರ ಹದಿನೈದು ಕೋಟಿಗೆ ತಲುಪಿರುವುದು ಬಹಳ ಸೋಜಿಗದ ಸಂಗತಿ ಮತ್ತು ಕಡಿವಾಣ ಹಾಕದಿದ್ದಲ್ಲಿ 2050ರಲ್ಲಿ ಒಂದೂಸಾವಿರ ಕೋಟಿ ತಲುಪಿದರೂ ಆಶ್ಚರ್ಯವಲ್ಲ.  


ಜನಸಂಖ್ಯಾ ದಿನಾಚರಣೆಯ ಧ್ಯೇಯಗಳು 

1. ಯುವ ಜನರನ್ನು ರಕ್ಷಿಸಲು ಮತ್ತು ಸಬಲೀಕರಣಗೊಳಿಸಲು ಮತ್ತು ಗಂಡು ಹೆಣ್ಣಿನ ಅನುಪಾತವನ್ನು ಕಾಯ್ದುಕೊಳ್ಳುವ ಸದುದ್ದೇಶ ಹೊಂದಿದೆ.

2. ಬಾಲ್ಯ ವಿವಾಹವನ್ನು ತಪ್ಪಿಸಿ ತಮ್ಮ ಜೀವನದ ಗುರಿ ಮತ್ತು ಉದ್ದೇಶಗಳ ಬಗ್ಗೆ ಅರಿವು ಮೂಡಿಸುದಾಗಿದೆ. 

3. ಯುವ ಜನರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಸೆಕ್ಸ್ ವಿಚಾರ ಧಾರೆಯನ್ನು ಮನಗತಮಾಡುವುದಾಗಿದೆ.

4. ಲಿಂಗ ತಾರತಮ್ಯದ ಧೋರಣೆಯನ್ನು ಕಡಿಮೆ ಮಾಡುವುದು 

5. ಸಣ್ಣ ವಯಸ್ಸಿನಲ್ಲಿ ಗರ್ಭಧರಿಸದಂತೆ ಜಾಗೃತಿ ಮೂಡಿಸಲು ಮತ್ತು ಬಾಲ್ಯ ವಿವಾಹ ಮತ್ತು ಸಣ್ಣ ವಯಸ್ಸಿನಲ್ಲಿ ತಾಯಿಯಾಗುವುದಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವುದು.

6. ಅನಾರೋಗ್ಯಕರವಾದ ಸೆಕ್ಸ್‌ನಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ  ಮೂಡಿಸುವುದು.    

7. ಗಂಡು ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡದೆ ಇಬ್ಬರಿಗೂ ಪ್ರಾಥಮಿಕ ಸೌಲಭ್ಯಗಳು ಮತ್ತು ವಿದ್ಯಾಭ್ಯಾಸ ಒದಗಿಸುವ ಬಗ್ಗೆ ಮನವರಿಕೆ ಮಾಡಿಸುವುದು.

8. ಹೆಣ್ಣು ಮಗುವಿನ ಕಾನೂನು ಬಾಹಿರ ಭ್ರೂಣ ಹತ್ಯೆಯನ್ನು ನಿಲ್ಲಿಸಲು ಮತ್ತು ಗಂಡು ಹೆಣ್ಣಿನ ಸರಿಯಾದ ಅನುಪಾತ ಉಂಟಾಗಲು ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶ.  


ಕೊನೆಮಾತು:

ಭಾರತದ ಜನಸಂಖ್ಯೆ 2015ರ ಜುಲೈ ತಿಂಗಳ ಆರಂಭದಲ್ಲಿ 128 ಕೋಟಿ ತಲುಪಿತ್ತು. 1950ರಲ್ಲಿ 40 ಕೋಟಿಯಷ್ಟಿದ್ದ ಜನಸಂಖ್ಯೆ 2000 ಇಸವಿಯ ಹೊತ್ತಿಗೆ 100 ಕೋಟಿಯನ್ನು ದಾಟಿತ್ತು. ಇದೇ ವೇಗದಲ್ಲಿ ಮುನ್ನಡೆದರೆ 2050ರ ಹೊತ್ತಿಗೆ ಭಾರತದ ಜನಸಂಖ್ಯೆ 170 ಕೋಟಿ ತಲುಪಿದರೂ ಆಶ್ಚರ್ಯವೇನಲ್ಲ. ಜನಸಂಖ್ಯೆಯ ಆಧಾರದಲ್ಲಿ ಭಾರತಕ್ಕೆ ಚೀನಾದ ನಂತರದ 2ನೇ ಸ್ಥಾನ ದೊರಕಿದೆ. 2025ರ ಹೊತ್ತಿಗೆ ಭಾರತ ಚೀನಾ ದೇಶವನ್ನು ಹಿಂದಿಕ್ಕಿ  ಜನಸಂಖ್ಯೆಯ ಆಧಾರದಲ್ಲಿ ಒಂದನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸಂತಸದ ವಿಚಾರವೆಂದರೆ ಈ ಜನಸಂಖ್ಯೆಯ ಶೇಕಡಾ 50 ಮಂದಿ 25 ವರ್ಷಗಳಿಗಿಂತ ಕೆಳಗಿನವರು ಮತ್ತು 65 ಶೇಕಡಾ ಮಂದಿ 35 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. 2020ರಲ್ಲಿ ಸರಾಸರಿ ಭಾರತೀಯ ಪ್ರಜೆಯ ವಯಸ್ಸು 29 ಆಗಿರುವುದು ಸಮಾಧಾನಕರ ಅಂಶ. (ಸರಾಸರಿ ಚೀನಾ ಪ್ರಜೆಯ ವಯಸ್ಸು 37 ಮತ್ತು ಜಪಾನ್ ದೇಶದ ಸರಾಸರಿ ವಯಸ್ಸು 48).


ಭಾರತದ ಈ ಯುವಶಕ್ತಿಯನ್ನು ಸದುಪಯೋಗ ಪಡಿಸಿಕೊಂಡಲ್ಲಿ ಮಾತ್ರ ಭಾರತ ದೇಶ ವಿಶ್ವದ ಹಿರಿಯಣ್ಣನಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ. 750ಕೋಟಿ ಜಾಗತಿಕ ಜನಸಂಖ್ಯೆಯಲ್ಲಿ ಸುಮಾರು 180 ರಿಂದ 200 ಕೋಟಿ ಮಂದಿ ಯುವ ಜನಾಂಗಕ್ಕೆ ಸೇರಿರುತ್ತಾರೆ. ಈ ಯುವಕ ಯುವತಿಯರು ತಮ್ಮ ಜವಾಬ್ದಾರಿ ಅರಿತು ಜನಸಂಖ್ಯೆ ಸ್ಪೋಟದಿಂದಾಗುವ ದುಷ್ಪರಿಣಾಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದಲ್ಲಿ ಬಹುತೇಕ ಜಾಗತಿಕ ತೊಂದರೆಗಳಾದ ಬಡತನ, ಅನಕ್ಷರತೆ, ಅಜ್ಞಾನ, ಅನಾರೋಗ್ಯ, ಅತ್ಯಾಚಾರ, ಅಸುರಕ್ಷಿತ ಜೀವನಶೈಲಿ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.


ಅತೀ ತುರ್ತು ಜನಸಂಖ್ಯಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವಕರು ಮತ್ತು ಯುವತಿಯರು ಕುಟುಂಬ  ನಿಯಂತ್ರಣ ಯೋಜನೆ, ಸುರಕ್ಷಿತವಾದ ಸೆಕ್ಸ್, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಲಿಂಗ ತಾರತಮ್ಯದ ವಿರೋಧಿಸುವಿಕೆ, ತಾಯಿ ಮತ್ತು ಮಗುವಿನ ಆರೋಗ್ಯ, ಬಡತನ, ಮಾನವನ ಹಕ್ಕುಗಳು ಮತು ಆರೋಗ್ಯದ ಹಕ್ಕು ಇತ್ಯಾದಿಗಳ ಬಗ್ಗೆ ಹೆಚ್ಚು  ನಿಗಾ ವಹಿಸಿದಲ್ಲಿ ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜನಸಂಖ್ಯಾ ಸ್ಪೋಟಗೊಂಡು ತುತ್ತು ಕೂಳಿಗೂ ತತ್ವಾರವಾಗಿ, ಮೂರು ಹೊತ್ತಿನ ಊಟಕ್ಕೂ ಜಗಳವಾಡಬೇಕಾದ ದುಸ್ಥಿತಿ ಬರಲೂಬಹುದು. ಪ್ರತಿಯೊಬ್ಬ ಪ್ರಜೆಯು ತನ್ನ ಜವಾಬ್ದಾರಿಯನ್ನು ಅರಿತು ಸೂಕ್ತವಾಗಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಅದರಲ್ಲಿಯೇ ನಮ್ಮೆಲ್ಲರ ಒಳಿತು ಮತ್ತು ಜಗತ್ತಿನ ಹಿತ ಅಡಗಿದೆ.


ಈ ನಮ್ಮ ಭೂಮಿ ಬರೀ ಮನುಷ್ಯನಿಗೆ ಆಶ್ರಯ ನೀಡುತ್ತಿಲ್ಲ, ಲಕ್ಷಾಂತರ ಇತರ ಜೀವ ಪ್ರಭೇದಗಳಿಗೂ ಆಶ್ರಯ ನೀಡುತ್ತದೆ. ಅತಿಯಾದ ಜನಸಂಖ್ಯೆಯ ಹೆಚ್ಚಳದಿಂದ ಇತರ ಜೀವ ಸಂಕುಲಗಳ ನಾಶಕ್ಕೆ ನಾಂದಿ ಹಾಡುತ್ತಿದೆ. ಪ್ರತಿ ನಾಲ್ಕು ಘಂಟೆಗಳಿಗೆ ಒಂದು ಜೀವ ಪ್ರಭೇದ ಭೂಮಂಡಲದಿಂದ ಕಣ್ಮರೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಮಾನವನೇ ಆಗಿರುತ್ತಾನೆ. ಇದರ ಜೊತೆಗೆ ಅಗಾಧ ಜನಸಂಖ್ಯೆಯ ಕಾರಣದಿಂದ ಸಾಂಕ್ರಾಮಿಕ ರೋಗಗಳೂ ಶೀಘ್ರವಾಗಿ ಹರಡುತ್ತಿದೆ. ಈಗ ವಿಶ್ವದಾದ್ಯಂತ ತನ್ನ ರುದ್ರನರ್ತನವನ್ನು ಮಾಡಿ ಮನುಕುಲವನ್ನು ಹೈರಾಣಾಗಿಸಿರುವ ಕೋವಿಡ್-19 ವೈರಾಣು ಜ್ವರ ಇದಕ್ಕೆ ಬಹಳ ಉತ್ತಮ ಉದಾಹರಣೆ. ಈಗಾಗಲೇ 3.5 ಕೋಟಿ ಜನರು ಈ ರೋಗದಿಂದಾಗಿ ಮರಣವನ್ನಪ್ಪಿದ್ದಾರೆ. ಇನ್ನೂ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಇನ್ನೂ ಮೂರ್ನಾಲ್ಕು ಕೋಟಿ ಜನ ಜೀವ ಕಳೆದುಕೊಳ್ಳಲಿದ್ದಾರೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಒತ್ತಡದ ಜೀವನ ಶೈಲಿಯಿಂದಾಗಿ ಪುರುಷರಲ್ಲಿ ಬಂಜೆತನ ಜಾಸ್ತಿಯಾಗುತ್ತಿದೆ. ಪ್ರತಿ ದಿನ ಅಪೌಷ್ಠಿಕತೆಯಿಂದಾಗಿ 30 ಲಕ್ಷ ಮಕ್ಕಳು ಮತ್ತು 15 ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದಿರುತ್ತದೆ. ಒಟ್ಟಿನಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದ್ದರೆ ಮಾತ್ರ ಸಂಪನ್ಮೂಲಗಳ ಸರಿಯಾದ ಹಂಚಿಕೆಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಅದೇ ರೀತಿ ಆರೋಗ್ಯ, ಶಿಕ್ಷಣ, ವಸತಿ ಮತ್ತು ಇನ್ನಿತರ ಮೂಲಭೂತ ಸೌಲಭ್ಯ ಯಾವುದೇ ಪೈಪೋಟಿ ಇಲ್ಲದೆ ಎಲ್ಲರಿಗೂ ಸಿಗಬೇಕಾದಲ್ಲಿ ಜನಸಂಖ್ಯೆಯ ನಿಯಂತ್ರಣ ಆಗಲೇಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಚಿಂತಿಸಿ ಮಂಥಿಸಿ ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಲ್ಲಿ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣ ಸಾಧ್ಯವಿದೆ.


-ಡಾ|| ಮುರಲೀ ಮೋಹನ್ ಚೂಂತಾರು 

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 09845135787


Key Words: World Population Day, ವಿಶ್ವ ಜನಸಂಖ್ಯಾ ದಿನ, 

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top